ಬಂದಾರು ಗ್ರಾ.ಪಂ. ಸ್ವಾತಂತ್ರ್ಯ ಅಮೃತ ಮಹೋತ್ಸವ, ವಿವಿಧ ಕ್ಷೇತ್ರದ 75 ಮಂದಿ ಸಾಧಕರಿಗೆ ಸನ್ಮಾನ

ಗಮನ ಸೆಳೆದ ತ್ರಿವರ್ಣಾಲಂಕೃತ ಸ್ತಬ್ಧ ಚಿತ್ರ, ಮೆರವಣಿಗೆ
ಬಂದಾರು : ಇಲ್ಲಿನ ಗ್ರಾಮಪಂಚಾಯತ್ ಆಡಳಿತ, ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣಾ ಸಮಿತಿ ಮತ್ತು ಬಂದಾರು-ಮೊಗ್ರು ಗ್ರಾಮಗಳ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಭಾರತಮಾತೆಯ ಸುಂದರ ಸ್ತಬ್ದ ಚಿತ್ರವುಳ್ಳ ತ್ರಿವರ್ಣಾಲಂಕೃತ ವಾಹನದೊಂದಿಗೆ ಕೊಪ್ಪದಡ್ಕದಿಂದ ಹೊರಟ ಜಾಥಾದಲ್ಲಿ ಗ್ರಾಮಸ್ಥರು, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣದೊಂದಿಗೆ ಶಾಲಾ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಬಾವುಟ ಪುಟಾಣಿ ಕೈಗಳಲ್ಲಿ ಎತ್ತಿ ಹಿಡಿದ ಬಾವುಟಗಳು, ನಾಸಿಕ್ ಬ್ಯಾಂಡ್ , ದೇಶಾಭಿಮಾನದ ಘೋಷಣೆಗಳು ಮೆರವಣಿಗೆಗೆ ಮೆರುಗು ನೀಡಿತು.
ನಿವೃತ್ತ ಎ.ಎಸೈ ಬಾಬು ಗೌಡ ಹಾಗೂ ಗ್ರಾ.ಪಂ.ಅಧ್ಯಕ್ಷೆ ಪರಮೇಶ್ವರಿ ಕೆ ಗೌಡ ಧ್ವಜಾರೋಹಣಗೈದರು. ಸಭಾ ಕಾರ್ಯಕ್ರಮವನ್ನು ಪಾಣೆಕಲ್ಲು ಶಿರಾಡಿ ದೈವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸೂರ್ಯನಾರಾಯಣ ಕುಡುಮತ್ತಾಯ ಉದ್ಘಾಟಿಸಿ, ಶುಭ ಹಾರೈಸಿದರು.
ಪದ್ಮುಂಜ ಸಿ.ಎ.ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ತಾ.ಪಂ.ಮಾಜಿ ಅಧ್ಯಕ್ಷ ಎಂ.ಚಂದಪ್ಪ ಪೂಜಾರಿ, ತಾ.ಪಂ. ಮಾಜಿ ಸದಸ್ಯರಾದ ಮಹಾಬಲ ಗೌಡ, ಕೃಷ್ಣಯ್ಯ ಆಚಾರ್ಯ, ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಉದಯ ಬಿ.ಕೆ., ಎಸ್ಎಂಎ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಅಬ್ಬಾಸ್ ಬಟ್ಲಡ್ಕ , ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಅಚುಶ್ರೀ ಬಾಂಗೇರು ಕಾರ್ಯಕ್ರಮವನ್ನು ಉದ್ದೇಶಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ಗ್ರಾಮವಾರು ಹಾಗೂ ವಾರ್ಡುವಾರು ವಿವಿಧ ಕ್ಷೇತ್ರಗಳ 75 ಮಂದಿ ಸಾಧಕರನ್ನು , ನಿವೃತ್ತ ಸೈನಿಕರು ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪಂ.ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ ಕಾರಿಂಜ, ಪ್ರಗತಿಪರ ಕೃಷಿಕ ಹರೀಶ್ ಹೊಳ್ಳ, ಗ್ರಾ.ಪಂ. ಉಪಾಧ್ಯಕ್ಷ ಗಂಗಾಧರ ಪೂಜಾರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಯೋಗ ಶಿಕ್ಷಕ ಕುಶಾಲಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು. ಪಂ.ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ ಕಾರಿಂಜ ಸ್ವಾಗತಿಸಿದರು. ಗ್ರಾ.ಪಂ. ಸದಸ್ಯೆ ಮಂಜುಶ್ರೀ ಪ್ರಾರಂಭದಲ್ಲಿ ಪ್ರಾರ್ಥಿಸಿ ಕೊನೆಯಲ್ಲಿ ವಂದಿಸಿದರು. ಗ್ರಾ.ಪಂ. ಸಿಬ್ಬಂದಿಗಳು, ಗ್ರಾಮಸ್ಥರು ಪಾಲ್ಗೊಂಡರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka