ಇಷ್ಟು ವಯಸ್ಸಾದರೂ ಭಗವಾನ್ ತಮ್ಮ ಭಾವನೆ ಬದಲಿಸಿಲ್ಲ | ಸಚಿವ ಸುರೇಶ್ ಕುಮಾರ್ ಹೇಳಿಕೆ
ಚಿಕ್ಕಬಳ್ಳಾಪುರ: ಇಷ್ಟು ವಯಸ್ಸಾದರೂ ತಮ್ಮ ಭಾವನೆಗಳನ್ನು ಬದಲಾಯಿಸಿಕೊಳ್ಳದ ಭಗವಾನ್ ಬುದ್ಧಿ ಜೀವಿಗಳ ಹೆಸರಿಗೆ ಅಪಮಾನ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಜಿಲ್ಲೆಯ ಗೌರಿ ಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಸಾಹಿತಿ ಭಗವಾನ್ ಅವರು ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಮತ್ತು ನ್ಯಾಯವಾದಿಯಾದವರು ಕೋರ್ಟ್ ಆವರಣದಲ್ಲಿಯೇ ಈ ರೀತಿಯಾಗಿ ವರ್ತಿಸುವುದು ಎರಡೂ ಸರಿಯಲ್ಲ. ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಇದಕ್ಕಿಂತ ಕೇಸ್ ದಾಖಲಿಸಿ ನ್ಯಾಯಾಲಯದಲ್ಲಿ ಹೋರಾಟ ಮಾಡಲಿ ಎಂದು ಸುರೇಶ್ ಕುಮಾರ್ ಹೇಳಿದರು.
ನಾನು ಭಗವಾನ್ ರನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ, ಭಗವಾನ್ ಸಾಮಾನ್ಯ ಜನರ ಭಾವನೆಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗೆ ಅವರ ತಂದೆ ತಾಯಿ ಭಗವಾನ್ ಎಂದು ಹೆಸರು ಇಟ್ಟಿದ್ದಾರೆ. ಆದರೆ ಇಷ್ಟು ವಯಸ್ಸಾದರೂ ಅವರು ತಮ್ಮ ಭಾವನೆಗಳನ್ನು ಬದಲಿಸಿಕೊಂಡಿಲ್ಲ, ಬುದ್ಧಿ ಜೀವಿಗಳ ಹೆಸರಿಗೆ ಭಗವಾನ್ ಅಪಮಾನ ಎಂದು ಹೇಳಿದರು.