ಕಂಬಳದ ಆಹ್ವಾನದಿಂದ ಬ್ರಿಜೇಶ್ ಭೂಷಣ್ ಹೆಸರು ಕೈಬಿಡಲು ತೀರ್ಮಾನ
ಬೆಂಗಳೂರು: ಕಂಬಳಕ್ಕೆ ಬ್ರಿಜೇಶ್ ಭೂಷಣ್ ಆಹ್ವಾನದಿಂದ ಉಂಟಾದ ವಿವಾದಕ್ಕೆ ಕಂಬಳ ಸಮಿತಿ ಆಯೋಜಕರು ತೆರೆ ಎಳೆದಿದ್ದಾರೆ. ವಿವಾದದ ಬೆನ್ನಲ್ಲೆ ಆಹ್ವಾನ ಪತ್ರಿಕೆಯಿಂದ ಬ್ರಿಜ್ ಭೂಷಣ್ ಹೆಸರು ಕೈ ಬಿಡಲು ನಿರ್ಧರಿಸಲಾಗಿದ್ದು, ಆಹ್ವಾನ ಪತ್ರಿಕೆ ಬದಲು ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ ಬೆಂಗಳೂರು ಕಂಬಳಕ್ಕೆ ಬ್ರಿಜ್ ಭೂಷಣ್ ಆಗಮನ ಇಲ್ಲ.
ಕಂಬಳಕ್ಕೆ ಬ್ರಿಜ್ ಭೂಷಣ್ ಗೆ ಆಹ್ವಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವಿವಾದ ಕೇಳಿಬಂದಿತ್ತು. ಶಾಸಕ ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ಪ್ರತಿಕ್ರಿಯಿಸಿ, ಕಂಬಳ ಒಂದು ಕ್ರೀಡೆ, ಇದು ದೊಡ್ಡ ಕಾರ್ಯಕ್ರಮ ಆಗಿದೆ. ಇದಕ್ಕಾಗಿ ಬೇರೆ ಬೇರೆ ಸಂಘಟನೆಯವರು ಬಂದು ಅನೇಕ ಮನವಿ ಮಾಡುತ್ತಾರೆ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬಂದು ವೇದಿಕೆಗೆ ಅವರ ಹೆಸರನ್ನು ಇಡಲು ಹೇಳುತ್ತಾರೆ. ಇನ್ನೊಂದು ಕಡೆ ಸಿದ್ದಿ ಜನಾಂಗದವರು ಬಂದು ಕೋರಿದ್ದರು. ಬ್ರಿಜೇಶ್ ಭೂಷಣ್ ಅವರು ಮೊನ್ನೆಯೇ ತಾವು ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ ಎಂದಿದ್ದರು. ಆದರೆ ಇನ್ವಿಟೇಷನ್ ನಲ್ಲಿ ಅವರ ಹೆಸರಿದೆ.
ಅವರು ಕಂಬಳಕ್ಕೆ ಬರೋದಿಲ್ಲ. ಹೀಗಾಗಿ ನಾವು ಆಹ್ವಾನ ಪತ್ರಿಕೆಯನ್ನು ಕೂಡ ನಾವು ಬದಲು ಮಾಡುತ್ತೇವೆ. ಕಂಬಳ ಎಂದರೆ ಅಲ್ಲಿ ಕಾಂಗ್ರೆಸ್ ನವರು ಇದ್ದಾರೆ ಹಾಗೆ ಬಿಜೆಪಿಯವರು ಇದ್ದಾರೆ ಎಂದರು.
ನವೆಂಬರ್ 25 ರಂದು ನಡೆಯಬೇಕಿದ್ದ ಸಭಾ ಕಾರ್ಯಕ್ರಮದಲ್ಲಿ ಕುಸ್ತಿಪಟುಗಳನ್ನು ಸನ್ಮಾನಿಸಬೇಕಿದ್ದ ಸಂಸದ ಬ್ರಿಜ್ ಭೂಷಣ್. ಬ್ರಿಜ್ ಭೂಷಣ್ ಕುಡುಬಿ ಮತ್ತು ಸಿದ್ದಿ ಜನಾಂಗದವರಿಗೆ ಗೋವಾದಲ್ಲಿ ಕುಸ್ತಿ ತರಬೇತಿ ನೀಡಿದ್ದರು.
ಈ ಸೇವೆಯನ್ನು ಪರಿಗಣಿಸಿ ಕಂಬಳಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ ಬ್ರಿಜ್ ಭೂಷಣ್ ಕಂಬಳಕ್ಕೆ ಆಗಮಿಸುವ ಬಗ್ಗೆ ಕನ್ಫರ್ಮೇಷನ್ ನೀಡಿರಲಿಲ್ಲ.