ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ: ಸಹಕಾರ ಸಂಘಕ್ಕೆ 43.36 ಲಕ್ಷ ಲಾಭ - Mahanayaka
6:10 AM Wednesday 23 - October 2024

ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ: ಸಹಕಾರ ಸಂಘಕ್ಕೆ 43.36 ಲಕ್ಷ ಲಾಭ

banakal
22/09/2023

ಕೊಟ್ಟಿಗೆಹಾರ: ಬಣಕಲ್ ಕೃಷಿ ಪತ್ತಿನ ಸಹಕಾರ ಸಹಕಾರ ಸಂಘಕ್ಕೆ 2022 -23ನೇ ಸಾಲಿನಲ್ಲಿ ರೂ 43.36 ಲಕ್ಷ ನಿವ್ವಳ ದೊರೆತಿದೆ ಎಂದು ಅಧ್ಯಕ್ಷ ಟಿ.ಎಂ.ಗಜೇಂದ್ರಗೌಡ ಹೇಳಿದರು.

ಬಣಕಲ್ ಚರ್ಚ್ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 47ವರ್ಷಗಳ ಸುದೀರ್ಘ ಅವಧಿಯಲ್ಲಿ ಸಂಘವು ಮುನ್ನಡೆಯುತ್ತಾ ಬಂದು ಪ್ರಗತಿ ಪಥದಲ್ಲಿ ಸಾಗಿದೆ. ಸಂಘದಲ್ಲಿ 1978 ಜನ ಸದಸ್ಯರಿಗೆ 32ಕೋಟಿ 72 ಲಕ್ಷ ಕೃಷಿ ಮತ್ತು ಕೃಷಿಯೇತರ ಸಾಲವನ್ನು ನೀಡಲಾಗಿದೆ. ಸಂಘವು 16 ವರ್ಷಗಳಿಂದ ಲೆಕ್ಕ ಪರಿಶೋಧನೆಯಲ್ಲಿ ಎ’ ತರಗತಿ ಶ್ರೇಣಿಯೊಂದಿಗೆ ಉತ್ತಮ ಸಾಧನೆ ಮಾಡಿದೆ. ಕೊಟ್ಟಿಗೆಹಾರದಲ್ಲಿ ನೂತನ ಆಹಾರ ಧಾನ್ಯ ಮಾರಾಟ ಮಾಡುವ ಮಳಿಗೆಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಎರಡು ತಿಂಗಳಿನಲ್ಲಿ ಉದ್ಘಾಟನೆಯಾಗಲಿದೆ. 2022-23 ಅವಧಿಗೆ ಸಂಘವು 2795 ಸದಸ್ಯರ ಸಂಖ್ಯೆ ಹೆಚ್ಚಾಗಿದೆ. ಸರ್ಕಾರವು ರೂ. 5 ಲಕ್ಷದವರೆಗೆ ಶೂನ್ಯ ಬಡ್ಡಿಯಲ್ಲಿ ಬೆಳೆ ಸಾಲ ನೀಡಲು ಘೋಷಣೆ ಮಾಡಿದೆ. ಆದೇಶವು ನಮಗೆ ಬಂದಿದೆ. ರೈತರಿಗೆ ಶೇ10 ಡಿವಿಡೆಂಟ್ (ಲಾಭಾಂಶ)ನೀಡುತ್ತೇವೆ. ನಮ್ಮ ಸಂಘದ ಮೇಲ್ಭಾಗದಲ್ಲಿ ನೂತನ ಸಭಾಂಗಣ ನಿರ್ಮಿಸಲು ಸರ್ವ ಸದಸ್ಯರ ದಾನಿಗಳ ಸಹಕಾರವಿದ್ದರೆ, ಕಟ್ಟಡ ನಿರ್ಮಾಣ ಸುಗಮವಾಗಲಿದೆ’ ಎಂದರು.

ಜಿಲ್ಲಾ ಸಹಕಾರ ಸಂಘದ ನಿರ್ದೇಶಕ ಹಳಸೆ ಶಿವಣ್ಣ ಮಾತನಾಡಿ, ‘ಸಹಕಾರ ಸಂಘವು ಲಾಭ ಹೊಂದಿದ್ದು, ಸಂಘದಲ್ಲಿ ನಂಬಿಕೆ ಉಳಿಸಿಕೊಂಡು ರೈತರು ವ್ಯವಹಾರ ಮಾಡಬೇಕು. ಸಂಘವು ಮೂಲಭೂತ ಸೌಕರ್ಯಕ್ಕೂ ಸಾಲ ನೀಡುತ್ತಿದೆ. ಸರ್ವ ಸದಸ್ಯರ ಶ್ರಮದಿಂದ ಸಹಕಾರ ಸಂಘ ಅಭಿವೃದ್ದಿ ಹೊಂದಿದೆ. ಮೇಲಿನಿಂದ ಅನುದಾನ ನೀಡಲು ಸಹಕಾರ ನೀಡಲಾಗುವುದು’ಎಂದರು.

ಸಂಘದ ನಿರ್ದೇಶಕ ಬಿ.ಎಂ.ಭರತ್ ಮಾತನಾಡಿ ‘ಸಂಘ ಅಭಿವೃದ್ಧಿಯಾಗಬೇಕಾದರೆ ಸಂಘದ ಸದಸ್ಯರ ಸಹಕಾರ ಮುಖ್ಯವಾಗಿದೆ. ರೈತರು ಹೂಡಿಕೆ ಮಾಡುವ ಮೂಲಕ ವಿವಿಧ ಸೌಲಭ್ಯ ಪಡೆದುಕೊಳ್ಳಿ’ಎಂದರು.
ಕಾರ್ಯಕ್ರಮದಲ್ಲಿ ಎ.ಆರ್ .ಅಭಿಲಾಷ್ ಮಾತನಾಡಿ’ ನಮ್ಮ ಸಂಘದಲ್ಲಿ ಕಳಪೆ ಮಟ್ಟದ ಗೊಬ್ಬರ ಮಾರಾಟ ಮಾಡುವುದಿಲ್ಲ.ಸ್ಟಾಕ್ ನಿಂದ ಗೊಬ್ಬರ ಸ್ವಲ್ಪ ಹೊಸ ಬ್ಯಾಗ್ ಗಳಿಂದ ಗೊಂದಲವಾಗಿರಬಹುದು.ರೈತರು ಎನೇ ದೂರಿದ್ದರೂ ನೇರವಾಗಿ ಸಂಘದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬಹುದು’ಎಂದರು.

ಸಂಘದ ವಾರ್ಷಿಕ ಅಡಳಿತ ವರದಿಯನ್ನು ಮುಖ್ಯ ಕಾರ್ಯನಿರ್ವಾಹಕ ಜಿ.ಪಿ.ನಿಶಾಂತ್ ಮಂಡಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಬಿ.ಎಸ್.ವಿಕ್ರಂ, ಬಿ.ಶಿವರಾಮಶೆಟ್ಟಿ,ಬಿ.ಕೆ.ಪ್ರಥ್ವಿ, ರಮೇಶ್ ಗುಡ್ಡಹಟ್ಟಿ,ದಿಲ್ ದಾರ್ ಬೇಗಂ ಮಾತನಾಡಿದರು.ಸಮಾರಂಭದಲ್ಲಿ ಉಪಾಧ್ಯಕ್ಷೆ ಎಚ್.ಕೆ.ಮಮತ, ಅಭಿಲಾಷ್, ರಂಗನಾಥ್, ಬಿ.ಎಸ್.ಕಲ್ಲೇಶ್,ಶಾಮಣ್ಣ ಬಣಕಲ್, ಜಿ.ಬಿ.ಲಕ್ಷ್ಮಿ, ಆರ್.ಚಂದ್ರಶೇಖರ್, ಕೆ.ಪಿ.ರಮೇಶ್, ಬಿ.ಎಲ್.ಅಶ್ವತ್ಥ್, ಬಿ.ಎಸ್.ನಾರಾಯಣ್,ಬಿ.ಎ.ಪ್ರದೀಪ್,ಎ.ಬಿ.ನಾಗೇಶ್ ಗೌಡ,ಬಿ.ಎಂ.ಸತೀಶ್ ,ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಯು.ಸಿ.ಪ್ರಯಾಗ್ ಹಾಗೂ ಸರ್ವ ಸದಸ್ಯರು ಇದ್ದರು.

ಇತ್ತೀಚಿನ ಸುದ್ದಿ