ಆಘಾತ: ತೆಲಂಗಾಣ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಆಸ್ಪತ್ರೆಗೆ ದಾಖಲು
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಮತ್ತು ಭಾರತ ರಾಷ್ಟ್ರ ಸಮಿತಿ (ಬಿಆರ್ ಎಸ್) ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರು ನಿನ್ನೆ ರಾತ್ರಿ ಎರ್ರವಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ಅವರನ್ನು ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನ ನಂತರ, ಕೆಸಿಆರ್ ಮನೆಯಲ್ಲಿಯೇ ಇದ್ದು ಜನರನ್ನು ಭೇಟಿಯಾಗುತ್ತಿದ್ದಾರೆ. ಎನ್ ಡಿಟಿವಿ ವರದಿಯ ಪ್ರಕಾರ, ಕೆಸಿಆರ್ ಬಿದ್ದ ನಂತರ ಸೊಂಟದ ಮುರಿತಕ್ಕೆ ಒಳಗಾಗಿದ್ದು ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು ಎಂದಿದೆ.
ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆದಿತ್ತು. 2018 ರಲ್ಲಿ ಬಿಆರ್ ಎಸ್ (ಆಗಿನ ತೆಲಂಗಾಣ ರಾಷ್ಟ್ರ ಸಮಿತಿ) 119 ಸ್ಥಾನಗಳಲ್ಲಿ 88 ಸ್ಥಾನಗಳನ್ನು ಗೆದ್ದಿತ್ತು. ಶೇಕಡಾ 47.4 ರಷ್ಟು ಮತಗಳನ್ನು ಹೊಂದಿತ್ತು. ಕಾಂಗ್ರೆಸ್ 19 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಆದರೆ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 119 ಸ್ಥಾನಗಳಲ್ಲಿ 164 ಸ್ಥಾನಗಳನ್ನು ಗೆಲ್ಲುವ ಮೂಲಕ ಗೆಲುವು ಸಾಧಿಸುವುದರೊಂದಿಗೆ ಇತಿಹಾಸ ನಿರ್ಮಾಣವಾಯಿತು.
ತೆಲಂಗಾಣದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ಅನುಮುಲಾ ರೇವಂತ್ ರೆಡ್ಡಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ರೆಡ್ಡಿ ಅವರು 2014 ರಲ್ಲಿ ರಚನೆಯಾದ ರಾಜ್ಯದ ಮೊದಲ ಕಾಂಗ್ರೆಸ್ ಮುಖ್ಯಮಂತ್ರಿಯಾದರು. ರೇವಂತ್ ರೆಡ್ಡಿ ಅವರು ಕೆ.ಚಂದ್ರಶೇಖರ್ ರಾವ್ ಅವರ ಕಟು ಟೀಕಾಕಾರರಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಯತ್ನದ ಮುಖ್ಯಸ್ಥರಾಗಿ ಉತ್ಸಾಹಭರಿತವಾಗಿ ಪ್ರಚಾರವನ್ನು ನಡೆಸಿದ್ದರು.