ಎಮ್ಮೆ ಸಾಗಾಟದ ಹೆಸರಲ್ಲಿ ಬಾಲಕನನ್ನು ಥಳಿಸಿ ಕೊಂದೇಬಿಟ್ರು: ಹಣ ಕೊಡದಿದ್ರೆ ಗೋಹತ್ಯೆ ಕೇಸ್ ದಾಖಲಿಸ್ತೀವಿ ಎಂದು ಬೆದರಿಸಿದ ಐದು ಪೊಲೀಸರ ವಿರುದ್ಧ ಎಫ್ ಐಆರ್ ದಾಖಲು
ಉತ್ತರಪ್ರದೇಶದ ಬರೇಲಿಯಲ್ಲಿ 17 ವರ್ಷದ ಬಾಲಕನನ್ನು ಥಳಿಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿ ಐವರು ಪೊಲೀಸರ ವಿರುದ್ಧವೇ ಎಫ್ ಐಆರ್ ದಾಖಲಾಗಿದೆ. ಯಾಕೆಂದರೆ ಈ ಐದು ಪೊಲೀಸರು ಬಾಲಕನ ಸಾವನ್ನು ಅಪಘಾತ ಎಂದು ಹೇಳಿಕೊಂಡಿದ್ದರು. ಇದೀಗ ಘಟನೆ ನಡೆದು ನಾಲ್ಕು ತಿಂಗಳ ಬಳಿಕ ನ್ಯಾಯಾಲಯ ಪ್ರಕರಣ ದಾಖಲಿಸಲು ಆದೇಶಿಸಿದ್ದು, ಅದರಂತೆ ಬರೇಲಿಯ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತಂದೆ ಪಪ್ಪು ಖುರೇಷಿ ಅವರ ದೂರಿನ ಮೇರೆಗೆ ಬಿತ್ರಿ ಚೈನ್ಪುರ ಠಾಣಾಧಿಕಾರಿ ಅಶ್ವಿನಿ ಕುಮಾರ್ ಚೌಬೆ, ಸಬ್ ಇನ್ಸ್ಪೆಕ್ಟರ್ ಧರ್ಮೇಂದ್ರ ಕುಮಾರ್, ಕಾನ್ಸ್ಟೆಬಲ್ಗಳಾದ ರಾಜೇಶ್, ವಿಪಿನ್ ಕಂಡ್ವಾಲ್ ಮತ್ತು ಹೋಮ್ ಗಾರ್ಡ್ ವೀರಪಾಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪೊಲೀಸರು ತನ್ನ ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಲ್ಲದೇ ಆತನಿಂದ 30,400 ರೂಪಾಯಿ ಹಣವನ್ನು ದೋಚಿದ್ದಾರೆ ಎಂದು ಮೃತ ಬಾಲಕನ ತಂದೆ ದೂರಿದ್ದಾರೆ. ಅವರ ದೂರಿನ ಮೇರೆಗೆ, ಆರೋಪಿಗಳ ಮೇಲೆ ನರಹತ್ಯೆ, ಸುಲಿಗೆ, ಕ್ರಿಮಿನಲ್ ಪಿತೂರಿ, ದರೋಡೆ ಪ್ರಕರಣ ದಾಖಲಿಸಲಾಗಿದೆ.
ಎಪ್ರಿಲ್ 17 ರಂದು ಅರ್ಕಾನ್ ಅವರು ಎಮ್ಮೆ ಸಾಗಿಸಿದ ಹಣವನ್ನು ಸಂಗ್ರಹಿಸಿ ಮರಳಿ ಬರುವಾಗ ಪೊಲೀಸರು ಅಡ್ಡಗಟ್ಟಿ ಅವನ ಮೇಲೆ ಥಳಿಸಿದ್ದರು. ಪೊಲೀಸರಲ್ಲೊಬ್ಬ ತನಗೆ ಕರೆ ಮಾಡಿ, 50,000 ರೂಪಾಯಿಯೊಂದಿಗೆ ಬರುವಂತೆ ನನಗೆ ಸೂಚಿಸಿದ್ದು, ಇಲ್ಲದಿದ್ದರೆ ಗೋಹತ್ಯೆ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡಲಾಗಿತ್ತು. ತಾನು ಘಟನಾ ಸ್ಥಳಕ್ಕೆ ತಲುಪಿದಾಗ ಅರ್ಕಾನ್ ಮೇಲೆ ಪೊಲೀಸರು ಥಳಿಸುತ್ತಿದ್ದರು. ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಎಂದು ತಂದೆ ದೂರಿದ್ದಾರೆ.