ಇಲಿಪಾಷಣ ತಿಂದು ಎರಡೂವರೆ ವರ್ಷ ವಯಸ್ಸಿನ ಮಗು ದಾರುಣ ಸಾವು
ದಕ್ಷಿಣ ಕನ್ನಡ: ಇಲಿ ಪಾಷಾಣ ತಿಂದು ಎರಡೂವರೆ ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ಘಟನೆ ನೆಲ್ಯಾಡಿ ಬಜತ್ತೂರು ಗ್ರಾಮದ ಕೆಮ್ಮಾರ ಎಂಬಲ್ಲಿ ನಡೆದಿದ್ದು, ಮಗು ಆಟವಾಡುತ್ತಾ, ಇಲಿ ಪಾಷಾಣ ತಿಂದಿದೆ ಎಂದು ತಿಳಿದು ಬಂದಿದೆ.
ಕೆಮ್ಮಾರ ನಿವಾಸಿ, ನಿವೃತ್ತ ಸೈನಿಕ ಸೈಜು ಎಂಬವರ ಎರಡೂವರೆ ವರ್ಷದ ಪುತ್ರಿ ಶ್ರೇಯಾ ಮೃತಪಟ್ಟ ಮಗುವಾಗಿದ್ದು, ಜೂ.19ರ ಬೆಳಗ್ಗೆ ಮನೆಯಲ್ಲಿ ಮಗುವಿನ ತಂದೆ-ತಾಯಿ ಸ್ವಚ್ಛತೆ ನಡೆಸುತ್ತಿದ್ದ ವೇಳೆ ಮಗು ಆಟವಾಡುತ್ತಿತ್ತು. ಈ ವೇಳೆ ಮಗುವಿನ ಕೈಗೆ ಇಲಿ ಪಾಷಾಣದ ಟ್ಯೂಬ್ ಸಿಕ್ಕಿದೆ ಎಂದು ಹೇಳಲಾಗಿದೆ.
ಮಧ್ಯಾಹ್ನದ ವೇಳೆಗೆ ಮಗುವಿಗೆ ವಾಂತಿಯಾಗಿದ್ದು, ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಹೇಳಲಾಗಿದೆ. ತಕ್ಷಣವೇ ಪೋಷಕರು ಉಪ್ಪಿನಂಗಡಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬಂದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಮತ್ತೆ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಮಗುವನ್ನು ಸಾಗಿಸಲಾಗಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ತಪಾಸಣೆ ವೇಳೆ ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.