ಕೊರೊನಾದಿಂದ ಒಂದೇ ಕುಟುಂಬದ 8 ಮಂದಿ ಸಾವು | ಕಣ್ಣೀರು ಹಾಕಿದ ಕುಟುಂಬದ ಮುಖ್ಯಸ್ಥ

ಲಕ್ನೋ: ಕೊರೊನಾಕ್ಕೆ ಒಂದೇ ಕುಟುಂಬದ 8 ಮಂದಿ ಕೇವಲ 25 ದಿನಗಳಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಕುಟುಂಬದಲ್ಲಿ ಒಬ್ಬರ ಹಿಂದೊಬ್ಬರು ಕೊರೊನಾಕ್ಕೆ ಬಲಿಯಾಗುವುದನ್ನು ಕಂಡ ಕುಟುಂಬದ ಸದಸ್ಯರೊಬ್ಬರು ಈ ಕಣ್ಣೀರಿನ ಕಥೆಯನ್ನು ವಿವರಿಸಿದ್ದಾರೆ.
ಕುಟುಂಬದ ಮುಖ್ಯಸ್ಥರಾದ ಓಂಕಾರ್ ಸಿಂಗ್ ಅವರು ಈ ಘಟನೆಯನ್ನು ವಿವರಿಸಿದ್ದು, ನನ್ನ ನಾಲ್ವರು ಸಹೋದರರು , ಇಬ್ಬರು ಸಹೋದರಿಯರು ತಾಯಿ ಮತ್ತು ದೊಡ್ಡಮ್ಮನನ್ನು ನಾನು ಕಳೆದುಕೊಂಡಿದ್ದೇನೆ. ಒಂದೇ ದಿನದಲ್ಲಿ ನನ್ನ ಕುಟುಂಬದ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಮೃತದೇಹವನ್ನು ಹೊರುವ ವೇಳೆ ನನ್ನ ಮನಸ್ಸು ಭಾರವಾಗಿದೆ ಎಂದು ಅವರು ಕಣ್ಣೀರು ಹಾಕಿದ್ದಾರೆ
ನನ್ನ ಸಹೋದರನಿಗೆ ಜ್ವರ ಬಂದಿದ್ದು, ಹೀಗಾಗಿ ಹಳ್ಳಿಯಲ್ಲಿಯೇ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ. ಆದರೆ, ಆತನ ಆರೋಗ್ಯ ಇನ್ನಷ್ಟು ಹದಗೆಟ್ಟಾಗ ಬಿಕೆಟಿಯ ರಾಮ್ ಸಾಗರ್ ಮಿಶ್ರಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಆದರೆ ಅಲ್ಲಿ ಆಮ್ಲಜನಕದ ಕೊರತೆಯಿಂದ ಆತ ನಿಧನ ಹೊಂದಿದ್ದಾನೆ. ಅಣ್ಣನ ಸಾವಿನ ಸುದ್ದಿ ಕೇಳಿ ನನ್ನ ದೊಡ್ಡಮ್ಮ ಆಘಾತಕ್ಕೊಳಗಾಗಿ ನಿಧನರಾದರು. ಇನ್ನು ಉಳಿದ ನನ್ನ ಸಹೋದರನಿಗೂ ಕೊರೊನಾ ಅಂಟಿಕೊಂಡಿದೆ. ಆತನನ್ನು ಚಾರ್ಬಾಗ್ ಬಳಿಯ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಆತನ ಪ್ರಾಣವೂ ಹೋಗಿದೆ. ಈ ರೀತಿಯ ಘಟನೆಗಳಿಂದ ನನ್ನ ಕುಟುಂಬದ 8 ಮಂದಿಯನ್ನು ಕಳೆದುಕೊಂಡೆ ಎಂದು ಓಂಕಾರ್ ಸಿಂಗ್ ಕಣ್ಣೀರು ಹಾಕಿದ್ದಾರೆ.