ಇಲ್ಲಿ ಜೋಲಿಯೇ ಆ್ಯಂಬುಲೆನ್ಸ್  | ಈ ಆಧುನಿಕ ಕಾಲದಲ್ಲಿಯೂ ಈ ಗ್ರಾಮದಲ್ಲಿ ಎಂತಹ ಅವಸ್ಥೆ - Mahanayaka
6:13 PM Wednesday 5 - February 2025

ಇಲ್ಲಿ ಜೋಲಿಯೇ ಆ್ಯಂಬುಲೆನ್ಸ್  | ಈ ಆಧುನಿಕ ಕಾಲದಲ್ಲಿಯೂ ಈ ಗ್ರಾಮದಲ್ಲಿ ಎಂತಹ ಅವಸ್ಥೆ

13/02/2021

ಉತ್ತರ ಕನ್ನಡ: ದೇಶದಲ್ಲಿ, ರಾಜ್ಯದಲ್ಲಿ ಇಷ್ಟೊಂದು ಆಧುನಿಕತೆಗಳು ಬಂದರು ಕೂಡ ಈ ಗ್ರಾಮಗಳಿಗೆ ಇನ್ನೂ ಮೂಲಭೂತ ಸೌಕರ್ಯವನ್ನು ಕೂಡ ಒದಗಿಸಲು ಸಾಧ್ಯವಾಗಿಲ್ಲ. ಇಲ್ಲಿ ಯಾರಿಗಾದರೂ ಅನಾರೋಗ್ಯ ಕಾಡಿದರೆ, ಅವರನ್ನು ಆಸ್ಪತ್ರೆಗೆ ಸಾಗಿಸಬೇಕಾದರೆ, ರಸ್ತೆ ಸೌಕರ್ಯ ಕೂಡ ಇಲ್ಲ.

ಇದು ಉತ್ತರ ಕನ್ನಡ ಜಿಲ್ಲೆಯ ಗುಡ್ಡಳ್ಳಿ ಎಂಬ ಗ್ರಾಮದ ದುಸ್ಥಿತಿಯಾಗಿದೆ.  ಯಾರಾದರೂ ಅನಾರೋಗ್ಯದಿಂದ ಅಸ್ವಸ್ಥರಾದರೆ, ಅವರನ್ನು ರಸ್ತೆಯವರೆಗೆ  ಜೋಲಿಯಲ್ಲಿ ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯತೆ ಈ ಗ್ರಾಮದಲ್ಲಿದೆ. ಈ ಗ್ರಾಮ ಮಾತ್ರವಲ್ಲದೇ, ಕಾರವಾರ, ಜೋಯಿಡಾ, ರಾಮನಗರ, ಶಿರಸಿ, ಸಿದ್ಧಾಪುರ ಹಾಗೂ ಕುಮಟಾ ಭಾಗದ ಗಟ್ಟ ಪ್ರದೇಶಗಳಲ್ಲಿನ ಪರಿಸ್ಥಿತಿ ಕೂಡ ಇದಕ್ಕೆ ಹೊರಯಾಗಿಲ್ಲ.

ವರದಿಗಳ ಪ್ರಕಾರ ಇಲ್ಲಿಯ ನಿವಾಸಿಗಳು ತುರ್ತು ಚಿಕಿತ್ಸೆ ದೊರೆಯದೇ ಮೃತಪಡುತ್ತಿರುವ ಸಂಖ್ಯೆ ಹೆಚ್ಚಿದೆಯಂತೆ. ಸುಮಾರು 200 ಜನರು ಪ್ರತಿ ವರ್ಷ ಸೂಕ್ತ ಕಾಲದಲ್ಲಿ ಚಿಕಿತ್ಸೆ ಸಿಗದ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ. ಕಳೆದ 5 ವರ್ಷಗಳಲ್ಲಿ ತುರ್ತು ಚಿಕಿತ್ಸೆ ದೊರೆಯದ ಕಾರಣದಿಂದಾಗಿ 1,249 ಜನರು ಸಾವಿಗೀಡಾಗಿದ್ದಾರೆ.

ರಾಜ್ಯವನ್ನಾಳುತ್ತಿರುವ ಯಾವ ಪಕ್ಷದ ನೇತೃತ್ವದ ಸರ್ಕಾರ ಕೂಡ ಇಲ್ಲಿನ ಜನರ ಮೂಲ ಭೂತ ಸೌಕರ್ಯದ ಬಗ್ಗೆ ಇಲ್ಲಿಯವರೆಗೆ ತಲೆಕೆಡಿಸಿಕೊಂಡಿಲ್ಲ.  ವೈದ್ಯರು ಸರ್ಕಾರಕ್ಕೆ ಸಾಲು ಸಾಲು ಬೇಡಿಕೆ ಇರಿಸಿದ್ದರೂ, ಕಿವುಡು ಸರ್ಕಾರದಿಂದ ಯಾವುದೇ ಪ್ರಯೋಜನಗಳು ಇಲ್ಲಿಯ ಜನರಿಗೆ ಇನ್ನೂ ಆಗಿಲ್ಲ.

ಇತ್ತೀಚಿನ ಸುದ್ದಿ