ಬಿಜೆಪಿ ಬಹುರಾಷ್ಟ್ರೀಯ ಕಂಪನಿ ರೀತಿಯಲ್ಲಿ ಕೆಲಸ ಮಾಡುತ್ತಿದೆ: ಜಾರ್ಖಂಡಿನ ಮಾಜಿ ಬಿಜೆಪಿ ನಾಯಕನಿಂದಲೇ ಹೇಳಿಕೆ
ಬಿಜೆಪಿ ಬಹುರಾಷ್ಟ್ರೀಯ ಕಂಪನಿ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಬಿಜೆಪಿಯಲ್ಲಿ ಹೊಸತನಕ್ಕೆ ಅವಕಾಶ ಕಡಿಮೆ. ದೆಹಲಿಯಿಂದ ಏನು ನಿರ್ದೇಶನಗಳು ಬರುತ್ತೋ ಅದನ್ನೇ ಉಳಿದವರು ಅನುಸರಿಸುತ್ತಾರೆ ಎಂದು ಜಾರ್ಖಂಡಿನ ಬಿಜೆಪಿ ನಾಯಕರಾಗಿದ್ದ ಕುನಾಲ್ ಸಾರಂಗಿ ಹೇಳಿದ್ದಾರೆ.
ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದಲ್ಲಿದ್ದ ಇವರು 2019ರ ವಿಧಾನಸಭಾ ಚುನಾವಣೆಗಿಂತ ತುಸು ಮೊದಲು ಪಕ್ಷ ಬಿಟ್ಟು ಬಿಜೆಪಿ ಸೇರಿದ್ದರು. ಅವರನ್ನು ಬಿಜೆಪಿ ತಕ್ಷಣ ರಾಜ್ಯ ವಕ್ತರರಾಗಿ ನೇಮಿಸಿತ್ತು ಮತ್ತು ಚುನಾವಣೆಗೂ ನಿಲ್ಲಿಸಿತ್ತು. ಆದರೆ ಅವರು ಪರಾಜಯಗೊಂಡರು. ಕಳೆದ ಏಪ್ರಿಲ್ ನಲ್ಲಿ ಅವರು ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದರಲ್ಲದೆ ಇದೇ ಜುಲೈ ಏಳರಂದು ಬಿಜೆಪಿಗೆ ರಾಜೀನಾಮೆ ನೀಡಿದರು.
ಜನರಿಗಾಗಿ ಕೆಲಸ ಮಾಡಲು ನಾನು ಬಯಸುತ್ತೇನೆ. ಬಿಜೆಪಿ ಸೇರಿದರೆ ಜನರ ಸೇವೆಯನ್ನು ಮಾಡಬಹುದು ಎಂದು ಭಾವಿಸಿದ್ದೆ. ಆದರೆ ಅದು ನನ್ನ ತಪ್ಪು ಗ್ರಹಿಕೆ ಅನ್ನೋದು ಮನವರಿಕೆಯಾಗಿದೆ. ನಾನು ವಿಧಾನಸಭಾ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಬಿಜೆಪಿ ನಾಯಕರೇ ನನ್ನ ಸೋಲಿಗಾಗಿ ಪ್ರಯತ್ನಿಸಿದರು. ಆದರೆ ಜಾರ್ಖಂಡ್ ಮುಕ್ತಿ ಮೋರ್ಚಾ ಒಂದು ಕುಟುಂಬದಂತೆ ಕೆಲಸ ಮಾಡುತ್ತಿತ್ತು ಎಂದವರು ಹೇಳಿದ್ದಾರೆ. ನಾನು ರಾಜ್ಯ ವಕ್ತಾರ ಹೊಣೆಗಾರಿಕೆಗೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ನಾಯಕರಿಂದ ಒಂದೇ ಒಂದು ಫೋನ್ ಕಾಲ್ ಕೂಡ ಬಂದಿಲ್ಲ. ಈಗ ಪಕ್ಷವನ್ನು ಬಿಟ್ಟ ಮೇಲೆ ಉನ್ನತ ನಾಯಕರಿಂದ ಕರೆ ಬಂದಿದೆ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth