ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ: ಮತ್ತೆ ಇಬ್ಬರು ನಾಯಕರ ಹೆಸರು ಮುನ್ನಲೆಗೆ
ಬೆಂಗಳೂರು: ಲೋಕಸಭೆ ಚುನಾವಣೆಗೆ ಕೇವಲ ಆರು ತಿಂಗಳು ಮಾತ್ರ ಬಾಕಿ ಇದೆ, 14 ತಿಂಗಳ ಹಿಂದೆಯೇ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಅವಧಿ ಮುಗಿದಿದ್ದರೂ ಸ್ಥಾನಗಳ ಪರಿಷ್ಕರಣೆಯಾಗಿಲ್ಲ. ಈ ನಡುವೆ ಮಾಜಿ ಸಚಿವ ಸಿ.ಟಿ.ರವಿ ಹೆಸರು ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆಲವು ದಿನಗಳ ಹಿಂದೆ ಓಡುತ್ತಿದ್ದರೂ, ಇದೀಗ ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರ ಹೆಸರುಗಳು ಈ ಸ್ಥಾನಕ್ಕೆ ಮುನ್ನಲೆಗೆ ಬಂದಿವೆ.
ದಸರಾ ಆಸುಪಾಸಿನಲ್ಲಿ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕವಾಗುವ ನಿರೀಕ್ಷೆಯಿದ್ದು, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೂಡ ದೃಢಪಡಿಸಿದ್ದಾರೆ, ಹೀಗಾಗಿ ರಾಜ್ಯ ಘಟಕದಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸಿ,ಟಿ ರವಿ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರ ಹೆಸರು ಕೇಳಿ ಬರುತ್ತಿದೆ. ಲೋಕಸಭೆ ಚುನಾವಣೆಗೆ ಕೇವಲ ಆರು ತಿಂಗಳು ಮಾತ್ರ ಬಾಕಿ ಇದೆ, 14 ತಿಂಗಳ ಹಿಂದೆಯೇ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಅವಧಿ ಮುಗಿದಿದ್ದರೂ ಸ್ಥಾನಗಳ ಪರಿಷ್ಕರಣೆಯಾಗಿಲ್ಲ ಎಂದು ಅನೇಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಮುಂದಿನ ತಿಂಗಳು ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಇರುವುದರಿಂದ ಕರ್ನಾಟಕ ವಿಷಯ ಚರ್ಚಿಸಲು ಬಿಜೆಪಿ ಹೈಕಮಾಂಡ್ ಗೆ ಸಮಯಾವಕಾಶವಿಲ್ಲ ಎಂದು ಹೇಳುತ್ತಿದ್ದಾರೆ ಎಂಬುದಾಗಿ ಅನೇಕ ಬಿಜೆಪಿ ನಾಯಕರು ದೂರಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಲೋಕಸಭೆ ಚುನಾವಣೆಗೂ ಮುನ್ನ ಹೊಸ ಪದಾದಿಕಾರಿಗಳನ್ನು ಆಯ್ಕೆ ಮಾಡಲು ಹೈಕಮಾಂಡ್ ಮನಸು ಮಾಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಪ್ರತಿ ಜಿಲ್ಲೆಗೂ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಖಜಾಂಚಿಗಳು ಹಾಗೂ ಜಿಲ್ಲಾ ಕಾರ್ಯಕಾರಿ ಸದಸ್ಯರು ಮತ್ತು ಮೋರ್ಚಾಗಳ ಪದಾದಿಕಾರಿಗಳ ತಂಡಗಳಿವೆ, 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬರಬೇಕು ಎಂದು ಬಿಜೆಪಿ ಬಯಸಿದರೇ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮೂಲಗಳು ತಿಳಿಸಿವೆ.
ನಳಿನ್ ಕಟೀಲ್ ಅವರ ಅವಧಿ ಮುಗಿದ ಬಳಿಕ ಸಿ.ಟಿ.ರವಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿಸಲು ಒಂದು ಗುಂಪು ಕಸರತ್ತು ನಡೆಸುತ್ತಿತ್ತು, ಆದರೆ ಸ್ವಂತ ಜಿಲ್ಲೆಯಲ್ಲಿ ಗೆಲ್ಲಲಾಗದೇ ಸ್ಥಾನ ಕಳೆದುಕೊಂಡ ವ್ಯಕ್ತಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡುವುದು ಹೇಗೆ ಎಂದು ಹಲವರು ವಿರೋಧ ವ್ಯಕ್ತ ಪಡಿಸಿದ್ದರು.
ಹೀಗಾಗಿ ರವಿ ಅವರ ವಿರೋಧಿ ಗುಂಪು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಥವಾ ಬಿ ವೈ ವಿಜಯೇಂದ್ರ ಅವರನ್ನು ನೇಮಿಸುವಂತೆ ಒತ್ತಡ ಹೇರುತ್ತಿವೆ. ಈ ಸಂಬಂಧ ಕೇಂದ್ರ ನಾಯಕರು ಅಂತಿಮ ನಿರ್ಧಾರ ಕೈಗಳ್ಳಲಿದ್ದಾರೆ, ನಾವು ಶೀಘ್ರದಲ್ಲೇ ಹೊಸ ಪದಾಧಿಕಾರಿಗಳ ತಂಡವನ್ನು ರಚಿಸುತ್ತೇವೆ” ಎಂದು ವಿವರಿಸಿದ್ದಾರೆ.