ಬಾಬಾಸಾಹೇಬ್ ಅಂಬೇಡ್ಕರ್ ರ ಕೊನೆಯ ಸಂದೇಶ - Mahanayaka
9:57 AM Friday 20 - September 2024

ಬಾಬಾಸಾಹೇಬ್ ಅಂಬೇಡ್ಕರ್ ರ ಕೊನೆಯ ಸಂದೇಶ

raghottama hoba
06/12/2021

  • ರಘೋತ್ತಮ ಹೊ.ಬ.

(ಈ ಲೇಖನ ನನ್ನ “ಅಂಬೇಡ್ಕರ್ ಎಂಬ ಕರಗದ ಬಂಡೆ” ಕೃತಿಯಲ್ಲಿ ಪ್ರಕಟವಾಗಿದೆ)

ನಿಜ, ಇಂತಹದನ್ನು ಬರೆಯಲು ಕೈಗಢಗಢ ಎಂದು ನಡುಗುತ್ತದೆ. ಬಾಬಾಸಾಹೇಬರ ಕೊನೆಯ ಸಂದೇಶ ಎಂದು ಹೇಳಲು ಮೈ ಬೆವರುತ್ತದೆ. ಯಾಕೆಂದರೆ ಈ ಸಂದೇಶವನ್ನು ಓದುತ್ತಿದ್ದರೆ, ಮಗನೋರ್ವನಿಗೆ ತಂದೆಯು ತನ್ನ ಅಂತಿಮ ದಿನಗಳಲ್ಲಿ “ಮಗ ನೋಡಪ್ಪ ನಾನು ಕಷ್ಟಪಟ್ಟು ಇಷ್ಟೆಲ್ಲಾ ಮಾಡಿದ್ದೇನೆ. ಇನ್ನು ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ನಿನ್ನ ಜವಾಬ್ದಾರಿ” ಎಂದು ಹೇಳುವಾಗ ಯಾವ ಪರಿಯ ದುಃಖ ಒತ್ತರಿಸಿಬರುತ್ತದೆಯೋ, ಆರ್ದ್ರ ಭಾವನೆ ಉಕ್ಕಿ ಹರಿಯುತ್ತದೆಯೋ ಅಂತಹ ಭಾವ ಉಂಟಾಗುತ್ತದೆ. ನಿಜ, ಕೊಟ್ಯಂತರ ದಲಿತರ ಆಯುಷ್ಯದ ಒಂದೊಂದು ಕ್ಷಣವನ್ನು ನೀಡಿ ಅಂಬೇಡ್ಕರರನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಅದು ಸಾದ್ಯವಿಲ್ಲವಲ್ಲ! ಈ ನಿಟ್ಟಿನಲ್ಲಿ ಉಳಿದಿರುವುದು ಅವರ ಆ ಅಮರ ಸಂದೇಶ ಮಾತ್ರ. ಅಂದಹಾಗೆ ಬಾಬಾಸಾಹೇಬರ ಆ ಸಂದೇಶವನು ಅವರ ಆಪ್ತ ಕಾರ್ಯದರ್ಶಿ ಸರ್ ನಾನಕ್ ಚಂದ್ ರತ್ತು ತಮ್ಮ”Last few years of Dr. Ambedkar” ಕೃತಿಯಲ್ಲಿ ತುಂಬಾ ಆಪ್ತವಾಗಿ ದಾಖಲಿಸಿದ್ದಾರೆ. ಬಹುಶಃ ಅಂತಹ ದಾಖಲೆ ಬರೀ ದಲಿತ ಸಮುದಾಯವೊಂದಕ್ಕೆ ಅಲ್ಲ ಈ ಪ್ರಪಂಚದ ಪ್ರತಿಯೊಂದು ಶೋಷಿತ ವರ್ಗಕ್ಕೆ ವಿಮೋಚಕನೊಬ್ಬನು ತೋರುವ ದಿವ್ಯ ಮಾರ್ಗದಂತೆ ಕಾಣುತ್ತದೆ.

ಇರಲಿ, ಅದು 1956 ಜುಲೈ 31ರ ಮಂಗಳವಾರದ ಒಂದು ದಿನ. ಸಮಯ ಸಂಜೆ 5-30. ತಮ್ಮ ಆಪ್ತ ಕಾರ್ಯದರ್ಶಿ ರತ್ತುರವರಿಗೆ ಕೆಲವು ಪತ್ರಗಳನ್ನು dictate ಮಾಡಿದ ಬಾಬಾಸಾಹೇಬರು ಇದ್ದಕಿದ್ದಂತೆ upset ಆದರು! ಕೆಲಹೊತ್ತು ಏನನ್ನು ಮಾತನಾಡದ ಅಂಬೇಡ್ಕರರ ಈ ವರ್ತನೆ ಕಾರ್ಯದರ್ಶಿ ರತ್ತುವರಿಗೆ ಗಾಭರಿಯುಂಟುಮಾಡಿತು. ತಕ್ಷಣ ಎಚ್ಚೆತ್ತುಕೊಂಡ ರತ್ತುರವರು ಅಂಬೇಡ್ಕರರ ತಲೆಯನ್ನು ನೇವರಿಸುತ್ತಾ ಕಾಲನ್ನು ಒತ್ತುತ್ತಾ ಅವರ ಹಾಸಿಗೆಯ ಒಂದು ಕಡೆ ಬಂದು ಸ್ಟೂಲ್‍ನ ಮೇಲೆ ಕುಳಿತುಕೊಂಡರು. ಹಾಗೆಯೇ ಭಯದಿಂದ ನಡುಗುತ್ತಾ ಅಂಬೇಡ್ಕರರನ್ನು “ಸರ್, ಕ್ಷಮಿಸಿ ನನಗೆ ಸತ್ಯ ತಿಳಿಯಬೇಕು. ಈಚಿನ ದಿನಗಳಲ್ಲಿ ನೀವು ತುಂಬಾ ದುಖಿಃತರಾಗಿರುತ್ತೀರಿ, ಖಿನ್ನರಾಗಿರುತ್ತೀರಿ, ಅಳುತ್ತಿರುತ್ತೀರಿ. ಯಾಕೆ ಹೀಗೆ?” ಎಂದು ಕೇಳಿಯೇ ಬಿಟ್ಟರು!


Provided by

ರತ್ತುರವರ ಈ ಗಾಭರಿ ಅಂಬೇಡ್ಕರರಿಗೆ ಅರ್ಥವಾಗಿತ್ತು. ಸಾವರಿಸಿಕೊಂಡ ಅವರು ಆ ದಿನ ತಮ್ಮ ಆ ದುಖಃಕ್ಕೆ ಕಾರಣ ಮತ್ತು ಆ ಕಣ್ಣಿರಿನ ಹಿಂದಿನ ಸತ್ಯವನ್ನು ಬಿಚ್ಚಿಟ್ಟರು. ಅಂಬೇಡ್ಕರರ ಆ ನೋವಿನ ನುಡಿಗಳನ್ನು ಗೌರವದಿಂದ ದಾಖಲಿಸುವುದಾದರೆ “ನನ್ನ ದುಖಃಕ್ಕೆ ಕಾರಣ, ನನ್ನ ನೋವಿನ ಮೂಲ ನಿಮಗೆ ಅರ್ಥವಾಗುವುದಿಲ್ಲ. ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ಮೊದಲ ಚಿಂತೆ ನನ್ನ ಜೀವಿತದಲ್ಲಿ ನನ್ನ ಜೀವನದ ಗುರಿಯನ್ನು ಮುಟ್ಟಲಾಗಲಿಲ್ಲವಲ್ಲ ಎಂಬುದು. ಏಕೆಂದರೆ ನನ್ನ ಜೀವಿತದ ಅವಧಿಯಲ್ಲೇ ನನ್ನ ಜನರು ಈ ದೇಶದ ಆಳುವ ವರ್ಗವಾಗುವುದನ್ನು ನಾನು ನೋಡಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಅಧಾರದ ಮೇಲೆ ಇತರರ ಜೊತೆ ಹಂಚಿಕೊಳ್ಳುವುದನ್ನು ನಾನು ಬಯಸಿದ್ದೆ. ಆದರೆ ಅಂತಹ ಸಾಧ್ಯತೆ ನನಗೀಗ ಕಾಣುತ್ತಿಲ್ಲ. ಅದೂ ಅಲ್ಲದೆ ಅಂತಹ ಪ್ರಯತ್ನವನ್ನು ನಾನೇ ಮಾಡೋಣವೆಂದರೆ ನಾನೂ ಕೂಡ ಈಗ ಅನಾರೋಗ್ಯದ ಕಾರಣದಿಂದಾಗಿ ನಿಶ್ಯಕ್ತ ಮತ್ತು ನಿರಾಶನಾಗಿದ್ದೇನೆ” ಎನ್ನುತ್ತಾ ಅಂಬೇಡ್ಕರರು ತಮ್ಮ ದುಖಃದ ಮೊದಲ ಪುಟವನ್ನು ಬಿಚ್ಚಿಟ್ಟರು. ಮುಂದುವರಿದು ಅವರು “ಹಾಗೆ ಹೇಳುವುದಾರೆ ನಾನು ಇದುವರೆವಿಗೆ ಏನನ್ನು ಸಾಧಿಸಿ ಪಡೆದಿರುವೆನೋ ಆ ಸಾಧನೆಯ ಫಲವನ್ನು ಶಿಕ್ಷಣ ಪಡೆದ ನನ್ನ ಸಮುದಾಯದ ಕೆಲವೇ ಕೆಲವು ಮಂದಿ ಅನುಭವಿಸಿ ಮಜಾ ಮಾಡುತ್ತಿದ್ದಾರೆ. ತಮ್ಮ ಇನ್ನಿತರ ಶೋಷಿತ ಸಹೋದರರ ಬಗ್ಗೆ ಅವರು ಯಾವುದೇ ಅನುಕಂಪ, ಕಾಳಜಿ ತೋರುತ್ತಿಲ್ಲ. ತಮ್ಮ ಈ ವಂಚನೆಯ ಕ್ರಿಯೆಯಿಂದಾಗಿ ಒಂದು ರೀತಿಯಲಿ ಅವರು ಅಯೋಗ್ಯರಾಗಿದ್ದಾರೆ. ವೈಯಕ್ತಿಕ ಹಿತಾಸಕ್ತಿಯನ್ನಷ್ಟೆ ಸಾಧಿಸಿಕೊಂಡು ತಮ್ಮಷ್ಟಕ್ಕೆ ಬದುಕುವ ಅವರು ಒಂದರ್ಥದಲಿ ನನ್ನ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಅವರಲ್ಲಿ ಯಾರೂ ಕೂಡ ಸಮುದಾಯದ ಸೇವೆಯನ್ನು ಮಾಡಲು ಮುಂದೆ ಬರುತ್ತಿಲ್ಲ. ಒಟ್ಟಾರೆ ಅವರು ವಿನಾಶದ ಹಾದಿಯತ್ತ ಸಾಗುತ್ತಿದ್ದಾರೆ” ಎಂದು ಮೀಸಲಾತಿಯ ಲಾಭ ಪಡೆದು ನೌಕರಿಗಿಟ್ಟಿಸಿ ಸ್ವಾರ್ಥಿಗಳಾಗಿರುವ ತನ್ನ ಸಮುದಾಯದ ಸರ್ಕಾರಿ ನೌಕರರ ಬಗ್ಗೆ ಅಂಬೇಡ್ಕರರು ಅಂದು ಹೇಳಿದರು. ಮುಂದುವರಿದು ಅವರು”ಆ ಕಾರಣಕ್ಕಾಗಿ ಇನ್ನು ಮುಂದೆ ನಾನು ಹಳ್ಳಿಗಳಲ್ಲಿನ ಶೋಷಣೆಯನ್ನು ಇನ್ನೂ ಅನುಭವಿಸುತ್ತಿರುವ, ಆರ್ಥಿಕ ದುಸ್ಥಿತಿಯಲ್ಲಿ ಇನ್ನು ಹಾಗೆಯೇ ಇರುವ ನನ್ನ ಅನಕ್ಷರಸ್ಥ ವಿಶಾಲ ಜನಸಮುದಾಯದತ್ತ ಗಮನಹರಿಸಬೇಕೆಂದಿದ್ದೇನೆ. ಆದರೆ? ನನಗಿರುವುದು? ಇನ್ನು ಕೆಲವೇ ದಿನಗಳು!” ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಮುಂದುವರಿದು ಅವರು “ನನ್ನ ಎಲ್ಲಾ ಕೃತಿಗಳನ್ನು ನನ್ನ ಜೀವಿತದ ಅವಧಿಯಲ್ಲೇ ಪ್ರಕಟಿಸಬೇಕೆಂದು ಬಯಸಿದ್ದೆ. “ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್”, “ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ” ಮತ್ತು “ಹಿಂದೂ ಧರ್ಮದ ಒಗಟುಗಳು” ಎಂಬ ಆ ನನ್ನ ಮಹೋನ್ನತ ಕೃತಿಗಳು ಇನ್ನೂ ಪ್ರಕಟಗೊಂಡಿಲ್ಲ. ಅಲ್ಲದೆ ಸದ್ಯಕ್ಕೆ ಅವುಗಳನ್ನು ಹೊರತರುವುದು ನನ್ನ ಕೈಯಲ್ಲಿ ಆಗುತ್ತಿಲ್ಲವಲ್ಲ ಎಂಬ ಅಸಹಾಯಕತೆ ಕೂಡ ನನ್ನನ್ನು ಕಾಡುತ್ತಿದೆ. ನನ್ನ ನಂತರವಾದರೂ ಅವುಗಳು ಪ್ರಕಟಗೊಳ್ಳಬಹುದೆಂದು ಕೊಂಡರೆ ಅಂತಹ ಸಾಧ್ಯತೆ ಕೂಡ ನನಗೆ ಕಾಣುತ್ತಿಲ್ಲ. ನನ್ನ ಚಿಂತೆಗೆ ಇದೂ ಕೂಡ ಪ್ರಮುಖ ಕಾರಣ” ಎಂದು ತಮ್ಮ ಕೃತಿಗಳು ಪ್ರಕಟವಾಗದ್ದರ ಬಗ್ಗೆ ಬಾಬಾಸಾಹೇಬರು ನೋವು ತೋಡಿಕೊಳ್ಳುತ್ತಾರೆ. ನಿಜ, ನಂತರದ ಒಂದೆರಡು ದಶಕದ ನಂತರ ಅವರ ಕೃತಿಗಳು ಸರ್ಕಾರದ ವತಿಯಿಂದ ಪ್ರಕಟಗೊಂಡಿರಬಹುದು. ಆದರೆ ಅಂಬೇಡ್ಕರರು ಬದುಕಿದ್ದಾಗಲೇ ಅವು ಪ್ರಕಟಗೊಂಡಿದ್ದರೆ? ಅಂಬೇಡ್ಕರ್ ಎಂಬ “ಅಪ್ರತಿಮ ಲೇಖಕನಿಗೆ” ಅದರಿಂದ ಸಂಪೂರ್ಣ ಆನಂದ ಸಿಗುತ್ತಿತ್ತು. ಆದರೆ?

ಮುಂದುವರಿದು ತಮ್ಮ ಚಳುವಳಿಯ ಭವಿಷ್ಯದ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸುವ ಅವರು “ನನ್ನ ನಂತರ, ನನ್ನ ಜೀವಿತದ ಅವಧಿಯಲ್ಲೇ ಶೋಷಿತ ಸಮುದಾಯದ ಮಧ್ಯದಿಂದ ಬರುವವರೊಬ್ಬರು ನನ್ನ ಈ ಚಳುವಳಿಯನ್ನು ಮುನ್ನಡೆಸುವರೆಂದು ನಾನು ಬಯಸಿದ್ದೆ. ಆದರೆ ಈ ಸಂಧರ್ಭದಲ್ಲಿ ಅಂತಹವರಾರೂ ನನಗೆ ಕಾಣುತ್ತಿಲ್ಲ! ನನ್ನ ಸಹಪಾಠಿಗಳಲ್ಲಿ ಯಾರಲ್ಲಿ ನಾನು ಈ ಚಳುವಳಿಯನ್ನು ಮುನ್ನಡೆಸುವರೆಂದು ನಂಬಿಕೆ ಮತ್ತು ವಿಶ್ವಾಸವಿರಿಸಿದ್ದೆನೊ ಅವರು ತಮ್ಮ ಮೇಲೆ ಬೀಳಬಹುದಾದ ಈ ಅಗಾಧ ಜವಾಬ್ದಾರಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಬದಲಿಗೆ ಅವರು ತಮ್ಮ ತಮ್ಮಲ್ಲೇ ನಾಯಕತ್ವ ಮತ್ತು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಈ ದೇಶಕ್ಕೆ ಮತ್ತು ನನ್ನ ಜನತೆಗೆ ಸೇವೆ ಸಲ್ಲಿಸಬೇಕೆಂಬ ಅಧಮ್ಯ ಆಸೆ ನನಗೆ ಇನ್ನೂ ಇದೆ. ಆದರೆ? ಪೂರ್ವಾಗ್ರಹಪೀಡಿತ, ಜಾತಿ ಎಂಬ ರೋಗವನ್ನು ಹೊದ್ದುಕೊಂಡಿರುವ ಜನರೇ ತುಂಬಿರುವ ಈ ದೇಶದಲ್ಲಿ? ನನ್ನಂತಹವರು ಜನಿಸುವುದು ಮಹಾಪಾಪ. ಹಾಗೆಯೇ ಈಗಿರುವ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಧಪಟ್ಟಂತೆ ಯಾರಾದರೊಬ್ಬರು ತಮ್ಮ ವಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ. ಏಕೆಂದರೆ ಇಲ್ಲಿಯ ಜನರು ಈ ದೇಶದ ಪ್ರಧಾನಿ(ನೆಹರು)ಗೆ ಒಗ್ಗದಂತಹ ಯಾವುದೇ ವಿಚಾರಗಳನ್ನು ಕೇಳುವ ತಾಳ್ಮೆಯನ್ನು ಹೊಂದಿಲ್ಲ. ಹೀಗೇ ಆದರೆ ಈ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ!” ಎಂದು ಅಂಬೇಡ್ಕರರು ನಿಟ್ಟುಸಿರು ಬಿಡುತ್ತಾರೆ. ಹೌದು, ಕಾಶ್ಮೀರಕ್ಕೆ ಸಂಬಂಧಿಸಿದಂತೆ, ಹಿಂದೂ ಕಾನೂನು ಸಂಹಿತೆಗೆ ಸಂಬಂದಿಸಿದಂತೆ ಅಂದಿನ ಪ್ರದಾನಿ ನೆಹರುರವರ ನಿಲುವಿನ ಬಗ್ಗೆ ಅಂಬೇಡ್ಕರರಿಗೆ ಅಸಮಾಧಾನವಿತ್ತು. ಹಾಗೆಯೇ ತಮ್ಮ ದೂರದೃಷ್ಟಿಯ ನಿಲುವನ್ನು ಒಪ್ಪದ ಈ ದೇಶದ ಜಾತೀಯ ಮನಸ್ಸುಗಳ ಬಗ್ಗೆಯೂ ಅಂಬೇಡ್ಕರರಿಗೆ ಅಷ್ಟೇ ಅಕ್ರೋಶವಿತ್ತು.

ಮುಂದುವರಿದು ಅವರು “ಅದೇನೇ ಇರಲಿ ನನ್ನ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿದರೂ ನಾನು ಅನೇಕ ಉತ್ತಮ, ಮೆಚ್ಚುವಂತಹ ಕಾರ್ಯಗಳನ್ನು ಮಾಡಿದ್ದೇನೆ. ಹಾಗೆಯೇ ನಾನು ಸಾಯುವವರೆಗೂ ಅಂತಹ ಕಾರ್ಯಗಳನ್ನು ಮಾಡುತ್ತಲೇ ಇರುತ್ತೇನೆ” ಎನ್ನುತ್ತಾ ಇದ್ದಕ್ಕಿದ್ದಂತೆ ಗದ್ಗದಿತರಾಗುತ್ತಾರೆ. ಕಣ್ಣಾಲಿಗಳು ನೀರು ತುಂಬಿಕೊಳ್ಳುತ್ತವೆ. ಆ ಕ್ಷಣ ಬಾಬಾಸಾಹೇಬರು ಅಕ್ಷರಶಃ ಗಳಗಳನೆ ಅಳುತ್ತಾರೆ. ಹಾಗೆ ಅಳುತ್ತಾ ಸಹಾಯಕ ನಾನಕ್ ಚಂದ್ ರತ್ತುರತ್ತ ಒಮ್ಮೆ ನೊಡುತ್ತಾರೆ. ಸಹಜವಾಗಿ ರತ್ತುರವರು ಕೂಡ ಆ ಕ್ಷಣದಲ್ಲಿ ಬಾಬಾಸಾಹೇಬರ ದುಖಃದಲ್ಲಿ ಸಹಪಾಠಿಯಾಗಿರುತ್ತಾರೆ! ಬಾಬಾಸಾಹೇಬರಿಗೆ ಏನನ್ನಿಸಿತೋ? ಆ ಕಡೆ ಒಮ್ಮೆ, ಈ ಕಡೆ ಒಮ್ಮೆ ನೋಡುತ್ತಾ ಸ್ವಲ್ಪ ಸಾವರಿಸಕೊಂಡು ರತ್ತುರವನ್ನು ಸಮಾಧಾನಿಸುತ್ತಾ ಮೆಲ್ಲಗೆ ಹೇಳುತ್ತಾರೆ “ಧೈರ್ಯ ತಂದುಕೋ ರತ್ತು. ಎದೆಗುಂದಬೇಡ. ಎಂದಾದರೊಂದು ದಿನ ಈ ಜೀವನ ಕೊನೆಗೊಳ್ಳಲೇಬೇಕು!”

“ಜೀವನ…. ಕೊನೆ….” ಬಾಬಾಸಾಹೇಬರ ಈ ಮಾತುಕೇಳುತ್ತಲೆ ರತ್ತು ಅಘಾತಕ್ಕೊಳಗಾದರು. ಅವರ ಈ ಮಾತಿನ ಅರ್ಥವಾದರೂ ಏನು ಎಂದು ಗಾಭರಿಗೋಂಡರು. ಆ ಕ್ಷಣ ಏನು ಮಾಡಬೇಕೆಂದು ರತ್ತುರವರಿಗೆ ತೋಚದೆ ಇರುವಾಗ ಬಾಬಾಸಾಹೇಬರೇ ತಮ್ಮ ಕಣ್ಣ ನೀರು ವರೆಸಿಕೊಂಡು ಕೈಯನ್ನು ಸ್ವಲ್ಪ ಮೇಲೆ ಎತ್ತಿ ಹೀಗೆ ಹೇಳುತ್ತಾರೆ, “ನಾನಕ್ ಚಂದ್, ನನ್ನ ಜನರಿಗೆ ಹೇಳು, ನಾನು ಇದುವರೆವಿಗೂ ಏನನ್ನು ಸಾಧಿಸಿರುವೆನೋ ಅದನ್ನು ನನ್ನ ಜೀವನಪರ್ಯಂತ ನನ್ನ ಶತ್ರುಗಳ ಜೊತೆ ಕಾದಾಡುತ್ತಾ, ಅನಿಯತ ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರ ನೋವನ್ನು ಅನುಭವಿಸುತ್ತಾ ಪಡೆದಿದ್ದೇನೆ. ತುಂಬಾ ಶ್ರಮವಹಿಸಿ ನಾನೀ ಹೋರಾಟದ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ ಅಡೆತಡೆ ಬರಲಿ, ಅದರ ಮಾರ್ಗದಲ್ಲಿ ಎಂತಹದ್ದೇ ಏರುಪೇರುಗಳಾಗಲೀ, ತೊಂದರೆಗಳಾಗಲೀ ಆ ಹೋರಾಟದ ರಥ ಮುನ್ನಡೆಯಲೇ ಬೇಕು. ಅಕಸ್ಮಾತ್ ಈ ರಥವನ್ನು ನನ್ನ ಜನ ಮತ್ತು ನನ್ನ ಸಹಪಾಠಿಗಳು ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅದನ್ನು ಅಲ್ಲಿಯೇ ಇರಲು ಬಿಡಬೇಕು. ಯಾವುದೇ ಸಂದರ್ಭದಲ್ಲಿಯೂ, ಯಾವುದೇ ಕಾರಣಕ್ಕೂ ಅದನ್ನು ಹಿಂದೆ ಸರಿಯಲು ಬಿಡಬಾರದು. ನನ್ನ ಅನಾರೋಗ್ಯದ ಸಂದರ್ಭದಲ್ಲಿ ಇದು ನನ್ನ ಜನರಿಗೆ ನಾನು ನೀಡುತ್ತಿರುವ ಸಂದೇಶ. ಬಹುಶಃ ನನ್ನ ಕೊನೆಯ ಸಂದೇಶ. ‘ಇದನ್ನು ನೀನು ಅವರಿಗೆ ಹೇಳು…’, ‘ಹೋಗು… ಅವರಿಗೆ ಹೇಳು…’, ‘ಹೋಗು… ಅವರಿಗೆ ಹೇಳು…” ಎನ್ನುತ್ತಾ ಅಂಬೇಡ್ಕರರು ‘ನಿದ್ರೆ’ಗೆ ಹೊರಳುತ್ತಾರೆ.

ಪ್ರಶ್ನೆಯೇನೆಂದರೆ ಬಾಬಾಸಾಹೇಬರ ಈ ಸಂದೇಶ ಈ ದೇಶದ ಶೋಷಿತ ದಲಿತ ಸಮುದಾಯಕ್ಕೆ ಅರ್ಥವಾಗಿದೆಯೇ? ಇತಿಹಾಸದ ಪುಟಗಳು ಅದಕ್ಕೆ ಉತ್ತರ ಹೇಳಬೇಕಷ್ಟೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ