ಅಸಮಾಧಾನ ಇದ್ರೆ ದೆಹಲಿಗೆ ಹೋಗಿ ಪರಿಹರಿಸಿಕೊಳ್ಳಿ | ಅತೃಪ್ತ ಶಾಸಕರಿಗೆ ಯಡಿಯೂರಪ್ಪ ಖಡಕ್ ನುಡಿ
14/01/2021
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಬಿಜೆಪಿಯೊಳಗೆ ಅಸಮಾಧಾನದ ಹೊಗೆಯಾಡುತ್ತಿದ್ದು, ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ, ಅತೃಪ್ತ ಶಾಸಕರ ವಿರುದ್ಧ ಖಡಕ್ ನುಡಿಗಳನ್ನಾಡಿದ್ದು, ಅಸಮಾಧಾನ ಇದ್ರೆ… ದೆಹಲಿಗೆ ಹೋಗಿ ಪರಿಹರಿಸಿಕೊಳ್ಳಿ ಎಂದು ಹೇಳಿದ್ದಾರೆ.
ಇಂದು ಸಿಎಂ ತಮ್ಮ ನಿವಾಸದ ಬಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಅಸಮಾಧಾನ ಇದ್ದವರು ಬೇಕಾದ್ರೆ ದೆಹಲಿಗೆ ಹೋಗಿ ವರಿಷ್ಠರ ಜೊತೆಗೆ ಮಾತನಾಡಬಹುದು. ಇದಕ್ಕೆ ನನ್ನ ಅಭ್ಯಂತರ ಏನೂ ಇಲ್ಲ. ಆದ್ರೇ ಸಚಿವ ಸ್ಥಾನ ಸಿಗಲಿಲ್ಲ ಎಂದು ಅಸಮಾಧಾನದಿಂದ ಹಗುರವಾಗಿ ಮಾತನಾಡೋದು ಬೇಡ ಎಂದು ಅವರು ಹೇಳಿದರು.
ಸಚಿವ ಸ್ಥಾನ ಸಿಗಲಿಲ್ಲ ಎಂದು ಸುಖಾ ಸುಮ್ಮನೆ ಮಾತನಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವನ್ನು ಶಾಸಕರು ಮಾಡಬಾರದು, ಯಾವುದೇ ಶಾಸಕರು ವಿರೋಧ ಇದ್ರೆ ದೆಹಲಿಗೆ ಹೋಗಲಿ. ದೂರು ಕೊಡಲಿ. ವರಿಷ್ಠರು ಸರಿ ತಪ್ಪು ಯಾವುದು ಅಂತ ನಿರ್ಧಾರ ತೆಗೆದುಕೊಳ್ಳಲಿ ಎಂದು ವರಿಷ್ಠರ ತಲೆಗೆ ಯಡಿಯೂರಪ್ಪ ಭಾರ ಹಾಕಿದ್ದಾರೆ.