ದೆಹಲಿಯಲ್ಲಿ ಗೋಡೆ ಕಟ್ಟುವ ಬದಲು ರೈತರ ಜೊತೆಗೆ ಕೇಂದ್ರ ಸರ್ಕಾರ ಮಾತನಾಡಲಿ | ಹೆಚ್.ಡಿ.ದೇವೇಗೌಡ ಒತ್ತಾಯ - Mahanayaka
4:13 AM Thursday 19 - September 2024

ದೆಹಲಿಯಲ್ಲಿ ಗೋಡೆ ಕಟ್ಟುವ ಬದಲು ರೈತರ ಜೊತೆಗೆ ಕೇಂದ್ರ ಸರ್ಕಾರ ಮಾತನಾಡಲಿ | ಹೆಚ್.ಡಿ.ದೇವೇಗೌಡ ಒತ್ತಾಯ

04/02/2021

ನವದೆಹಲಿ:  ರೈತರ ಪ್ರತಿಭಟನೆಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ದೆಹಲಿಯಲ್ಲಿ ಗೋಡೆ ಕಟ್ಟುವ ಬದಲು ರೈತ ಮುಖಂಡರ ಜೊತೆಗೆ ಮಾತುಕತೆ ನಡೆಸಲಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

 ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಗಲಭೆ, ಹಿಂಸಾಚಾರಕ್ಕೆ ರೈತರು ಕಾರಣರಲ್ಲ. ಈ ಕೃತ್ಯವನ್ನು ಯಾರು ಎಸಗಿದ್ದಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರ ಗೋಡೆ ಕಟ್ಟುವ ಬದಲು ರೈತ ಮುಖಂಡರೊಂದಿಗೆ ಮಾತುಕತೆ ನಡೆಸಲಿ. ಕೃಷಿ ಕಾಯ್ದೆ ವಿಚಾರಗಳು ರಾಜ್ಯಗಳ ಪಟ್ಟಿಗೆ ಬರಲಿದ್ದು, ಕೇಂದ್ರ ಸರ್ಕಾರ ಈ ಸಂಬಂಧ ರಾಜ್ಯಗಳ ಅಭಿಪ್ರಾಯ ಕೇಳಬೇಕು. ಪ್ರತಿಭಟನಾ ಸ್ಥಳದಲ್ಲಿ ಕಾಂಕ್ರೀಟ್ ಗೋಡೆ ಹಾಕುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಅವರು ಹೇಳಿದರು.

 ಒಬ್ಬ ರೈತನಾಗಿ ನಾನು ರೈತರ ಸಮಸ್ಯೆಗಳನ್ನು ಅರಿತಿದ್ದೇನೆ. ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟಿಸುತ್ತಿದ್ದು, ಕೇಂದ್ರ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕು. ನಾನು ನನ್ನ ಜೀವನದ ಕೊನೆಯ ಹಂತದಲ್ಲಿದ್ದೇನೆ. ಸರ್ಕಾರ ಈ ವಿಷಯವನ್ನು ಶಾಂತಿಯುತವಾಗಿ ಕೊನೆಗೊಳಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ದೇವೇಗೌಡರು ಹೇಳಿದರು.


Provided by

ಇತ್ತೀಚಿನ ಸುದ್ದಿ