ಚಿಕ್ಕಮಗಳೂರು: ಕಾಫಿನಾಡಲ್ಲಿ ರಸ್ತೆ ಮೇಲೆ ಬೇಲಿ—ಗ್ರಾಮಸ್ಥರ ತೀವ್ರ ಆಕ್ರೋಶ!

chikkamagaluru road
15/03/2025

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕಳಸ–ಇಡಕಣಿ ಮಾರ್ಗದ ನಾಗಲಮಕ್ಕಿ ಗ್ರಾಮದಲ್ಲಿ ಹೊಸದಾಗಿ ಮಂಜೂರಾದ ರಸ್ತೆ ಮಧ್ಯೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಲಿ ಹಾಕಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಅತ್ತು–ಕರ್ದು ಓಡಿಸಿಕೊಂಡು ಬಂದ ರಸ್ತೆ ಯೋಜನೆಗೆ ತಡೆ!

ಸ್ವಾತಂತ್ರ್ಯ ಬಂದಾಗಿನಿಂದಲೂ ರಸ್ತೆ ಕಾಣದ ಈ ಹಳ್ಳಿಗೆ ಕೊನೆಗೂ ಸರಕಾರದಿಂದ ರಸ್ತೆ ಮಂಜೂರಾಗಿತ್ತು. ಹಲವಾರು ವರ್ಷಗಳ ಬೇಡಿಕೆಯ ಬಳಿಕ ರಸ್ತೆ ನಿರ್ಮಾಣ ಕಾರ್ಯ ಆರಂಭವಾದರೂ, ಈಗ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ತಡೆಹಿಡಿದಿದ್ದಾರೆ. ಸುಮಾರು 200 ಮೀಟರ್ ದೂರದವರೆಗೆ ರಸ್ತೆ ಮಧ್ಯೆ ಬೇಲಿ ಹಾಕಲಾಗಿದ್ದು, ಇದರಿಂದ ವಾಹನ ಓಡಿಸಲು ತೊಂದರೆಯಾಗಿರುವುದಾಗಿ ಸ್ಥಳೀಯರು ದೂರು ನೀಡಿದ್ದಾರೆ.

ಅರಣ್ಯ ಇಲಾಖೆಯ ಅಜಾಗರೂಕ ಕ್ರಮ:

ಗ್ರಾಮದ ಜನರ ಪ್ರಕಾರ, ಈ ಸ್ಥಳ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವುದನ್ನು ಉಲ್ಲೇಖಿಸಿ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ಆದರೆ, ಗ್ರಾಮಸ್ಥರು ಈ ದಾರಿಯನ್ನು ವರ್ಷಗಳಿಂದಲೇ ಬಳಸುತ್ತಿದ್ದು, ಹೊಸ ರಸ್ತೆ ಯೋಜನೆ ಅನುಮೋದನೆಯಾದ ನಂತರ ಈ ರೀತಿಯ ತಡೆ ಅನಾವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಂಟ್ರಾಕ್ಟರ್ ಸಹ ಸಂಕಷ್ಟದಲ್ಲಿ:

ರಸ್ತೆ ನಿರ್ಮಾಣದ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆದಾರರು ಪರಿಸ್ಥಿತಿಯಿಂದ ಗೊಂದಲಕ್ಕೆ ಸಿಲುಕಿದ್ದಾರೆ. ಮಧ್ಯೆ ಬೇಲಿ ಹಾಕಿರುವುದರಿಂದ ಟಾರ್ ಹಾಕೋದು ಹೇಗೆ ಎಂಬ ಪ್ರಶ್ನೆ ಎದುರಾಗಿದ್ದು, ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

ಗ್ರಾಮಸ್ಥರ ಒತ್ತಾಯ:

ಹಳ್ಳಿಯ ಜನತೆ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಸ್ತೆಯ ಬಗ್ಗೆ ಸ್ಪಷ್ಟತಾ ನೀಡದೇ ತಡೆಹಿಡಿಯುವುದರಿಂದ ಗ್ರಾಮಸ್ಥರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಸ್ಥಳೀಯರು ಈ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಬೇಕೆಂದು ಸರ್ಕಾರವನ್ನು ಕೇಳಿಕೊಂಡಿದ್ದಾರೆ. ಅಧಿಕಾರಿಗಳ ನಿರ್ಧಾರ ಪುನರ್ ಪರಿಶೀಲನೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

 

ಇತ್ತೀಚಿನ ಸುದ್ದಿ

Exit mobile version