ರುಂಡ—ಮುಂಡ ಬೇರ್ಪಟ್ಟ ಐದಾರು ಕುರಿ, ಮೇಕೆಗಳ ಮೃತದೇಹ ನದಿಯಲ್ಲಿ ಪತ್ತೆ: ವಾಮಾಚಾರದ ಶಂಕೆ

08/02/2024
ಚಿಕ್ಕಮಗಳೂರು: ಕಾಫಿನಾಡಲ್ಲಿ ಭದ್ರಾ ನದಿ ಬಳಿಯೇ ಬೃಹತ್ ವಾಮಾಚಾರವೊಂದು ನಡೆದಿದ್ದು, ವಾಮಾಚಾರಕ್ಕೆ ಕಪ್ಪು ಬಣ್ಣದ ಕುರಿ, ಮೇಕೆಗಳ ಬಲಿ ನೀಡಲಾಗಿದೆ.
ನದಿಯಲ್ಲಿ ರುಂಡ–ಮುಂಡ ಬೇರ್ಪಟ್ಟ ಕುರಿ–ಮೇಕೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕಳಸ ತಾಲೂಕಿನ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಬಳಿ ಈ ಘಟನೆ ನಡೆದಿದೆ.
ಭದ್ರಾ ನದಿಯಲ್ಲಿ ಐದಾರು ಕುರಿ-ಮೇಕೆಗಳ ಶವ ತೇಲುತ್ತಿರುವುದು ಪತ್ತೆಯಾಗಿದೆ. ಅಲ್ಲದೇ ನದಿ ದಡದಲ್ಲಿ ವಾಮಾಚಾರಕ್ಕೆ ಬಳಸಿರುವ ವಸ್ತುಗಳು ಪ್ರತ್ಯಕ್ಷವಾಗಿದ್ದು, ಕೂದಲು, ಉಗುರು, ಮಣ್ಣಿನ ಬೊಂಬೆಗಳು, ರಕ್ತ ವಾಮಾಚಾರಕ್ಕೆ ಬಳಕೆ ಮಾಡಲಾಗಿದೆ.
ರಾತ್ರಿ ವೇಳೆ ನಡೆದಿರುವ ವಾಮಾಚಾರ, ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಹೊರನಾಡಿಗೆ ಹೋಗುವ ಮುಖ್ಯರಸ್ತೆ ಬಳಿಯೇ ಕೃತ್ಯ ನಡೆಸಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿದ್ದು, ನದಿಯಿಂದ ಮೇಕೆಗಳ ಶವ ಹೊರಕ್ಕೆ ತೆಗೆದು ವಾಮಾಚಾರದ ರಹಸ್ಯ ಭೇದಿಸಲು ಪೊಲೀಸರು ಮುಂದಾಗಿದ್ದಾರೆ.