ಬಿಬಿಎಂಪಿ ಕಚೇರಿ ಅಗ್ನಿ ಅವಘಡ ಆಕಸ್ಮಿಕವಲ್ಲ, ಅನುಮಾನಸ್ಪದವಾಗಿದೆ: ಮುಖ್ಯಮಂತ್ರಿ ಚಂದ್ರು - Mahanayaka
2:20 PM Saturday 21 - September 2024

ಬಿಬಿಎಂಪಿ ಕಚೇರಿ ಅಗ್ನಿ ಅವಘಡ ಆಕಸ್ಮಿಕವಲ್ಲ, ಅನುಮಾನಸ್ಪದವಾಗಿದೆ: ಮುಖ್ಯಮಂತ್ರಿ ಚಂದ್ರು

mukhyamanthri chandru
12/08/2023

ಬೆಂಗಳೂರು: ಹಿಂದೆಯೂ ಕೂಡ ಮೂರ್ನಾಲ್ಕು ಬಾರಿ ಬಿಬಿಎಂಪಿಯಲ್ಲಿ ಬೆಂಕಿ ಅವಘಡಗಳು ಸಂಭವಿಸಿವೆ. ಹಾಗಾಗಿ ಈ ಘಟನೆಗಳು ಆಕಸ್ಮಿಕ ಎಂಬುದಕ್ಕಿಂತ ಅನುಮಾನಸ್ಪದವಾಗಿವೆ. ಹಿಂದಿನದ್ದು ಸೇರಿ ಸಮಗ್ರ ತನಿಖೆಯಾಗಬೇಕು. ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಎಎಪಿ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ಆಗ್ರಹಿಸಿದ್ದಾರೆ.

ಅಗ್ನಿ ಅನಾಹುತದಲ್ಲಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿಯನ್ನು ಶನಿವಾರ ಮುಖ್ಯಮಂತ್ರಿ ಚಂದ್ರು ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಸ್ಥಳ ದರೋಡೆ ಮಾಡಿ, ಅಧಿಕಾರಿಗಳು, ಕಾರ್ಪೋರೇಟರ್ ಗಳು, ಶಾಸಕ, ಮಂತ್ರಿಗಳು ಶಾಮೀಲಾಗಿ, ಗುತ್ತಿಗೆ ವಿಚಾರದಲ್ಲಿ ಸಿಕ್ಕಾಪಟ್ಟೆ ಹಣಕಾಸಿನ ವ್ಯವಹಾರಗಳು ನಡೆದಿರುವಂತಹ ಸಂದರ್ಭದಲ್ಲಿ ಆ ಫೈಲ್ ಗಳನ್ನು ಮುಚ್ಚಿಹಾಕಬೇಕು, ಇಲ್ಲದಿದ್ದರೆ ಸಿಕ್ಕಿಹಾಕಿಕೊಳ್ಳುತ್ತೇವೆ, ಜೈಲಿಗೆ ಹೋಗುತ್ತೇವೆ ಎಂಬ ಭಯದಿಂದ ಇಂತಹ ಕೃತ್ಯ ನಡೆಸಿರುವ ಸಾಧ್ಯತೆ ಇರುತ್ತದೆ ಎಂದು ಅನುಮಾನವನ್ನು ವ್ಯಕ್ತಪಡಿಸಿದರು.


Provided by

ಬಿಜೆಪಿ ಸರ್ಕಾರವಿದ್ದಾಗ 40%, ಈಗ ಬಾಕಿ ಹಣ ಬಿಡುಗಡೆಗೆ 15% ಕಮಿಷನ್ ಕೇಳುತ್ತಿರುವ ಬಗ್ಗೆ ಗುತ್ತಿಗೆದಾರರು ದೂರಿದ್ದಾರೆ. 65% ದುಡ್ಡನ್ನು ಇವರೇ ತಿಂದರೆ, ಉಳಿದ ದುಡ್ಡಲ್ಲಿ ಮಾಡಿದ ರಸ್ತೆಗಳು ಹೇಗಿರಬಹುದು, ಕಟ್ಟಡಗಳು ಹೇಗಿರಬಹುದು. ಕಮಿಷನ್ ದುಡ್ಡಿಗಾಗಿ ಲಕ್ಷಾಂತರ ಜನರ ಪ್ರಾಣದ ಮೇಲೆ ಆಟ ಆಡುವುದು ಸರಿಯಲ್ಲ ಎಂದರು.

ಬಿಜೆಪಿಯ 40% ಕಮಿಷನ್ ಕಿರುಕುಳದಿಂದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ್ದೀರಿ, ಓರ್ವ ಮಂತ್ರಿ ರಾಜೀನಾಮೆ ಕೊಟ್ಟಿದ್ದನ್ನು ನೋಡಿದ್ದೀರಿ, ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜರಾಜೇಶ್ವರಿ ನಗರದಲ್ಲಿ ನೂರಾರು ಕೋಟಿ ವ್ಯವಹಾರದ ದಾಖಲೆಗಳು ಅಗ್ನಿ ಅನಾಹುತದಿಂದ ನಾಶವಾಗಿದ್ದನ್ನು ನೋಡಿದ್ದೀರಿ. ಹಾಗಾಗಿ ಇಂತಹ ಘಟನೆ ನಡೆದಾಗ ಅನುಮಾನಗಳು ಹುಟ್ಟಿಕೊಳ್ಳುವುದು ಸಹಜ. ನೂರಾರು ಕೋಟಿ ನುಂಗಿದ ನಂತರ ಸಿಕ್ಕಿಹಾಕಿಕೊಳ್ಳುವ ಭಯದಿಂದ ಅಗ್ನಿ ಅವಘಡದಂತಹ ಘಟನೆಗಳನ್ನು ಬೇಕಂತಲೇ ಮಾಡಿಸಿದ್ದಾರೆ ಎಂಬ ಗುಮಾನಿ ಬರುತ್ತದೆ ಎಂದರು.

ಸ್ಥಳ ಪರಿಶೀಲನೆ ಬಳಿಕ ಆಕಸ್ಮಿಕ ಘಟನೆ ಬಗ್ಗೆ ಶಂಕೆ:
ಶುಕ್ರವಾರ ಅವಘಡ ಸಂಭವಿಸಿದ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಎಎಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಅವರನ್ನು ಒಳಗೊಂಡ ಎಎಪಿ ನಿಯೋಗ, ಆಕಸ್ಮಿಕವಾಗಿ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.

ಗುತ್ತಿಗೆದಾರರು ಮತ್ತು ರಾಜ್ಯ ಸರ್ಕಾರದ ನಡುವೆ ಬಾಕಿ ಪಾವತಿ ವಿಚಾರವಾಗಿ ಹಗ್ಗ ಜಗ್ಗಾಟ ನಡೆಯುತ್ತಿದೆ. ತನಿಖೆ ನಡೆಸುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ತನಿಖೆ ನಡೆಸಲು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳು ಬೇಕು. ಅಗ್ನಿ ಅನಾಹುತ ಸಂಭವಿಸಿದ ಬಿಬಿಎಂಪಿ ಮುಖ್ಯಕಚೇರಿಯ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿಯ ಪಕ್ಕದಲ್ಲೇ ದಾಖಲೆಗಳನ್ನು ಸಂಗ್ರಹಿಸಿಟ್ಟಿರುವ ಕೊಠಡಿ ಇರುವುದು ಶಂಕೆಗೆ ಕಾರಣವಾಗಿದೆ. ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

ಈ ಹಿಂದೆಯೂ ಯಾವುದೇ ಗುರುತರವಾದ ಆರೋಪಗಳು ವ್ಯಕ್ತಗೊಂಡ ಬೆನ್ನಲ್ಲೇ ಕಚೇರಿಯಲ್ಲಿ ಅಗ್ನಿ ಅನಾಹುತ ಸಂಭವಿಸುವುದು, ವ್ಯವಹಾರ ದಾಖಲೆಗಳು ನಾಶಗೊಳ್ಳುವುದನ್ನು ನೋಡಿದ್ದೇವೆ. ಈ ಘಟನೆಯೂ ಅಂತಹದ್ದೇ ಕೃತ್ಯದಂತೆ ಕಾಣಿಸುತ್ತಿದೆ. ಅವಘಡದಲ್ಲಿ 8 ಸಿಬ್ಬಂದಿ ಗಾಯಗೊಂಡಿದ್ದಾರೆ. ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ.

ಇತ್ತೀಚಿನ ಸುದ್ದಿ