‘ಸನಾತನವನ್ನು ನಿರ್ಮೂಲನೆ ಮಾಡಲೇಬೇಕು’: ತಮಿಳುನಾಡು ರಾಜ್ಯಪಾಲರ ಜಾತಿ ಹೇಳಿಕೆಗೆ ಉದಯನಿಧಿ ತಿರುಗೇಟು
ರಾಜ್ಯದಲ್ಲಿ ಸಾಮಾಜಿಕ ಮತ್ತು ಜಾತಿ ಆಧಾರಿತ ತಾರತಮ್ಯದ ಬಗ್ಗೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರ ಹೇಳಿಕೆಗೆ ತಮಿಳುನಾಡು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯೆ ನೀಡಿದ್ದಾರೆ. ಸನಾತನ ಧರ್ಮವನ್ನು ತೊಡೆದುಹಾಕುವ ಅವಶ್ಯಕತೆಯಿದೆ ಮತ್ತು ಹುಟ್ಟಿನಿಂದ ಎಲ್ಲರೂ ಸಮಾನರು ಎಂದು ಅವರು ಹೇಳಿದ್ದಾರೆ.
ತಂಜಾವೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ಯಪಾಲ ಆರ್.ಎನ್.ರವಿ, ತಮಿಳುನಾಡಿನಲ್ಲಿ ಸಾಮಾಜಿಕ ತಾರತಮ್ಯ ಇನ್ನೂ ಸಮಸ್ಯೆಯಾಗಿದೆ ಎಂದು ಹೇಳಿದ್ದರು. ಈ ಬಗ್ಗೆ ಉದಯನಿಧಿ ಪ್ರತಿಕ್ರಿಯಿಸುತ್ತಾ, “ಅವರು (ರಾಜ್ಯಪಾಲರು) ಏನು ಹೇಳುತ್ತಿದ್ದಾರೆ ಎಂಬುದನ್ನು ನಾವು ಸಹ ಹೇಳುತ್ತಿದ್ದೇವೆ. ಅದಕ್ಕಾಗಿಯೇ ನಾವು ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳುತ್ತಿದ್ದೇವೆ. ನಾವು ಜಾತಿ ತಾರತಮ್ಯದ ಬಗ್ಗೆಯೂ ಮಾತನಾಡುತ್ತಿದ್ದೇವೆ. ಹುಟ್ಟಿನಿಂದಲೇ ಎಲ್ಲರೂ ಸಮಾನರು ಎಂದು ಹೇಳುತ್ತಿದ್ದೇವೆ” ಅಂದರು.
ಎಲ್ಲಿ ಜಾತಿ ತಾರತಮ್ಯವಿದೆಯೋ ಅಲ್ಲಿ ತಪ್ಪು ಇರುತ್ತದೆ. ನಾವು ಅದರ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ ಎಂದು ಸುದ್ದಿ ಸಂಸ್ಥೆ ಎಎನ್ಐ ಇವರ ಹೇಳಿಕೆಯನ್ನು ಉಲ್ಲೇಖಿಸಿದೆ.
ಭಾನುವಾರ ತಮಿಳುನಾಡು ರಾಜ್ಯಪಾಲರು, ಸಮಾಜದಲ್ಲಿ ಸಾಮಾಜಿಕ ತಾರತಮ್ಯವಿದೆ, ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದರು.
ನಮ್ಮಲ್ಲಿ ಅಸ್ಪೃಶ್ಯತೆ, ಸಾಮಾಜಿಕ ತಾರತಮ್ಯವಿದೆ. ಸಹೋದರ ಸಹೋದರಿಯರ ದೊಡ್ಡ ವಿಭಾಗವನ್ನು ಸಮಾನವಾಗಿ ಪರಿಗಣಿಸಲಾಗುವುದಿಲ್ಲ. ಇದು ನೋವಿನಿಂದ ಕೂಡಿದೆ. ಇದು ಸ್ವೀಕಾರಾರ್ಹವಲ್ಲ. ಇದು ಹಿಂದೂ ಧರ್ಮ ಹೇಳುವುದಲ್ಲ. ಹಿಂದೂ ಧರ್ಮವು ಸಮಾನತೆಯ ಬಗ್ಗೆ ಮಾತನಾಡುತ್ತದೆ” ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.