ತರಕಾರಿ ವಾಹನದಲ್ಲಿ ರಕ್ತಚಂದನ ಮರದ ತುಂಡು ಸಾಗಾಟ:  5 ಮಂದಿ ಅರೆಸ್ಟ್ - Mahanayaka

ತರಕಾರಿ ವಾಹನದಲ್ಲಿ ರಕ್ತಚಂದನ ಮರದ ತುಂಡು ಸಾಗಾಟ:  5 ಮಂದಿ ಅರೆಸ್ಟ್

chamarajanagara
07/09/2023

ಚಾಮರಾಜನಗರ: ತರಕಾರಿ ವಾಹನದಲ್ಲಿ ರಕ್ತಚಂದನ ಮರದ ತುಂಡುಗಳನ್ನು ಸಾಗಾಣಿಕೆ ಮಾಡುತ್ತಿದ್ದ ವೇಳೆ ವಿಶೇಷ ಹುಲಿ ಸಂರಕ್ಷಣಾ ದಳದ ವಲಯ ಅಧಿಕಾರಿಗಳು ದಾಳಿ ನಡೆಸಿ 5 ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯಲ್ಲಿ ನಡೆದಿದೆ.

ಬೆಂಗಳೂರು ಮೂಲದ ರವಿ(47), ಚಾಮರಾಜನಗರದ ಸರಗೂರು ಮೋಳಯ ಎಸ್.ಎಂ.ಗೋವಿಂದರಾಜು(43), ಆನಂದ್(40), ಸಿ.ಎಸ್.ಆಸ್ಕರ್ ಪಾಷ(63) ಮಹೇಂದ್ರ(32) ಬಂಧಿತ ಆರೋಪಿಗಳು.

ಇವರು ಮಹೇಂದ್ರ ಬೊಲೆರೋ ಪಿಕಪ್ ವಾಹನದಲ್ಲಿ ಅಕ್ರಮವಾಗಿ ರಕ್ತ ಚಂದನ ಮರದ ತುಂಡುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ, ಕೆ.ಪರಮೇಶ್, ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಎನ್.ಪಿ ನವೀನ್ ಕುಮಾರ್ ನೇತೃತ್ವದಲ್ಲಿ ಮೂರು ತಂಡಗಳಾಗಿ ರಚಿಸಿ ದಾಳಿ ನಡೆಸಿದ ವಿಶೇಷ ಹುಲಿ ಸಂರಕ್ಷಣಾ ದಳದ ವಲಯ ಅರಣ್ಯಾಧಿಕಾರಿಗಳು ಆರೋಪಿಗಳಿಂದ ಅಂದಾಜು 50 ಕೆ.ಜಿ ತೂಕದ ರಕ್ತ ಚಂದನದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಗುಂಡ್ಲುಪೇಟೆ ಬಫರ್ ಜೇನ್ ವಲಯದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಾಚರಣೆ ವೇಳೆ ವಿಶೇಷ ಹುಲಿ ಸಂರಕ್ಷಣಾ ದಳದ ಉಪ ವಲಯ ಅರಣ್ಯಾಧಿಕಾರಿ ರಾಮಲಿಂಗಪ್ಪ ಎಸ್, ಮುದ್ದರಾಜು ಸಿ.ಎನ್, ಭರತ್ ಜಿ.ಪಿ, ಕಿರಣ್ ಕುಮಾರ್ ಬಿ.ಎಸ್, ನವೀನ್‍ಕುಮಾರ್, ಸಿದ್ದು ಅರಿ, ರಮೇಶ್ ಎಸ್.ಮಠಪತಿ, ಗಸ್ತು ವನಪಾಲಕರಾದ ಅಭಿಲಾಷ ಡಿ, ಪರಸಪ್ಪ ಹೆಚ್ ಮಾದ, ಶೇಖರ್ ಆರ್ ಜಾದವ್, ಶ್ರೀಕಾಂತ, ಕುಮಾರ್, ಕರಿಗೌಡ, ಬಸವೇಗೌಡ ಹಾಗೂ ಇಲಾಖಾ ಸಿಬ್ಬಂದಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ