ಈ ವಿಚಾರಕ್ಕೆ ಚಾರ್ಮಾಡಿ ಘಾಟ್ ದ್ವಿಪಥ ರಸ್ತೆ ಬಗ್ಗೆ ನಡೆಯುತ್ತಿದೆ ಗಂಭೀರ ಚರ್ಚೆ!
ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಒಕ್ಕೂಟ ಸರ್ಕಾರ 343.74 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವ ಹೇಳಿಕೆ ಬೆನ್ನಲ್ಲೇ ಗಂಭೀರ ಚರ್ಚೆಗಳು ಆರಂಭವಾಗಿವೆ.
ಹಣ ಬಿಡುಗಡೆ ಬಗ್ಗೆ ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಂಗಳೂರಿನಿಂದ ಮೂಡಿಗೆರೆ –- ತುಮಕೂರಿಗೆ ಸಂಪರ್ಕಿಸುವ ರ ಚಾರ್ಮಾಡಿ ಘಾಟಿಯಲ್ಲಿ 75 ಕಿ.ಮೀ. ನಿಂದ 86.20 ಕಿ.ಮೀ. ದ್ವಿಪಥವಾಗಿ ಅಗಲೀಕರಣಗೊಳ್ಳಲಿದೆ ಎಂದಿದ್ದಾರೆ.
ರಾಜ್ಯದ ಪ್ರಮುಖ ಹೆದ್ದಾರಿ ಚಾರ್ಮಾಡಿ ಘಾಟ್ ನ್ನು ಮೇಲ್ದರ್ಜೆಗೇರಿಸುವುದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲದ ಜೊತೆಗೆ ಸುಗಮ ಸರಕು ಸಾಗಣೆಯೊಂದಿಗೆ ಈ ಭಾಗದ ವ್ಯಾಪಾರ–ವಹಿವಾಟು ಕೂಡ ವೃದ್ಧಿಸಲಿದೆ ಎನ್ನುವುದು ಸಂಸದರ ಅಭಿಪ್ರಾಯ.
ಮತ್ತೊಂದು ದುರಂತ ?:
ಚಾರ್ಮಾಡಿ ರಸ್ತೆಗೆ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿರುವುದು ಸಂತೋಷ, ಆದರೆ ಸರಿಯಾದ ಕ್ರಿಯಾಯೋಜನೆ ಇಲ್ಲದೆ ರಸ್ತೆ ಮಾಡಲು ಹೊರಟಿರೋದು ಮತ್ತೊಂದು ಶಿರಾಡಿ ಘಾಟ್ ದುರಂತ ಆಗುವುದಿಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ.
ಡಬಲ್ ರೋಡ್ ಮಾಡಲು ಜಾಗಾನೇ ಇಲ್ಲ ,ಸ್ವಲ್ಪ ಜಾಸ್ತಿ ಹಣ ಆದರೂ ಪರವಾಗಿಲ್ಲ ಉತ್ತಮವಾದ ಸುರಂಗ ಮಾರ್ಗನೋ ಅಥವಾ ಫ್ಲೈಓವರ್ ರೀತಿಯ ಕ್ರಿಯಾ ಯೋಜನೆ ಮಾಡಿ, ಆಗು ಹೋಗುಗಳ ಬಗ್ಗೆ ಚರ್ಚಿಸಿ ಮತ್ತಷ್ಟು ಹಣ ಸೇರಿಸಿ ಉತ್ತಮವಾದ ರಸ್ತೆ ನಿರ್ಮಿಸಿ ಎನ್ನುವ ಸಲಹೆ ಚಾರ್ಮಾಡಿ ರಸ್ತೆ ಉಳಿಸಿ ಹೋರಾಟ ಸಮಿತಿ ಸಂಚಾಲಕ ಸಂಜಯ್ ಕೊಟ್ಟಿಗೆಹಾರರವರದು.
ಅಭಿವೃದ್ಧಿಯ ಹೆಸರಲ್ಲಿ ಸುಮಾರು 10 ವರ್ಷಗಳ ಕಾಲ ರಸ್ತೆ ಮುಚ್ಚುವ ಹುನ್ನಾರ ನಡೆದಿದೆ, 3 ವಿಭಾಗದ ಟೆಂಡರ್ ಆಗಿದ್ದು ಒಂದು ವಿಭಾಗದ ರಸ್ತೆ ಮಾಡಲು 5 ವರ್ಷ ಬೇಕು, ಹೀಗಾದರೆ ಕೊಟ್ಟಿಗೆಹಾರ ಹತ್ತು ವರ್ಷಗಳಲ್ಲಿ ನಿರ್ನಾಮವಾಗಲಿದೆ ಎನ್ನುವ ಆತಂಕ ಹೊರ ಹಾಕಿ ನಮಗೇನು ಡಬಲ್ ರಸ್ತೆ ಬೇಕಾಗಿಲ್ಲ, ಗುಂಡಿ ಮುಚ್ಚಿದರೆ ಸಾಕು ಎಂದಿದ್ದಾರೆ.
ಡಬಲ್ ರಸ್ತೆ ಹೆಸರಿನಲ್ಲಿ ವಿದ್ಯಾರ್ಥಿಗಳ ಹಾಗೂ ನಾವು ನಂಬಿರುವ ದಕ್ಷಿಣ ಕನ್ನಡ ಆಸ್ಪತ್ರೆಗೆ ಹೋಗಲು ಬಹಳ ತೊಂದರೆ ಆಗಲಿದೆ , ಎಲ್ಲರೂ ಕೈ ಜೋಡಿಸಿದರೆ ಒಂದು ದೊಡ್ಡ ಮಟ್ಟದ ಹೋರಾಟ ಮಾಡೋಣ ಎಂದು ಕೆಲವರು ಪ್ರತಿಕ್ರಿಯಿಸಿದ್ದು ಹೋರಾಟದ ರೂಪುರೇಷೆ ನಿರ್ಧರಿಸಲು ಸಭೆಯನ್ನು ಕರೆಯಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296