ಅಮ್ಮನ ಅಂತ್ಯಕ್ರಿಯೆ ಮಾಡಲು ಹಣ ಇಲ್ಲ ಎಂದು ನೊಂದ ಮಗ ಆತ್ಮಹತ್ಯೆಗೆ ಶರಣು!

jharkhand
27/06/2021

ರಾಂಚಿ: ಇದ್ದ ಹಣವನ್ನೆಲ್ಲ ತಾಯಿಯ ಚಿಕಿತ್ಸೆಗಾಗಿಯೇ ಖರ್ಚು ಮಾಡಿದರೂ, ತಾಯಿ ಬದುಕಲಿಲ್ಲ. ಕೊನೆಗೆ ತಾಯಿಯ ಅಂತ್ಯಸಂಸ್ಕಾರ ನಡೆಸಲು ಪುತ್ರನ ಬಳಿ ಬಿಡಿಗಾಸೂ ಇರಲಿಲ್ಲ. ಇದರಿಂದ ಮನನೊಂದ ಆತ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಜಾರ್ಖಂಡ್ ನ ದಿಯೋಘರ್ ಜಿಲ್ಲೆಯ ಜಾಸಿಡಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ಚಾರ್ಕಿ ಪಹಾರಿ ಗ್ರಾಮದಲ್ಲಿ ಈ ಹೃದಯ ವಿದ್ರಾವ ಘಟನೆ ನಡೆದಿದ್ದು,  ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ ಪುತ್ರ ಕಿಶನ್ ತನ್ನ ಬಳಿಯಿದ್ದ ಹಣವನ್ನು ಚಿಕಿತ್ಸೆಗೆ ವಿನಿಯೋಗಿಸಿದ್ದ. ಇಷ್ಟು ಕಷ್ಟಪಟ್ಟರೂ, ತಾಯಿಯನ್ನು ಉಳಿಸಿಕೊಳ್ಳಲಾಗಲಿಲ್ಲ.

ತಾಯಿ ಮೃತಪಟ್ಟ ಬಳಿಕ ಆಕೆಯ ಅಂತ್ಯಸಂಸ್ಕಾರ ನೆರವೇರಿಸೋಣ ಎಂದರೆ, ಆತನ ಕೈಯಲ್ಲಿ ಏನೂ ಉಳಿದಿರಲಿಲ್ಲ. ಇದರಿಂದ ನೊಂದ ಆತ ತನ್ನ ಮನೆಯ ಕೋಣೆಗೆ ತೆರಳಿ ಅಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ತನ್ನ ಅತ್ತೆ ಹಾಗೂ ಗಂಡನನ್ನು ಕಳೆದುಕೊಂಡ ಪತ್ನಿಯ ಸ್ಥಿತಿಯನ್ನು ಹೇಳತೀರದು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಹಿತಿ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version