"ಹರ್ ಘರ್ ತಿರಂಗ"ಗಾಗಿ ಭರದಿಂದ ಸಾಗಿದ ರಾಷ್ಟ್ರಧ್ವಜ ಸಿದ್ಧ ಪಡಿಸುವ ಕಾರ್ಯ - Mahanayaka

“ಹರ್ ಘರ್ ತಿರಂಗ”ಗಾಗಿ ಭರದಿಂದ ಸಾಗಿದ ರಾಷ್ಟ್ರಧ್ವಜ ಸಿದ್ಧ ಪಡಿಸುವ ಕಾರ್ಯ

harghar thiranga
22/07/2022

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಗಸ್ಟ್ 11 ರಿಂದ 17 ರವರೆಗೆ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ದೇಶದ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸಲು ಅನುಕೂಲವಾಗುವಂತೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್  ರಾಷ್ಟ್ರಧ್ವಜ ಹೊಲಿದು ಸಿದ್ದಪಡಿಸಿ ನೀಡುವಂತೆ ಜಿಲ್ಲೆಯ ಸಂಜೀವಿನಿ ಗ್ರಾಮಪಂಚಾಯತ್ ಮತ್ತು ಅದರ ಒಕ್ಕೂಟಗಳಿಗೆ ಆದೇಶ ನೀಡಿದೆ.


Provided by

ಈ ನಿಟ್ಟಿನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಸಿದ್ಧಪಡಿಸಲು ಅನುಕೂಲವಾಗುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ರೂಡ್ ಸೆಟ್ ನಲ್ಲಿ ಮಹಿಳಾ ಸ್ವ ಸಹಾಯ ಸಂಘದ 62 ಸದಸ್ಯರಿಗೆ ಧ್ವಜ ಸಂಹಿತೆಯನ್ನು ತಿಳಿಸಿಕೊಟ್ಟು,  ರಾಷ್ಟ್ರಧ್ವಜವನ್ನು ಹೊಲಿಯುವ ತರಬೇತಿ ಕಾರ್ಯಕ್ರಮವನ್ನು ಜುಲೈ 22ರ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.


Provided by

ಹೊಲಿಗೆಯನ್ನು ತಿಳಿದಿರುವ 62 ಮಹಿಳೆಯರಿಗೆ ಧ್ವಜ ಸಿದ್ದಪಡಿಸಲು ಉಡುಪಿಯಿಂದ ಸಂಪನ್ಮೂಲ ವ್ಯಕ್ತಿಯೊಬ್ಬರನ್ನು ನಿಯೋಜಿಸಲಾಗಿತ್ತು. ಅವರು ಮೊದಲಿಗೆ ಧ್ವಜ ಸಂಹಿತೆಯನ್ನು ತಿಳಿಸಿ, ಧ್ವಜವನ್ನು ಸಿದ್ಧಪಡಿಸುವ ತರಬೇತಿ ನೀಡಿದರು.

ರಾಷ್ಟ್ರಧ್ವಜ ಸಿದ್ಧಪಡಿಸಲು ಅಗತ್ಯವಿರುವ ಸಾಮಗ್ರಿಗಳನ್ನು ಜಿಲ್ಲೆಯಿಂದಲೇ ಖರೀದಿಸಿ ನೀಡಲಾಗಿತ್ತು. ಧ್ವಜವನ್ನು ಹೊಲಿದ ನಂತರ ಸ್ಕ್ರಿನ್ ಪ್ರಿಂಟ್ ಮೂಲಕ ಮಧ್ಯ ಭಾಗದಲ್ಲಿ ಅಶೋಕ ಚಕ್ರವನ್ನು ಮುದ್ರಿಸಲಾಗುವುದು.

ಇಲ್ಲಿ ತರಬೇತಿ ಪಡೆದ ಮಹಿಳೆಯರು, ವಿವಿಧ ಗ್ರಾಮ ಪಂಚಾಯತ್ ಗಳು ಹಾಗೂ ಮನೆಗಳಲ್ಲಿಯೂ ಧ್ವಜಗಳನ್ನು ಹೊಲಿದು, ಸಿದ್ಧಪಡಿಸಿ ಸಂಜೀವಿನಿ ಒಕ್ಕೂಟಗಳ ಮೂಲಕ ಅವುಗಳನ್ನು ಮಾರಾಟ ಕೇಂದ್ರಕ್ಕೆ ತಲುಪಿಸಲಿದ್ದಾರೆ.

ಸುಳ್ಯ ತಾಲೂಕಿನ ಆರಂತೋಡು ಗ್ರಾಮ ಪಂಚಾಯಿತಲ್ಲೇ ಈಗಾಗಲೇ 1,500 ಧ್ವಜ ಸಿದ್ಧಪಡಿಸಲು ಆದೇಶ ನೀಡಲಾಗಿದ್ದು, ಅದರಲ್ಲಿ 150 ಈಗಾಗಲೇ ಸಿದ್ಧಗೊಂಡಿದೆ, ಸುಳ್ಯದ ಜಾಲಸೂರು ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯಿತಿನಲ್ಲೂ ಕೂಡ ಧ್ವಜ ಸಿದ್ಧಪಡಿಸುವ ಕಾರ್ಯ ಬರದಿಂದ ಸಾಗಿದೆ.

2021ರಲ್ಲಿ ತರಲಾದ ತಿದ್ದುಪಡಿ ಪ್ರಕಾರ ರಾಷ್ಟ್ರ ಧ್ವಜವನ್ನು ಹತ್ತಿ, ರೇಷ್ಮೆ ಹಾಗೂ ಪಾಲಿಸ್ಟರ್ ಬಟ್ಟೆಯಲ್ಲಿ ಧ್ವಜವನ್ನು ಸಿದ್ಧಪಡಿಸಬಹುದಾಗಿದೆ.

ಧ್ವಜವನ್ನು ಸಿದ್ಧಪಡಿಸಲು ಅಗತ್ಯವಿರುವ ಕಚ್ಚಾ ವಸ್ತುವನ್ನು ಮಂಗಳೂರಿನ ಸೌರಾಷ್ಟ್ರ ಹಾಗೂ ಸ್ಕೂಲ್ ಬುಕ್ ಕಂಪೆನಿಗಳಿಂದ ಖರೀದಿಸಲಾಗುತ್ತಿದೆ ಹಾಗೂ ಬೆಂಗಳೂರಿನಲ್ಲಿಯೂ ಖರೀದಿಸಿ ತರಲಾಗುತ್ತಿದೆ, ಇದೀಗ ಸಿದ್ದ ಪಡಿಸುತ್ತಿರುವ ಹತ್ತಿ ಬಟ್ಟೆಯ ಧ್ವಜಕ್ಕೆ 60 ರೂಪಾಯಿ ಹಾಗೂ ಪಾಲಿಸ್ಟರ್ ಧ್ವಜಕ್ಕೆ 35 ರೂ.ಗಳಾಗಲಿದ್ದು,  ಅವುಗಳನ್ನು 30×20 ಹಾಗೂ 16×24 ಹಾಗೂ 6 x9 ಇಂಚುಗಳ ಅಳತೆಯಲ್ಲಿ ಹೊಲಿಯಲಾಗುತ್ತಿದೆ ಎಂದು ಎನ್ ಆರ್ ಎಲ್ ಎಂ ನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ತಿಳಿಸುತ್ತಾರೆ.

ರೂಡ್ ಸೆಟ್ ನಿರ್ದೇಶಕರಾದ ಸುರೇಶ್ ಕೆ.ಎಂ., ಎನ್.ಆರ್.ಎಲ್.ಎಂ. ವಲಯ ಮೇಲ್ವಿಚಾರಕ ಜಯಾನಂದ್ ಹಾಗೂ ಸಂಪನ್ಮೂಲ ವ್ಯಕ್ತಿ ವೀಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ