ಕೆಲಸ ಕೊಡುವುದಾಗಿ ಯುವತಿಯನ್ನು ಕರೆದೊಯ್ದು 7 ಬಾರಿ ಮಾರಾಟ ಮಾಡಿದರು | ಭಾರೀ ಮಾನವ ಕಳ್ಳ ಸಾಗಣೆ ಜಾಲ ಪತ್ತೆ - Mahanayaka
9:59 PM Thursday 19 - September 2024

ಕೆಲಸ ಕೊಡುವುದಾಗಿ ಯುವತಿಯನ್ನು ಕರೆದೊಯ್ದು 7 ಬಾರಿ ಮಾರಾಟ ಮಾಡಿದರು | ಭಾರೀ ಮಾನವ ಕಳ್ಳ ಸಾಗಣೆ ಜಾಲ ಪತ್ತೆ

09/02/2021

ಭೋಪಾಲ್: ಕೆಲಸ ಕೊಡುವುದಾಗಿ ನಂಬಿಸಿ, 18 ವರ್ಷದ ಯುವತಿಯನ್ನು 7 ತಿಂಗಳುಗಳಲ್ಲಿ 7 ಬಾರಿ ಮಾರಾಟ ಮಾಡಿದ್ದು, ಈ ಅನ್ಯಾಯವನ್ನು ಸಹಿಸಲು ಸಾಧ್ಯವಾಗದ ಯುವತಿ  ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಿಂದಾಗಿ ಭಾರೀ ಮಾನವ ಕಳ್ಳ ಸಾಗಣೆ ಜಾಲವೊಂದು ಪತ್ತೆಯಾಗಿದೆ.

ಛತ್ತೀಸ್ ಗಡದ ಜಶ್ಪುರದ ಬುಡಕಟ್ಟು ಸಮುದಾಯದ ಬಾಲಕಿ, ತಂದೆಯ ಕೃಷಿ ಕೆಲಸಗಳಿಗೆ ಸಹಾಯ ಮಾಡುತ್ತಾ ಹೇಗೋ ಕಷ್ಟಪಟ್ಟು ನೆಮ್ಮದಿಯಿಂದ ಜೀವಿಸಿಕೊಂಡಿದ್ದಳು.  ಇದೇ ಸಂದರ್ಭದಲ್ಲಿ ಅವರ ಸಂಬಂಧಿಕನೋರ್ವ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿದ್ದಾನೆ.

ಕೆಲವು ದಿನಗಳ ಬಳಿಕ ಯುವತಿಯನ್ನು ಛತರ್ಪುರಕ್ಕೆ ಕರೆದೊಯ್ಯಲಾಗಿದೆ. ಅಲ್ಲಿ ಯುವತಿಯನ್ನು ಅಪಹರಿಸಿ, ಪೋಷಕರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ, ಕೊಂದು ಹಾಕುವುದಾಗಿ ಬೆದರಿಸಿದ್ದಾರೆ.


Provided by

ಇದರಿಂದ ಭೀತರಾದ ಯುವತಿಯ ಪೋಷಕರು ಪೊಲೀಸರ ಮೊರೆ ಹೋಗಿದ್ದು,  ಈ ವೇಳೆ ಯುವತಿಯನ್ನು ಕೆಲಸಕ್ಕೆ ಕರೆದುಕೊಂಡು ಹೋದ ಸಂಬಂಧಿಕ ಪಂಚಮ್ ಸಿಂಗ್ ರೈ ಹಾಗೂ ಆತ ಪತ್ನಿಯನ್ನು ಬಂಧಿಸಲಾಗಿದೆ.

ಪೊಲೀಸರ ವಿಚಾರಣೆಯ ವೇಳೆ, ನಾವು ಬಾಲಕಿಯನ್ನು 20 ಸಾವಿರ ರೂ. ಕಲ್ಲು ರೈಕ್ಟಾರ್ ಗೆ 7 ತಿಂಗಳ ಹಿಂದೆ ಮಾರಾಟ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.  ಹೀಗೆ ಯುವತಿಯು 7 ಬಾರಿ ಮಾರಾಟಕ್ಕೊಳಗಾಗಿದ್ದಾಳೆ. ಕೊನೆಯದಾಗಿ ಉತ್ತರ ಪ್ರದೇಶದ ಲಲಿತ್ ಪುರದ ಸಂತೋಷ್ ಕುಶ್ವಾಹ್ ಎಂಬಾತ 70 ಸಾವಿರ ರೂ.ಗೆ ಯುವತಿಯನ್ನು ಖರೀದಿಸಿ, ಆತನ ಬುದ್ಧಿಮಾಂಧ್ಯ ಮಗ ಬಬ್ಲೂ ಕುಶ್ವಾಹ್ ಜೊತೆಗೆ ವಿವಾಹ ಮಾಡಿಸಿದ್ದ.

ಕೆಲಸವನ್ನು ನಿರೀಕ್ಷಿಸಿ ತೆರಳಿದ್ದ ತನ್ನ ಜೀವನದಲ್ಲಿ ನಡೆದ ಘಟನೆಗಳಿಂದ ಬೇಸತ್ತ ಅಮಾಯಕಿ ಈ ನರಕದಿಂದ ಬಿಡುಗಡೆ ಹೊಂದಲು ಕೊನೆಗೂ ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಪ್ರಕರಣದ ಬಗ್ಗೆ ಇದೀಗ ಛತ್ತರ್ಪುರ ಪೊಲೀಸರು ತನಿಖೆ ಆರಂಭಿಸಿದ್ದು, ಛತ್ತಿಸ್ ಗಡ, ಮಧ್ಯಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯದ ಯುವತಿಯರನ್ನು ಇತರ ರಾಜ್ಯಗಳಿಗೆ ಕಳ್ಳ ಸಾಗಣೆ ಮಾಡುತ್ತಿರುವ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ