ಮಹಾಕಾಳಿಪಡ್ಪು ಅಂಡರ್ ಪಾಸ್ ಕಾಮಗಾರಿ ವಿಳಂಬ:  ಶಾಸಕ ವೇದವ್ಯಾಸ್ ಕಾಮತ್ ಗೆ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ  - Mahanayaka

ಮಹಾಕಾಳಿಪಡ್ಪು ಅಂಡರ್ ಪಾಸ್ ಕಾಮಗಾರಿ ವಿಳಂಬ:  ಶಾಸಕ ವೇದವ್ಯಾಸ್ ಕಾಮತ್ ಗೆ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ 

cpim
01/07/2024

ಮಂಗಳೂರು: ಜಪ್ಪು ಮಹಾಕಾಳಿ ಪಡ್ಪು ರೈಲ್ವೇ ಕೆಳಸೇತುವೆಯ ನಿಧಾನಗತಿಯ ಕಾಮಗಾರಿಯಿಂದ ಈ ರಸ್ತೆಯನ್ನು ಅವಲಂಬಿಸಿರುವ ಜನರು ಪರದಾಡುವುದು ಮಾತ್ರವಲ್ಲದೆ, ನಗರದಲ್ಲಿ ವಾಹನ ದಟ್ಟನೆ ಹೆಚ್ಚಾಗಿ ಅಡಚಣೆಯುಂಟಾಗಿದೆ. ರೈಲ್ಚೇ ಕಾಮಗಾರಿಯ ಪರಿಶೀಲಿಸಬೇಕಾಗಿದ್ದ ಶಾಸಕ ವೇದವ್ಯಾಸ ಕಾಮತ್ ಅವರ ಬೇಜವಾಬ್ದಾರಿಯಿಂದಾಗಿ ಒಂದು ಊರಿಗೆ ಸಂಪರ್ಕಿಸುವ ಮುಖ್ಯರಸ್ತೆಯೇ ಮುಚ್ಚಿ ಹೋಗಿದೆ. ಇದಕ್ಕೆ ಶಾಸಕ ವೇದವ್ಯಾಸ ಕಾಮತ್ ಹಾಗೂ ಬಿಜೆಪಿ ಆಡಳಿತದ ಮಂಗಳೂರು ಮಹಾನಗರ ಪಾಲಿಕೆ ನೇರ ಜವಾಬ್ದಾರಿಯಾಗಿದೆ. ರೈಲ್ವೇ ಕೆಳಸೇತುವೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳದಿದ್ದಲ್ಲಿ ಶಾಸಕ ವೇದವ್ಯಾಸ ಕಾಮತರ ಕಚೇರಿಗೆ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶಿಸಲಿದ್ದೇವೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್ ಎಚ್ಚರಿಕೆ ನೀಡಿದರು.


Provided by

ಜಪ್ಪು ಮಹಾಕಾಳಿ ಪಡ್ಪು ರೈಲ್ವೆ ಕೆಳಸೇತುವೆ ವಿಳಂಬ ಧೋರಣೆಯನ್ನು ಖಂಡಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಹಾಗೂ ಪರ್ಯಾಯ ಒಳರಸ್ತೆಗಳ ಸರಿಪಡಿಸಲು ಒತ್ತಾಯಿಸಿ ಜಪ್ಪು ಮಹಾಕಾಳಿಪಡ್ಪು ರೈಲ್ವೇ ಗೇಟ್ ಬಳಿ ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಾ ಈ ಮಾತುಗಳನ್ನು ಹೇಳಿದರು.

ಕಾಮಗಾರಿ ಸಂಪೂರ್ಣ ಕಳಪೆಮಟ್ಟದ ರೀತಿಯಲ್ಲಿ ಗೋಚರಿಸುತ್ತಿದೆ. ಈ ಹಿಂದೆಯೇ ಕಾಮಗಾರಿ ವೇಳೆ ಕುಸಿತ ಕಂಡ ಪ್ರಕರಣವನ್ನು ಪ್ರಜ್ಞಾಪೂರ್ವಕವಾಗಿ ಮುಚ್ಚಿಡಲಾಯಿತು. ಅಂತಾರಾಷ್ಟ್ರೀಯ ಮಟ್ಟದ ಇಂಜನೀಯರ್ ಗಳನ್ನು ಒಳಗೊಂಡಿರುವ ಕೇಂದ್ರದ ರೈಲ್ವೇ ಇಲಾಖೆಗೆ ಈವರೆಗೂ ಕಾಮಗಾರಿ ಪೂರ್ಣಗೊಳಿಸಲಾಗಿಲ್ಲ. ಕಳೆದ ಹಲವು ಅವಧಿಗಳಿಂದ ಆಯ್ಕೆಗೊಂಡು ಬಂದಿರುವ ಬಿಜೆಪಿ ಸಂಸದರಿಗೂ ಊರಿನ ಅಭಿವೃದ್ಧಿ ಪ್ರಶ್ನೆಯ ಬಗ್ಗೆ ಕಾಳಜಿಗಳೇ ಇಲ್ಲವಾಗಿದೆ ಎಂದು ಟೀಕಿಸಿದರು.

ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಶಾಸಕ ವೇದವ್ಯಾಸ ಕಾಮತ್, ಸಂಸದ ಬ್ರಿಜೇಶ್ ಚೌಟರು ಮತ್ತು ಪಾಲಿಕೆ ಮೇಯರ್ ಮಂಗಳೂರಿನಿಂದ ಕೇರಳದ ಕಣ್ಣೂರುವರೆಗೆ ರೈಲು ಪ್ರಯಾಣಿಸಿ ನೋಡಬೇಕು. ಕೇರಳದ ಸಣ್ಣ ಪುಟ್ಟ ಪಂಚಾಯತ್ ಗಳು ತಮ್ಮ ವ್ಯಾಪ್ತಿಯಲ್ಲಿರುವ ರೈಲ್ವೇ ಕೆಳ ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸಿರುವ ಪರಿ ಕಾಣಬೇಕು. ಇಲ್ಲಿ ಇಷ್ಟೊಂದು ದೊಡ್ಡ ಮಂಗಳೂರು ಮಹಾನಗರ ಪಾಲಿಕೆ, ಅದರೊಳಗೆ ಸ್ಮಾರ್ಟ್ ‌ಸಿಟಿಯ ಸಾವಿರಾರು ಕೋಟಿ ಅನುದಾನ, ಇನ್ನು ಕೇಂದ್ರದ ಹಣಕಾಸು ನೆರವುಗಳಿದ್ದರೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ರೈಲು ಹೊರಟ ತಕ್ಷಣ ಪ್ರಾರಂಭದಲ್ಲಿ ಸಿಗುವ ಮೊದಲ ಮಾನವರಹಿತ ರೈಲ್ವೇಗೇಟ್ ಗೆ ಕೆಳಸೇತುವೆ ನಿರ್ಮಿಸಲು ಈವರೆಗೂ ಸಾಧ್ಯವಾಗಿಲ್ಲ ಎಂಬುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿ ಕೆಲಸದ ಬಗ್ಗೆ ದಿನಾ ಸಾಲು ಸಾಲು ಘಟನೆಗಳ ಬಗ್ಗೆ ವರದಿಗಳು ಕಾಣಸಿಗುತ್ತಿವೆ. ನಿನ್ನೆ ಜಾರ್ಖಾಂಡ್ ಸೇತುವೆ ಮುರಿದು ಬಿದ್ದರೆ, ಮೊನ್ನೆ ಬಿಹಾರದ ಸೇತುವೆಗಳು, ರಾಮ ಮಂದಿರ ಸೋರುತ್ತಿದೆ, ಇನ್ನು ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕುಸಿತದಿಂದ ಹಲವರು ಪ್ರಾಣ ಕಳೆದುಕೊಳ್ಳುವಂತಾಯಿತು. ಪಡೀಲ್ ಹೈವೇ ಮತ್ತು ಪಡೀಲ್ ಬಜಾಲ್ ಕೆಳ ಸೇತುವೆ ಕಾಮಗಾರಿ ಅನುಭವಗಳು ಕಣ್ಣ ಮುಂದೆನೇ ಇದೆ. ಇನ್ನು ಈ ಸೇತುವೆಯ ಕಥೆ ಹೇಗಿರುತ್ತೋ ಎಂದು ಕಾದು ನೋಡಬೇಕಾಗಿದೆ  ಎಂದರು.

ಪ್ರತಿಭಟನೆಯಲ್ಲಿ ಸ್ಥಳೀಯರೂ, ಸಾಮಾಜಿಕ ಹೋರಾಟಗಾರರಾದ ಜೆ.ಇಬ್ರಾಹಿಂ ಜೆಪ್ಪು,ಸ್ಥಳೀಯ ಮಸೀದಿ ಅಧ್ಯಕ್ಷರಾದ ಇಸ್ಮಾಯಿಲ್ ಸೇರಿದಂತೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹೋರಾಟವನ್ನು ಬೆಂಬಲಿಸಿ ಟೆಂಪೋ ಚಾಲಕರ ಸಂಘಟನೆಯ ಮುಖಂಡರಾದ ಮುಕ್ಬಲ್ ಅಹಮ್ಮದ್, ದೇವದಾಸ್ ಪೂಜಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ CPIM ಜಿಲ್ಲಾ ನಾಯಕರಾದ ಪದ್ಮಾವತಿ ಶೆಟ್ಟಿ, ಜಯಂತಿ ಶೆಟ್ಟಿ, ಪ್ರಮೋದಿನಿ ಕಲ್ಲಾಪುರವರು ಭಾಗವಹಿಸಿದ್ದರು.

ಹೋರಾಟದ ನೇತೃತ್ವವನ್ನು CPIM ಕೇಂದ್ರ ವಿಭಾಗ ಸಮಿತಿಯ ಸಂಚಾಲಕರಾದ ಪ್ರಮೀಳಾ ದೇವಾಡಿಗ, CPIM ಬಜಾಲ್ ವಿಭಾಗ ಸಮಿತಿಯ ಸಂಚಾಲಕರಾದ ದೀಪಕ್ ಬಜಾಲ್,ಸ್ಥಳೀಯ ಕಮ್ಯುನಿಸ್ಟ್ ನಾಯಕರಾದ ನಾಗೇಶ್ ಕೋಟ್ಯಾನ್,ಭಾರತಿ ಬೋಳಾರ, ಇತರ CPIM ಯುವ ನಾಯಕರಾದ ವರಪ್ರಸಾದ್ ಬಜಾಲ್, ಲೋಕೇಶ್ ಎಂ., ಅಶೋಕ್ ಸಾಲ್ಯಾನ್, ಜಯಪ್ರಕಾಶ್ ಜಲ್ಲಿಗುಡ್ಡ, ತಯ್ಯುಬ್ ಬೆಂಗರೆ, ಮುಝಾಫರ್, ಅಸುಂತ ಡಿಸೋಜ,ಯೋಗಿತಾ ಉಳ್ಳಾಲ, ನಾಸಿರ್ ಬೆಂಗರೆ ಮುಂತಾದವರು ವಹಿಸಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ