ಆಗಸ್ಟ್ 23 ರಾಷ್ಟ್ರೀಯ ಬಾಹ್ಯಾಕಾಶ ದಿನ, ವಿಕ್ರಮ್ ಲ್ಯಾಂಡರ್ ಇಳಿದ ಜಾಗಕ್ಕೆ ಶಿವಶಕ್ತಿ ಎಂದು ನಾಮಕರಣ
ಬೆಂಗಳೂರು: ಚಂದ್ರಯಾನ–3 ವಿಕ್ರಮ್ ಲ್ಯಾಂಡರ್ ಅನ್ನು ಇದೇ ಆಗಸ್ಟ್ 23 ರಂದು ಇಸ್ರೋ ಚಂದ್ರನ ಅಂಗಳಕ್ಕೆ ಯಶಸ್ಚಿಯಾಗಿ ಇಳಿಸಿ ಐತಿಹಾಸಿಕ ಸಾಧನೆ ಬರೆದ ಹಿನ್ನಲೆಯಲ್ಲಿ ಇನ್ನುಮುಂದೆ ಈ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಕರೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಚಂದ್ರಯಾನ-3 ರ ಯಶಸ್ಸಿಗೆ ಕಾರಣರಾದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿ ಮಾತನಾಡಿ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಜಾಗಕ್ಕೆ ಶಿವಶಕ್ತಿ ಎಂದು ಹಾಗೂ ಚಂದ್ರಯಾನ -2 ಪತನವಾದ ಜಾಗಕ್ಕೆ ತಿರಂಗ ಎಂಬ ಹೆಸರನ್ನು ನಾಮಕರಣ ಮಾಡಿದರು.
ಚಂದ್ರಯಾನ-3 ಮಿಷನ್ನ ಯಶಸ್ಸಿನ ಬಳಿಕ ಖಾಸಗಿ ಬಾಹ್ಯಾಕಾಶ ಉಡಾವಣೆಗಳು ಮತ್ತು ಸಂಬಂಧಿತ ಉಪಗ್ರಹ ಆಧಾರಿತ ವ್ಯವಹಾರಗಳಲ್ಲಿ ಹೂಡಿಕೆಯನ್ನು ಉತ್ತೇಜಿಸಲಿದೆ. ಈ ಮೂಲಕ ಕೇಂದ್ರದ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚಂದ್ರಯಾನ-3ರ ಯಶಸ್ಸಿನಿಂದಾಗಿ ಸ್ಥಳೀಯ ಉತ್ಪಾದನೆಗಳ ಶಕ್ತಿ ಪ್ರದರ್ಶನವಾಗಿದೆ. ಇದರಿಂದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸಲು ಸಹಕಾರಿಯಾಗಿದೆ. ಅಲ್ಲದೇ ಮಹಿಳಾ ವಿಜ್ಞಾನಿಗಳು ಚಂದ್ರಯಾನ-3 ರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.