ರಾಜಕೀಯ ಗಲಾಟೆ: ಅರವಿಂದ್ ಕೇಜ್ರಿವಾಲ್ ಅವ್ರೇ ದೆಹಲಿ ಮದ್ಯ ನೀತಿ ಹಗರಣದ ಕಿಂಗ್ ಪಿನ್ ಎಂದ ಬಿಜೆಪಿ..!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ, ಕೇಜ್ರಿವಾಲ್ ಅವ್ರೇ ಮದ್ಯ ನೀತಿ ಹಗರಣದ ಕಿಂಗ್ ಪಿನ್ ಎಂದು ಆರೋಪಿಸಿದೆ. ದೆಹಲಿ ಮದ್ಯ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಸಂಸದ ಸಂಜಯ್ ಸಿಂಗ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ನಂತರ ಬಿಜೆಪಿ ಈ ರೀತಿ ಪ್ರತಿಕ್ರಿಯೆ ನೀಡಿದೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಪಕ್ಷದ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ದೆಹಲಿ ಅಬಕಾರಿ ನೀತಿ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ದಿನೇಶ್ ಅರೋರಾ ಅವರು ಸಂಜಯ್ ಸಿಂಗ್ ಅವರ ಸಮ್ಮುಖದಲ್ಲಿ ಕೇಜ್ರಿವಾಲ್ ಅವರಿಗೆ ತಮ್ಮ ನಿವಾಸದಲ್ಲಿ ಚೆಕ್ ಮೂಲಕ 32 ಲಕ್ಷ ರೂ.ಗಳನ್ನು ಪಾವತಿಸಿದ್ದಾರೆ ಎಂದು ತನಿಖಾ ಸಂಸ್ಥೆಗೆ ತಿಳಿಸಿದ್ದರು ಎಂದು ಹೇಳಿದ್ದಾರೆ. “ಪಕ್ಷದ ನಿಧಿಗೆ ಪಾವತಿಸುವಂತೆ ಸಭೆಯಲ್ಲಿ ಸಂಜಯ್ ಸಿಂಗ್ ಕೇಳಿದಾಗ ಕೇಜ್ರಿವಾಲ್ ಅವರಿಗೆ ಚೆಕ್ ಮೂಲಕ 32 ಲಕ್ಷ ರೂ.ಗಳನ್ನು ಲಂಚವಾಗಿ ನೀಡಿದ್ದಾಗಿ ಅರೋರಾ ಒಪ್ಪಿಕೊಂಡಿದ್ದಾರೆ” ಎಂದು ಭಾಟಿಯಾ ಹೇಳಿದ್ದಾರೆ.
ಕೇಜ್ರಿವಾಲ್ ಒಬ್ಬ ಪಾಪಿ ಜೊತೆಗೆ ಮದ್ಯ ಹಗರಣದ ಕಿಂಗ್ ಪಿನ್ ಎಂದು ಅವರು ಹೇಳಿದ್ದಾರೆ. ಎಎಪಿ ಮುಖ್ಯಸ್ಥರ ಎಡಗೈಯಾಗಿ ಸಿಂಗ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. “ಅವರ ಬಲಗೈ ಬಂಟ ಮನೀಶ್ ಸಿಸೋಡಿಯಾ ಕಳೆದ ಹಲವಾರು ತಿಂಗಳುಗಳಿಂದ ಜೈಲಿನಲ್ಲಿದ್ದಾರೆ. ಕೇಜ್ರಿವಾಲ್ ಅವರ ಎಡಗೈ ಮತ್ತು ಬಲಗೈ ಎರಡೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿವೆ. ಕೇಜ್ರಿವಾಲ್ ಅವರು ತಮ್ಮ ಬೊಕ್ಕಸವನ್ನು ತುಂಬಲು ತಮ್ಮ ಸಂಸದರು ಮತ್ತು ಸಚಿವರನ್ನು ಭ್ರಷ್ಟಾಚಾರ ಮಾಡಲು ಒತ್ತಾಯಿಸುತ್ತಿದ್ದಾರೆ” ಎಂದು ಭಾಟಿಯಾ ಆರೋಪಿಸಿದ್ದಾರೆ.