ಬಿಆರ್‌ ಟಿ ‘ಝಾನ್ಸಿ’  ಅಪಘಾತದಲ್ಲಿ ಸಾವು:  ಬಾಯ್ಬಿಡದ ಅರಣ್ಯ ಇಲಾಖೆ!? - Mahanayaka
9:27 AM Thursday 6 - February 2025

ಬಿಆರ್‌ ಟಿ ‘ಝಾನ್ಸಿ’  ಅಪಘಾತದಲ್ಲಿ ಸಾವು:  ಬಾಯ್ಬಿಡದ ಅರಣ್ಯ ಇಲಾಖೆ!?

zancy
07/01/2023

ಚಾಮರಾಜನಗರ: ಬಿಆರ್‌ ಟಿಯಲ್ಲಿ ಕಾಡುಗಳ್ಳರ ಪಾಲಿಗೆ ಸಿಂಹಸ್ವಪ್ನವಾಗಬೇಕಿದ್ದ, ಅರಣ್ಯ ಅಪರಾಧಗಳನ್ನು ಪತ್ತೆಹಚ್ಚಿ ಮಹಾನ್ ಪತ್ತೆದಾರಿ ಎನಿಸಿಕೊಳ್ಳಬೇಕಿದ್ದ ಸ್ನೈಪರ್ ಡಾಗ್ ಝಾನ್ಸಿ ಡಿ.30 ರ ಅಪಘಾತದಲ್ಲಿ ಅಸುನೀಗಿದ್ದು ಅರಣ್ಯ ಇಲಾಖೆ ಮಾಹಿತಿ ಹೊರಗೆಡವದ ಪರಿಣಾಮ ತಡವಾಗಿ ಬೆಳಕಿಗೆ ಬಂದಿದೆ.

ಝಾನ್ಸಿ ಸತ್ತು ಇಷ್ಟು ದಿನಗಳಾಗಿದ್ದರೂ ಅರಣ್ಯ ಇಲಾಖೆ ಮಾಹಿತಿಯನ್ನೇ ಬಹಿರಂಗಪಡಿಸಿಲ್ಲ. ಹೀಗಾಗಿ, ಝಾನ್ಸಿ ಸಾವಿನ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಪುಣಜನೂರು ಕಚೇರಿ ಎದುರು ಇರುವ ರಸ್ತೆಯಲ್ಲಿ ಬೀದಿನಾಯಿ ಅಟ್ಟಿಸಿಕೊಂಡು ಹೋದ ಝಾನ್ಸಿಗೆ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದೆ. ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಸರ್ಕಾರೇತರ ಸಂಸ್ಥೆಯಾದ ಟ್ರಾಫಿಕ್ ಮತ್ತು ಡಬ್ಲುೃಡಬ್ಲುೃಎ್-ಇಂಡಿಯಾ ವತಿಯಿಂದ ಚಂಡೀಗಢ ಇಂಡೋ-ಟಿಬೇಟಿನ್ ಬಾರ್ಡರ್ ಪೊಲೀಸ್ ಪೋರ್ಸ್ (ಐಟಿಬಿಪಿ)ನಲ್ಲಿ ಸುಮಾರು ಆರೇಳು ತಿಂಗಳು ಕಠಿಣ ತರಬೇತಿ ಪಡೆದು ಬಂದಿದ್ದಳು. ಇವಳನ್ನು ನೋಡಿಕೊಳ್ಳಲು ಅರಣ್ಯ ಇಲಾಖೆ ಗಾರ್ಡ್ ಬಸವರಾಜುಗೆ ಹ್ಯಾಂಡ್ಲರ್ ತರಬೇತಿಯನ್ನೂ ನೀಡಲಾಗಿತ್ತು.

ಝಾನ್ಸಿಗೆ ತರಬೇತಿಯಲ್ಲಿ ಬಾಂಬ್ ಪತ್ತೆ, ದುಷ್ಕರ್ಮಿಗಳು ಮತ್ತು ವಸ್ತುಗಳ ವಾಸನೆ ಗ್ರಹಿಸುವಿಕೆ, ಅಪರಾಧಿಗಳ ಬೆನ್ನತ್ತುವ ಚಾಣಾಕ್ಷತೆಯನ್ನು ಕಲಿಸಲಾಗಿತ್ತು. ಈ ತರಬೇತಿಯಲ್ಲಿ ಹಲವು ಶ್ವಾನಗಳು ಮತ್ತು ಹ್ಯಾಂಡ್ಲರ್ಸ್‌ಗಳನ್ನು ಸಿದ್ಧಪಡಿಸಲಾಗಿತ್ತು.

ಭಾರತೀಯ ರೈಲ್ವೆಯ ದಕ್ಷಿಣ ಮತ್ತು ಪಶ್ಚಿಮ ಮಧ್ಯಪ್ರದೇಶ, ಛತ್ತೀಸ್‌ಗಡ, ಒಡಿಶಾ ಅರಣ್ಯ ಇಲಾಖೆ, ಉತ್ತರಪ್ರದೇಶ, ಗುಜರಾತ್, ತಮಿಳುನಾಡು ಅರಣ್ಯ ಇಲಾಖೆಗೆ ಒಂದೊಂದು ಶ್ವಾನ ನೀಡಲಾಗಿತ್ತು. ಅದರಂತೆ, ಕರ್ನಾಟಕದಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಝಾನ್ಸಿ ಸಿಕ್ಕಿದ್ದಳು. 2021ರ ನವೆಂಬರ್‌ನಲ್ಲಿ ಅರಣ್ಯ ಇಲಾಖೆ ಕಚೇರಿಗೆ ಬಂದ ಝಾನ್ಸಿ ಮುಂದೆ ಅಂದಿನ ಹುಲಿ ಯೋಜನೆ ನಿರ್ದೇಶಕ ಸಂತೋಷ್‌ಕುಮಾರ್ ನಿಂತಿದ್ದರು. ಹ್ಯಾಂಡ್ಲರ್ ಸೂಚನೆ ಕೊಟ್ಟ ಕೂಡಲೇ ತನ್ನ ಗ್ರಹಿಕಾ ಶಕ್ತಿ ಪ್ರದರ್ಶಿಸಿ ಝಾನ್ಸಿ ಅಧಿಕಾರಿಗಳಿಗೆ ಗೌರವ ಸಲ್ಲಿಸಿದ್ದಳು. ಈ ವಿಡಿಯೋ ಇಂದಿಗೂ ಬಿಆರ್‌ಟಿ ಅರಣ್ಯ ಇಲಾಖೆಯ ಟ್ವಿಟರ್‌ನಲ್ಲಿದೆ. ದುರಂತವೆಂದರೆ ಕೆಲವು ದಿನಗಳ ಹಿಂದೆ ಮೃತಪಟ್ಟ ಝಾನ್ಸಿಗೆ ಸಂತಾಪ ಸಲ್ಲಿಸುವ ಒಂದೇ ಒಂದು ಪೋಸ್ಟ್ ಕೂಡ ಅಪ್ಲೋಡ್ ಆಗಿಲ್ಲ.

ಭವಿಷ್ಯದ ಭರವಸೆಯಾಗಿದ್ದ ಝಾನ್ಸಿ:

ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ರಾಣಾ ಕಳ್ಳ ಬೇಟೆಗಾರರ ಪಾಲಿಗೆ ಸಿಂಹಸ್ವಪ್ನವಾಗಿತ್ತು. ಹಲವು ಕ್ಲಿಷ್ಟಕರ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಿತ್ತು. ಕಳ್ಳ ಬೇಟೆಗಾರರನ್ನು ಬಂಧಿಸಲು ನೆರವಾಗಿತ್ತು. ವನ್ಯಮೃಗಗಳ ಸೆರೆ ಕಾರ್ಯಾಚರಣೆಯಲ್ಲೂ ಭಾಗವಹಿಸಿ ತನ್ನ ಚಾಣಾಕ್ಷತೆ ತೋರಿತ್ತು. ನಿವೃತ್ತಿ ಅಂಚಿನಲ್ಲಿದ್ದರೂ ರಾಣಾ ಸೇವೆ ಸಲ್ಲಿಸಿತ್ತು.

ಇದರಂತೆಯೇ ಬಿಆರ್‌ಟಿಯಲ್ಲಿ ಝಾನ್ಸಿ ಭವಿಷ್ಯದ ಭರವಸೆಯಾಗಿತ್ತು. ಈ ಅರಣ್ಯಕ್ಕೆ ಈವರೆಗೂ ತರಬೇತಿ ಪಡೆದ ಶ್ವಾನಗಳಿರಲಿಲ್ಲ. ಇದೇ ಮೊದಲ ಬಾರಿಗೆ ಝಾನ್ಸಿ ಆಗಮಿಸಿತ್ತು. ಬಿಆರ್‌ಟಿಗೆ ಶ್ವಾನಬಲ ಬಂದಿತ್ತು. ಝಾನ್ಸಿ ಇನ್ನೂ ಯಾವುದೇ ಕಾರ್ಯಾಚರಣೆಗೆ ಇಳಿದಿರಲಿಲ್ಲ. ಅಷ್ಟರಲ್ಲೇ ಅಪಘಾತದಲ್ಲಿ ಮೃತಪಟ್ಟಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ