ಚಾತುವರ್ಣ ವ್ಯವಸ್ಥೆ ಮಹಿಳೆ ಮತ್ತು ಶೂದ್ರರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ - Mahanayaka

ಚಾತುವರ್ಣ ವ್ಯವಸ್ಥೆ ಮಹಿಳೆ ಮತ್ತು ಶೂದ್ರರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ

siddaramaiah
02/07/2023

ಬೆಂಗಳೂರು: ಚಾತುವರ್ಣ ವ್ಯವಸ್ಥೆ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರು ಮತ್ತು‌ ಶೂದ್ರರಿಗೆ ಶಿಕ್ಷಣ ಭಾಗ್ಯವನ್ನು ಕಲ್ಪಿಸಿ ಕ್ರಾಂತಿ ಮಾಡಿದವರು ವಚನಕಾರರು ಮತ್ತು ಬಸವಣ್ಣನವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.


Provided by

ಟೌನ್ ಹಾಲ್ ನಲ್ಲಿ ಫ.ಗು.ಹಳಕಟ್ಟಿ ಫೌಂಡೇಶನ್ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ.ಗು.ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಅತ್ಯಂತ ಕೆಳ ಜಾತಿಯಲ್ಲಿ ಜನಿಸಿ ಅತ್ಯುನ್ನತ ಎತ್ತರಕ್ಕೆ ಏರಿದ ಅಲ್ಲಮಪ್ರಭುರನ್ನು ಅನುಭವ ಮಂಟಪದ ಮುಖ್ಯಸ್ಥರನ್ನಾಗಿಸಿದ್ದರು. ಈ ಅನುಭವ ಮಂಟಪದ ಆಶಯವನ್ನು, ವಚನಗಳ ಮಹತ್ವವನ್ನು ಮುಂದಿನ ತಲೆಮಾರುಗಳಿಗೆ ದಾಟಿಸಿದವರಲ್ಲಿ ಫ.ಗು.ಹಳಕಟ್ಟಿಯವರು ಪ್ರಮುಖರು ಎಂದರು.


Provided by

“ಹುಟ್ಟುವಾಗ ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ, ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ” ಎನ್ನುವ ಕುವೆಂಪು ಅವರ ಮಾತನ್ನು ಪ್ರಸ್ತಾಪಿಸಿ ವಿದ್ಯಾವಂತರೂ ಮೌಡ್ಯ ಮತ್ತು ಜಾತಿಯ ವ್ಯಸನಿಗಳಾಗಿದ್ದಾರೆ ಎಂದು ತಿಳಿಸಿದರು.

ಚಾತುವರ್ಣ ವ್ಯವಸ್ಥೆ ಕಾರಣಕ್ಕೆ ಶಿಕ್ಷಣದಿಂದ, ಸಂಪತ್ತಿನಿಂದ ಶೂದ್ರ ಸಮುದಾಯ ವಂಚಿತವಾಗಿತ್ತು. ಅದಕ್ಕೇ ಕಾಯಕ ಮತ್ತು ದಾಸೋಹ ಸಂಸ್ಕಾರದ ಮೂಲಕ ಸರ್ವರಿಗೂ ಶಿಕ್ಷಣ ಮತ್ತು ಅವಕಾಶಗಳಲ್ಲಿ ಸಮಪಾಲು ಸಿಗುವಂತೆ ಮಾಡಿದ್ದು ಬಸವಣ್ಣನವರು. ನಾನು ಮೊದಲ ಬಾರಿ ಮತ್ತು ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಇದೇ ಕಾಯಕ ಮತ್ತು ದಾಸೋಹ ಸಂಸ್ಕೃತಿಯನ್ನು ಪಾಲಿಸುತ್ತಿದ್ದೇನೆ ಎಂದರು.

ಪ್ರಶಸ್ತಿ ಪುರಸ್ಕೃತರಾದ ವಚನ ಕ್ಷೇತ್ರದಲ್ಲಿ ಮಹತ್ವದ ಮೌಲ್ಯಯುತ ಸಾಹಿತ್ಯಿಕ ಕೆಲಸ ಮಾಡಿರುವ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ, ಸಮಾಜ ಸೇವಕಿ ಶ್ರೀಮತಿ ಎಸ್.ಜಿ.ಸುಶೀಲಮ್ಮ ಅವರನ್ನು  ಸನ್ಮಾನಿಸಲಾಯಿತು.

ಬೇಲಿಮಠದ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್  ವಹಿಸಿದ್ದರು. ಶ್ರೀಮತಿ ಶೀಲಾ ಹಳಕಟ್ಟಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಪವಿತ್ರ ಹಳಕಟ್ಟಿ ಸೇರಿ ಹಲವು ಗಣ್ಯರು ವೇದಿಕೆಯಲ್ಲಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ