ಸಿದ್ದರಾಮಯ್ಯ ಗೋಮಾಂಸ ತಿನ್ನುವುದಾದರೆ ನನ್ನ ಎದುರು ತಿನ್ನಲಿ | ಸಚಿವ ಪ್ರಭು ಬಿ ಚವ್ಹಾಣ್ ಸವಾಲು
ಮಡಿಕೇರಿ: ಆಹಾರ ನನ್ನ ಹಕ್ಕು. ನನಗೆ ಗೋಮಾಂಸ ತಿನ್ನಬೇಕು ಅಂತ ಅನ್ನಿಸಿದರೆ, ನಾನು ತಿನ್ನುತ್ತೇನೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪಶುಸಂಗೋಪನೆ ಸಚಿವ ಪ್ರಭು ಬಿ ಚವ್ಹಾಣ್ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ನನ್ನ ಎದುರು ಗೋಮಾಂಸ ತಿಂದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಜಾರಿಗೆ ಸಂಬಂಧಿಸಿದಂತೆ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚವ್ಹಾಣ್, ಅವರು ಗೋಮಾಂಸ ತಿನ್ನುತ್ತಾರೆ ಆದರೆ ಕೊಡಿಸೋಣ. ಆದರೆ ನನ್ನ ಎದುರು ತಿಂದು ತೋರಿಸಲಿ ಎಂದು ಸವಾಲೆಸೆದರು.
ನಾವು ವಿರೋಧ ಪಕ್ಷದಲ್ಲಿದ್ದೇವೆ ಎಂಬ ಒಂದೇ ಕಾರಣಕ್ಕೆ ಎಲ್ಲವನ್ನು ವಿರೋಧಿಸುವುದು ಸಭ್ಯತನವಲ್ಲ, ತಿನ್ನುವ ಇಚ್ಛೆ ಇದ್ದರೆ ತಾನು ಕೂಡ ಗೋಮಾಂಸ ತಿನ್ನುತ್ತೇನೆ ಎಂಬ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಜನರನ್ನು ದಾರಿ ತಪ್ಪಿಸಲು ನೋಡುತ್ತಿದ್ದಾರೆ ಎಂದು ಚವ್ಹಾಣ್ ಆರೋಪಿಸಿದರು.
ನಮ್ಮ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಲು ಬದ್ಧವಾಗಿದೆ. ಇದು ನಮ್ಮ ಅಜೆಂಡಾವೂ ಆಗಿದೆ. ನಮ್ಮ ಸಿಎಂ, ಸಚಿವರು, ಶಾಸಕರು ಎಲ್ಲರೂ ಈ ಕಾಯ್ದೆಯ ಜಾರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದಾರೆ. ಈ ಕಾಯ್ದೆಯನ್ನು ನಾವು ಯಶಸ್ವಿಯಾಗಿ ಜಾರಿ ಮಾಡುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.