ಕೊಲೆ ಮಾಡೋಕೇ ಹೊಂಚು ಹಾಕಿ ಕುಳಿತ: ವೈದ್ಯೆಗೆ ಚಾಕುವಿನಿಂದ ಇರಿದು ದುಷ್ಕರ್ಮಿ ಎಸ್ಕೇಪ್
ವೈದ್ಯರೊಬ್ಬರಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ ಘಟನೆ ಪಶ್ಚಿಮ ದೆಹಲಿಯ ಟ್ಯಾಗೋರ್ ಗಾರ್ಡನ್ ಎಕ್ಸ್ಟೆನ್ಷನ್ ಪ್ರದೇಶದಲ್ಲಿ ನಡೆದಿದೆ. ವೈದ್ಯೆ ಸಾಂಗಯ್ ಭುಟಿಯಾ, ಹಲ್ಲೆಗೆ ಒಳಗಾದವರು.
ಸಾಂಗಯ್ ಭುಟಿಯಾ ಅವರ ಕ್ಲಿನಿಕ್ಗೆ ಬಂದ ವ್ಯಕ್ತಿಯೊಬ್ಬ ಕಟ್ಟಡದ ಮೆಟ್ಟಿಲಲ್ಲಿ ಕಾದು ಕುಳಿತು ವೈದ್ಯರಿಗೆ ಅನೇಕ ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಕಟ್ಟಡದ ನೆಲ ಮಹಡಿಯಲ್ಲಿ ಕ್ಲಿನಿಕ್ ನಡೆಸುತ್ತಿರುವ ಭುಟಿಯಾ ಅವರು ಮೇಲಿನ ಮಹಡಿಯಲ್ಲಿ ವಾಸವಾಗಿದ್ದಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಗಾಯಗೊಂಡ ವೈದ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಹಲವು ತಂಡಗಳನ್ನು ರಚಿಸಿದ್ದಾರೆ.
ಹಲ್ಲೆಗೆ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ, ವೈದ್ಯರಿಂದ ಈ ಕುರಿತು ಹೇಳಿಕೆ ಪಡೆಯಬೇಕಿದೆ ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ವಿಚಿತ್ರಾ ವೀರ್ ಹೇಳಿದ್ದಾರೆ.
ಮೇಲ್ನೋಟಕ್ಕೆ ದರೋಡೆಯ ಯಾವುದೇ ಸೂಚನೆ ಕಂಡುಬಂದಿಲ್ಲ. ದಾಳಿಕೋರ ಯಾರೋ ಪರಿಚಿತ ಎಂದು ತೋರುತ್ತದೆ. ಈ ಕುರಿತು ಇನ್ನೂ ದೃಢಪಟ್ಟಿಲ್ಲ ಎಂದು ಡಿಸಿಪಿ ಹೇಳಿದರು.