ಸಂಬಳ ಕೇಳಿದ್ದಕ್ಕೆ ಕಟ್ಟಿ ಹಾಕಿ ಮಾರಣಾಂತಿಕ ಹಲ್ಲೆ ಪ್ರಕರಣ: ಐವರು ಆರೋಪಿಗಳ ಬಂಧನ
ಚಿಕ್ಕಮಗಳೂರು: ಹೊಟೇಲ್ ನಲ್ಲಿ ಕೆಲಸ ಮಾಡಿದ ಹಣ ಕೇಳಿದ್ದಕ್ಕೆ ಕಾಡಿನಲ್ಲಿ ಯುವಕನ ಕೈಕಾಲು ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರನ್ನು ಕೊಪ್ಪ ಪೊಲೀಸರು ಬಂಧಿಸಿದ್ದಾರೆ.
ಮಹೇಶ್, ವಿಠಲ್, ಸಿರಿಲ್, ಸುನೀಲ್, ಮಂಜು ಬಂಧಿತ ಆರೋಪಿಗಳಾಗಿದ್ದಾರೆ. ಹೋಟೆಲ್ ಕೆಲಸದ ಸಂಬಳ ಕೇಳಿದ್ದಕ್ಕೆ ಹಗ್ಗದಿಂದ ಮರಕ್ಕೆ ಕಟ್ಟಿ ಹಾಕಿ ಯುವಕನಿಗೆ ಅಮಾನವೀಯವಾಗಿ ಥಳಿಸಲಾಗಿತ್ತು. ಹಲ್ಲೆ ನಡೆಸಿದ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.
ಕೊಪ್ಪ ತಾಲೂಕಿನ ಸೋಮ್ಲಾಪುರ ರಸ್ತೆಯ ಪ್ಲಾಂಟೇಶನ್ ನಲ್ಲಿ ಈ ಘಟನೆ ನಡೆದಿತ್ತು. ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಕೊಪ್ಪ ಸಮೀಪದ ಕರ್ಕೇಶ್ವರ ಗ್ರಾಮದ ಸತೀಶ್ ಅವರನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಲ್ಲೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಐವರ ಬಂಧನಕ್ಕೆ ಚಿಕ್ಕಮಗಳೂರು ಎಸ್ಪಿ ತಂಡ ರಚನೆ ಮಾಡಿದ್ದರು. ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.