ಹೃದಯಾಘಾತ ತಪ್ಪಿಸಲು ಅತಿಯಾದ ದೈಹಿಕ ಚಟುವಟಿಕೆಯಿಂದ ದೂರವಿರಿ: ಕೋವಿಡ್ ಬಾಧಿತರಿಗೆ ಕೇಂದ್ರ ಆರೋಗ್ಯ ಸಚಿವ ಸಲಹೆ
ನವದೆಹಲಿ: ಅತಿಯಾದ ದೈಹಿಕ ಚಟುವಟಿಕೆಯಿಂದ ಹಾಗೂ ಅತಿಯಾದ ವ್ಯಾಯಾಮಗಳಿಂದ ಕೋವಿಡ್ನಿಂದ ತೀವ್ರ ಭಾದಿತರಾದವರು ದೂರ ಇರುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸಲಹೆ ನೀಡಿದ್ದಾರೆ.
ಕೋವಿಡ್ ಭಾದಿತರು ಅತಿಯಾದ ವ್ಯಾಯಾಮಗಳಿಂದ ದೂರ ಇರುವುದರಿಂದ ಹೃದಯಾಘಾತಗಳನ್ನು ತಪ್ಪಿಸಬಹುದು ಎಂದು ಅವರು ಹೇಳಿದ್ದಾರೆ.
ಕೋವಿಡ್ ಲಸಿಕೆಯಿಂದ ದೇಶದಲ್ಲಿ 18 ರಿಂದ 45 ವರ್ಷದ ವಯೋಮಾನದವರಲ್ಲಿ ಹಠಾತ್ ಸಾವಿನ ಅಪಾಯದ ಸಾಧ್ಯತೆ ಹೆಚ್ಚಿಲ್ಲ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ನ (ಐಸಿಎಂಆರ್) ಅಧ್ಯಯನ ಹೇಳಿರುವುದಕ್ಕೆ ಪ್ರತಿಕ್ರಿಯೆಯಾಗಿ ಮಾಂಡವೀಯ ಅವರು ಗುಜರಾತ್ ನ ಭಾವ್ ನಗರದಲ್ಲಿ ಈ ಹೇಳಿಕೆ ನೀಡಿದ್ದಾರೆ.
‘ಕೋವಿಡ್ನಿಂದ ಬಾಧಿತರಾಗಿದ್ದವರು ಕನಿಷ್ಠ ಒಂದೆರಡು ವರ್ಷ ಅತಿಯಾದ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದಿತ್ತು. ಇದರಿಂದ ಹಠಾತ್ ಹೃದಯಾಘಾತ ಹಾಗೂ ಹೃದಯಸ್ತಂಭನ ತಪ್ಪಿಸಬಹುದಿತ್ತು’ ಎಂದು ಹೇಳಿದ್ದಾರೆ.
ಕೊರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದಕ್ಕೂ ಮೊದಲು ಅತಿಯಾದ ಕುಡಿತ ಹಾಗೂ ಅತಿಯಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇ ಅವರ ಸಾವಿಗೆ ಮೂಲ ಕಾರಣವಾಗಿದೆ ಎಂದು ಐಸಿಎಂಆರ್ ಅಧ್ಯಯನ ಹೇಳಿದೆ.
‘ಈ ಅಧ್ಯಯನದ ವರದಿಯು ಪರಿಶೀಲನೆಯಲ್ಲಿದ್ದು, ಇನ್ನಷ್ಟೆ ಪ್ರಕಟವಾಗಬೇಕಾಗಿದೆ. ಅಧ್ಯಯನ ಪ್ರಕ್ರಿಯೆಯು ಇದೇ ತಿಂಗಳು ಪೂರ್ಣಗೊಂಡಿದೆ’ ಎಂದು ಮೂಲಗಳು ತಿಳಿಸಿವೆ.