ಪಾತಕಿ ದಾವೂದ್ ಇಬ್ರಾಹಿಂನ ಆರು ಆಸ್ತಿಗಳ ಹರಾಜು | ಭಯದಿಂದ 2000 ಇಸವಿಯಿಂದಲೂ ಬಿಡ್ ಮಾಡಲು ಒಬ್ಬರೂ ಬಂದಿರಲಿಲ್ಲವಂತೆ!

11/11/2020

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹೀಂನ ಆರು ಆಸ್ತಿಗಳನ್ನು ಹರಾಜು ಮಾಡಲಾಗಿದ್ದು, ಈ ಪೈಕಿ 4 ಆಸ್ತಿಗಳನ್ನು  ದೆಹಲಿ ಮೂಲದ ವಕೀಲ ಭೂಪೇಂದ್ರ ಭಾರದ್ವಾಜ್ ಮತ್ತು 2 ಆಸ್ತಿಗಳನ್ನು ವಕೀಲ ಅಜಯ್ ಶ್ರೀವಾಸ್ತವ್ ಅವರು ಹರಾಜಿನಲ್ಲಿ ಪಡೆದುಕೊಂಡಿದ್ದಾರೆ.

ದಾವೂದ್ ಹುಟ್ಟಿ ಬೆಳೆದ ರತ್ನಾಗಿರಿಯಲ್ಲಿ ಈ ಆರು ಆಸ್ತಿಗಳಿದ್ದವು. ದಾವೂದ್ ನಿಂದ ವಶಪಡಿಸಿಕೊಳ್ಳಲಾಗಿದ್ದ 11 ಆಸ್ತಿಗಳನ್ನು  2000 ಇಸವಿಯಿಂದ ಹರಾಜು ಹಾಕಲಾಗುತ್ತಿದೆ. ಈ ಹರಾಜು ಪ್ರಕ್ರಿಯೆ ಕೊಲಾಬಾದ ಡಿಪ್ಲೊಮ್ಯಾಟ್ ಹೊಟೇಲ್ ನಲ್ಲಿ ನಡೆಯುತ್ತಿತ್ತು. ಅಧಿಕಾರಿಗಳು ಬೆಳಗ್ಗೆ ಬಂದು ಕುಳಿತುಕೊಂಡದರೂ ರಾತ್ರಿಯಾದರೂ ಯಾರೂ ಕೂಡ ಬಿಡ್ ಮಾಡಲು ಬರುತ್ತಿರಲಿಲ್ಲ. ದಾವೂದ್ ಇಬ್ರಾಹಿಂ ಕರಾಚಿಯಲ್ಲಿದ್ದರೂ, ಆತನಿಗೆ ಮುಂಬೈಯಲ್ಲಿ ಇನ್ನೂ ಜನರು ಭಯಪಡುತ್ತಿರುವುದು ಆಶ್ಚರ್ಯಕರವಾಗಿದೆ.

ಇನ್ನೂ ಇದೀಗ ನಡೆದಿರುವ ಹರಾಜು ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕ ಮಾಡಲಾಗಿದೆ. ಇದೀಗ 6 ಆಸ್ತಿಗಳನ್ನು ಹರಾಜು ಮಾಡಲಾಗಿದೆ. ಏಳನೇ ಆಸ್ತಿಯನ್ನು ಹರಾಜು ಮಾಡಲು ಕಾನೂನಿನ ಕೆಲವು ತೊಡಕುಗಳಿವೆ ಎಂದು ಹೇಳಲಾಗಿವೆ.

ಇನ್ನೂ ದಾವೂದ್ ಇಬ್ರಾಹಿಂನ ಎರಡು ಆಸ್ತಿಗಳನ್ನು ಹರಾಜಿನಲ್ಲಿ ಪಡೆದ ಅಜಯ್ ಶ್ರೀವಾಸ್ತವ್ ಶಿವಸೇನೆ ಜೊತೆಗೆ ನಂಟು ಹೊಂದಿದ್ದಾರೆ. ಹರಾಜು ಪ್ರಕ್ರಿಯೆಯ ಬಳಿಕ ಮಾತನಾಡಿದ ಅವರು,  ದಾವೂದ್ ಇಬ್ರಾಹಿಂಗೆ ನಾವು ಭಯಪಡಬೇಕಾದ ಅಗತ್ಯವಿಲ್ಲ ಎಂಬ ಸಂದೇಶ ರವಾನಿಸಲು ನಾನು ಈ ಆಸ್ತಿಯನ್ನು ಪಡೆದುಕೊಂಡಿದ್ದೇನೆ.  ಭಯೋತ್ಪಾದನೆಯ ವಿರುದ್ಧ ನಮ್ಮ ಕೇಂದ್ರ ಸಂಸ್ಥೆಗಳನ್ನು ನಾವು ಪ್ರೋತ್ಸಾಹಿಸ ಬೇಕಿದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿ

Exit mobile version