‘ರಾಮಚರಿತ ಮಾನಸ’ ಸೈನೆಡ್ ಇದ್ದಂತೆ: ಬಿಹಾರದ ಶಿಕ್ಷಣ ಸಚಿವರಿಂದ ವಿವಾದಾತ್ಮಕ ಹೇಳಿಕೆ
ಹಿಂದೂ ಧರ್ಮ ಗ್ರಂಥವಾದ ‘ರಾಮಚರಿತ ಮಾನಸ’ ಸೈನೆಡ್ ಇದ್ದಂತೆ ಎಂದು ಬಿಹಾರದ ಶಿಕ್ಷಣ ಸಚಿವ ಡಾ. ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು ಹಿಂದಿ ದಿನಾಚರಣೆ ಪ್ರಯುಕ್ತ ಬಿಹಾರ ಹಿಂದಿ ಗ್ರಂಥ ಅಕಾಡೆಮಿಯಲ್ಲಿ ಮಾತನಾಡಿದರು. ಐವತ್ತೈದು ಭಕ್ಷ್ಯಗಳಲ್ಲಿ ಪೊಟ್ಯಾಶಿಯಂ ಸೈನೆಡ್ ಬೆರೆಸಿ ಕೊಟ್ಟರೆ ತಿನ್ನುತ್ತಿರಾ ಎಂದು ಪ್ರಶ್ನಿಸಿದ್ದು, ಹಿಂದೂ ಧರ್ಮ ಗ್ರಂಥಗಳಲ್ಲೂ ಇದೇ ಆಗಿದೆ ಎಂದು ತಿಳಿಸಿದ್ದಾರೆ.
ರಾಮ ಚರಿತ ಮಾನಸದಲ್ಲಿ ಪೊಟ್ಯಾಸಿಯಮ್ ಸೈನೆಡ್ ಇದೆ. ಅದು ಇರುವವರೆಗೂ ಅದನ್ನು ವಿರೋಧಿಸುತ್ತಲೇ ಇರುತ್ತೇನೆ. ಬಾಬಾ ನಾಗಾರ್ಜುನ, ಲೋಹಿಯಾ, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನನ್ನ ಹೇಳಿಕೆಯನ್ನು ಟೀಕಿಸಿದ್ದಾರೆ. ಆದರೆ ರಾಮಚರಿತ ಮಾನಸಕ್ಕೆ ನನ್ನ ಆಕ್ಷೇಪ ದೃಢವಾಗಿದ್ದು ಇದು ಜೀವನದುದ್ದಕ್ಕೂ ಮುಂದುವರಿಯುತ್ತದೆ ಎಂದು ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ನೀರಜ್ ಕುಮಾರ್, ಸಚಿವ ಚಂದ್ರಶೇಖರ್ ಹೇಳಿಕೆ ನಿತೇಶ್ ಕುಮಾರ್ ಅವರಿಗೆ ಕೇಳುತ್ತಿಲ್ಲವೇ. ನಿತೇಶ್ ಕೂಡ ಸನಾತನವನ್ನು ಅವಮಾನಿಸುತ್ತಿದ್ದಾರೆ. ಚಂದ್ರಶೇಖರ್ ಅವರಿಗೆ ಸಮಸ್ಯೆ ಇದ್ದರೆ ಮತಾಂತರವಾಗಲಿ ಎಂದು ಸಲಹೆ ನೀಡಿದ್ದಾರೆ.