ದಾರಿ ಉದ್ದಕ್ಕೂ ಗಬ್ಬೆಬ್ಬಿಸುತ್ತಿರುವ ಧರ್ಮಸ್ಥಳ ಯಾತ್ರಿಗಳು: ಸ್ಥಳೀಯರಿಂದ ಆಕ್ರೋಶ
ಕೊಟ್ಟಿಗೆಹಾರ: ಮಲೆನಾಡು ದಕ್ಷಿಣ ಕನ್ನಡ ಸಂಪರ್ಕಿಸುವ ದಾರಿ ಉದ್ದಕ್ಕೂ ಕಸದ ರಾಶಿಗಳೇ ಕಂಡು ಬರುತ್ತಿವೆ. ರಾಜ್ಯದ ವಿವಿಧ ಮೂಲೆಗಳಿಂದ ಪಾದಯಾತ್ರೆ ಕೈಗೊಳ್ಳುವ ಧರ್ಮಸ್ಥಳ ಯಾತ್ರಿಕರಿಂದಾಗಿ ಇದೀಗ ಇಲ್ಲಿನ ಸಾರ್ವಜನಿಕರು ತೊಂದರೆಗೀಡಾಗುತ್ತಿದ್ದಾರೆ.
ಧರ್ಮಸ್ಥಳ ಯಾತ್ರಿಗಳು ಸಾಗುವ ಮಾರ್ಗದುದ್ದಕ್ಕೂ ಕಸದ ರಾಶಿ ಬೀಳುತ್ತಿದ್ದು, ಪ್ಲಾಸ್ಟಿಕ್ ಬಾಟಲ್ ಹಾಗೂ ಪ್ಲಾಸ್ಟಿಕ್ ತಟ್ಟೆ, ಅರೆ ಬರೆ ತಿಂದೆಸೆದ ಪಾತ್ರೆಗಳು ರಸ್ತೆ ಬದಿಯಲ್ಲಿ ಗಬ್ಬೆದ್ದು ನಾರುವಂತಾಗಿದೆ.
ಬಣಕಲ್ ಮುಖ್ಯ ರಸ್ತೆಯಲ್ಲಿ ರಾಶಿ ರಾಶಿ ಕಸಗಳು ಪತ್ತೆಯಾಗಿವೆ. ಧರ್ಮಸ್ಥಳ ಪಾದಯಾತ್ರೆಗಳ ವಿರುದ್ಧ ಇದೀಗ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೇಮಾವತಿ ನದಿಯ ಉದ್ದಕ್ಕೂ ಸ್ನಾನ ಹಾಗೂ ಶೌಚ ಮಾಡಿ ಹೇಮಾವತಿ ನದಿ ಮಲಿನವಾಗುತ್ತಿದೆ. ಶಿವರಾತ್ರಿ ಹಿನ್ನೆಲೆಯಲ್ಲಿ ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ. ಬಣಕಲ್ ಕೊಟ್ಟಿಗೆಹಾರ, ಚಾರ್ಮುಡಿ ಘಾಟ್ ಮೂಲಕ ಧರ್ಮಸ್ಥಳಕ್ಕೆ ತೆರಳುವ ಭಕ್ತರು ಇದೀಗ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದಾರೆನ್ನುವ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ.