ಮೂಡಿಗೆರೆ ಜೆಡಿಎಸ್ ನಲ್ಲಿ ಭಿನ್ನಮತ ಸ್ಪೋಟ | ಬಿ.ಬಿ.ನಿಂಗಯ್ಯ ವಿರೋಧಿ ಬಣದಿಂದ ಬಹಿರಂಗ ಸಭೆ

ಕೊಟ್ಟಿಗೆಹಾರ: ಮೂಡಿಗೆರೆ ಜೆಡಿಎಸ್ ನಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು ಸ್ವಪಕ್ಷದ ಮುಖಂಡರು, ಕಾರ್ಯಕರ್ತರು ಬಿ.ಬಿ ನಿಂಗಯ್ಯ ಅವರಿಗೆ ಟಿಕೇಟ್ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬಣಕಲ್ನಲ್ಲಿ ಜೆಡಿಎಸ್ ಪಕ್ಷದ ಬಿ.ಬಿ ನಿಂಗಯ್ಯ ವಿರೋಧಿ ಬಣದಿಂದ ಬಹಿರಂಗ ಸಭೆ ನಡೆದಿದ್ದು ಸಭೆಯಲ್ಲಿ ಬಿ.ಬಿ ನಿಂಗಯ್ಯಗೆ ಟಿಕೇಟ್ ನೀಡಲು ಸ್ವಪಕ್ಷದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣಗೌಡ ಮಾತನಾಡಿ, ಬಿ.ಬಿ ನಿಂಗಯ್ಯ ಅವರು ಕಾರ್ಯಕರ್ತರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಶಾಸಕರಾಗಿದ್ದ ಸಂದರ್ಭದಲ್ಲಿ ತಾಲ್ಲೂಕಿಗೆ ಯಾವುದೇ ಕೊಡುಗೆ ನೀಡಲಿಲ್ಲ. ಹೆಚ್.ಡಿ ಕುಮಾರಸ್ವಾಮಿ ಅವರ ಬಳಿ ನಿಯೋಗ ಹೋಗಿ ಬಿ.ಬಿ.ನಿಂಗಯ್ಯ ಅವರಿಗೆ ಟಿಕೇಟ್ ನೀಡದಂತೆ ಮನವಿ ಮಾಡಿದ್ದರೂ ಮೊದಲ ಪಟ್ಟಿಯಲ್ಲೇ ಬಿ.ಬಿ ನಿಂಗಯ್ಯ ಅವರ ಹೆಸರು ಸೇರಿಸಿದ್ದು ಸರಿಯಲ್ಲ. ಬಿ.ಬಿ ನಿಂಗಯ್ಯ ಅವರನ್ನು ಹೊರತು ಪಡಿಸಿ ಬೇರೆ ಯಾರಿಗೆ ಟಿಕೇಟ್ ನೀಡಿದರೂ ಬೆಂಬಲ ನೀಡುತ್ತೇವೆ ಎಂದರು.
ಹಿಂದಿನ ಚುನಾವಣೆಗಳಲ್ಲಿ ಬಿ.ಬಿ ನಿಂಗಯ್ಯ ಅವರು ಗ್ರಾಮ ಗ್ರಾಮಗಳಿಗೆ ಹೋಗಲಿಲ್ಲ. ತಾಲ್ಲೂಕಿನ ಪಂಚರತ್ನ ಯೋಜನೆ ರಥಯಾತ್ರೆ ಬಂದ ಸಂದರ್ಭದಲ್ಲಿ 5 ಹೋಬಳಿಗಳನ್ನು ಕಡೆಗಣಿಸಲಾಗಿದೆ. ಬಿ.ಬಿ ನಿಂಗಯ್ಯ ಅವರಿಗೆ ಟಿಕೇಟ್ ನೀಡಿದರೇ ಮುಂದಿನ ದಿನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಭೆ ನಡೆಸಿ ವಿರೋಧ ವ್ಯಕ್ತಪಡಿಸಲಾಗುವುದು ಎಂದರು.
ಜೆಡಿಎಸ್ ಮುಖಂಡ ಅಜಿತ್ಗೌಡ ಬಾಳೂರು ಮಾತನಾಡಿ ಈ ಬಹಿರಂಗ ಸಭೆಯಲ್ಲಿ ಸೇರಿರುವುದು ಜೆಡಿಎಸ್ ಪಕ್ಷದ ನಿಷ್ಟವಂತ ಕಾರ್ಯಕರ್ತರು. ಬಿ.ಬಿ ನಿಂಗಯ್ಯ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಪಾರಂ ನಂ 53 ರ ದಾಖಲೆಗಳನ್ನು ಬಡವರ್ಗಕ್ಕೆ ಮಾಡಿಕೊಟ್ಟಿಲ್ಲ. ಪಕ್ಷದ ಕಾರ್ಯಕರ್ತರಿಗೆ ಆದ್ಯತೆಯನ್ನು ನೀಡಲಿಲ್ಲ. ಇದರ ಬಗ್ಗೆ ಕಾರ್ಯಕರ್ತರಿಗೆ ಬೇಸರವಿದೆ. ಹಿಂದಿನ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಬಿ.ಬಿ ನಿಂಗಯ್ಯ ಅವರು ಚುನಾವಣೆ ಮೂರು ದಿನ ಇದ್ದಾಗ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ಪಲಾಯನ ಮಾಡಿದರು. ಆ ಕಾರಣಕ್ಕಾಗಿಯೇ ಈ ಬಾರಿ ಜೆಡಿಎಸ್ ಪಕ್ಷದಲ್ಲಿ ಟಿಕೇಟ್ ನೀಡಲು ವಿರೋಧ ಮಾಡುತ್ತಿದ್ದೇವೆ ಎಂದರು.
ಜೆಡಿಎಸ್ ಮುಖಂಡ ರಮೇಶ್ ಬಾನಳ್ಳಿ ಮಾತನಾಡಿ, ಬಿ.ಬಿ ನಿಂಗಯ್ಯ ಅವರು ಜೆಡಿಎಸ್ ಪಕ್ಷದ ನಿಷ್ಠಾವಂತ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಪಕ್ಷದ ಕಾರ್ಯಕರ್ತರೊಂದಿಗೆ ನಿಕಟವಾದ ಸಂಪರ್ಕವಿಲ್ಲದ, ಅಧಿಕಾರದಲ್ಲಿದ್ದಾಗ ಕ್ಷೇತ್ರದಲ್ಲಿ ಕಾರ್ಯಗಳನ್ನು ಮಾಡದ ಬಿ.ಬಿ ನಿಂಗಯ್ಯ ಅವರಿಗೆ ಟಿಕೇಟ್ ನೀಡುವುದಕ್ಕೆ ವಿರೋಧವಿದೆ ಎಂದರು.
ಸಭೆಯಲ್ಲಿ ಅಭ್ಯರ್ಥಿ ಬಿ.ಬಿ ನಿಂಗಯ್ಯ ಬದಲಿಗಾಗಿ ಸಹಿ ಸಂಗ್ರಹ ಮಾಡಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಕೆಸುವಿನಮನೆ ಬೈರೆಗೌಡ, ಭಾರತಿ ಎಚ್.ಎಸ್.ಮಂಜುನಾಥ್, ಮಂಜುನಾಥ್ ಬೆಟ್ಟಗೆರೆ, ಅಮ್ಜದ್, ಗೋಪಾಲಗೌಡ, ದೇವರಾಜ್, ರಾಜೇಂದ್ರ, ರವಿ, ಮಹೇಶ್, ಅನಿಲ್, ಸುಬ್ಬೆಗೌಡ, ಸೋಮೇಶ್, ರಘು, ಪ್ರವೀಣ್, ಲವ, ಬೈರೆಗೌಡ, ತಮ್ಮಣ್ಣ, ನಾಗರಾಜ್, ವಾಸು, ಆನಂದ್, ದೇವದಾಸ್, ಅಶೋಕ್, ಸುರೇಂದ್ರ, ಶಶಿಕಾಂತ್, ರಮೇಶ್ ಮುಂತಾದವರು ಇದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw