ಎಳೆಯ ಮಗುವನ್ನು ಹಿಡಿದುಕೊಂಡು ಕೆಂಡದ ಮೇಲೆ ನಡೆದ ಅರ್ಚಕ | ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ
ಹಾವೇರಿ: ಅರ್ಚಕನೊಬ್ಬ ಪುಟ್ಟ ಮಗುವನ್ನು ಹಿಡಿದುಕೊಂಡು ಕೆಂಡದ ಮೇಲೆ ನಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಎಳೆಯ ಮಗುವನ್ನು ಈ ರೀತಿಯಾಗಿ ಹಿಡಿದುಕೊಂಡು ಹೋದಾಗ ಏನಾದರೂ ಅನಾಹುತ ಸಂಭವಿಸಿದರೆ, ಯಾರು ಹೊಣೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಹಾವೇರಿ ಜಿಲ್ಲೆಯ ಬುಳ್ಳಾಪುರ ಗ್ರಾಮದಲ್ಲಿ ನಡೆಯುವ ದುರ್ಗಾದೇವಿ ಜಾತ್ರೆಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಹರಕೆಯ ಹೆಸರಿನಲ್ಲಿ ಎಳೆ ಮಗುವನ್ನು ಹಿಡಿದುಕೊಂಡು ಅರ್ಚಕ ಕೆಂಡವನ್ನು ದಾಟಿದ್ದಾನೆ.
ದೇವಸ್ಥಾನದ ಅರ್ಚಕ ಬಸವರಾಜಪ್ಪ ಸ್ವಾಮಿ ಹಸುಗೂಸನ್ನು ಎಡಗೈಲಿ ಮಗುವನ್ನು ಎತ್ತಿಕೊಂಡು ಉರಿಯುತ್ತಿರುವ ಕೆಂಡವನ್ನು ದಾಟುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಲೆಯಲ್ಲಿ ಸ್ವಲ್ಪವೂ ಬುದ್ಧಿ ಇಲ್ಲದ ಪೋಷಕರು ಎಳೆಯ ಮಗುವನ್ನು ಅರ್ಚಕನ ಕೈಯಲ್ಲಿ ಕೊಟ್ಟು ಕೆಂಡದಾಟಿಸುವಂತೆ ಹೇಳಿದ್ದಾರೆ. ಎಲ್ಲಿಯಾದರೂ ಮಗು ಕೈ ತಪ್ಪಿ ಕೆಂಡಕ್ಕೆ ಬಿದ್ದಿದ್ದರೆ ಏನಾಗುತ್ತಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ವಿಡಿಯೋಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.