ಫಲಿತಾಂಶ ಬರಲಿ, ಓಡು ಮಗಾ, ಓಡು ಮಗಾ ಸರದಿ ಯಾರದ್ದೆನ್ನುವುದು ಗೊತ್ತಾಗುತ್ತದೆ: ಸಚಿವ ಅಶೋಕ್‌ʼಗೆ ಹೆಚ್.ಡಿ.ಕುಮಾರಸ್ವಾಮಿ ತರಾಟೆ - Mahanayaka

ಫಲಿತಾಂಶ ಬರಲಿ, ಓಡು ಮಗಾ, ಓಡು ಮಗಾ ಸರದಿ ಯಾರದ್ದೆನ್ನುವುದು ಗೊತ್ತಾಗುತ್ತದೆ: ಸಚಿವ ಅಶೋಕ್‌ʼಗೆ ಹೆಚ್.ಡಿ.ಕುಮಾರಸ್ವಾಮಿ ತರಾಟೆ

kumaraswamy
16/03/2023

ಬೆಂಗಳೂರು: ಜೆಡಿಎಸ್‌ ಪಕ್ಷ ಮುಂದಿನ ಚುನಾವಣೆಯಲ್ಲಿ ಇಪ್ಪತ್ತು ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲುತ್ತದೆ ಎಂದು ಹೇಳಿಕೆ ನೀಡಿದ್ದ ಕಂದಾಯ ಸಚಿವ ಆರ್.ಅಶೋಕ್‌ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.


Provided by

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು; ಸಾಮ್ರಾಟ್ ಅಶೋಕೂ, ನಿಮ್ಮ ಪಕ್ಷದಲ್ಲಿರುವ ಅರುಣರಾಗ, ವಿಜಯನಾದ ಕಥನಗಳ ಕಥೆ ಏನು? ಎಂದು ಪ್ರಶ್ನಿಸಿದ್ದಾರೆ.

ಸನ್ಮಾಶ್ರೀ ಅಶೋಕ್‌ ಅವರು ಭವಿಷ್ಯವನ್ನು, ಸಂಖ್ಯಾಶಾಸ್ತ್ರವನ್ನು ಹೇಳುತ್ತಾರೆ ಎಂದು ನನಗೆ ಗೊತ್ತಾಗಿದ್ದು ಈಗಲೇ. ಅವರಲ್ಲೂ ಒಬ್ಬರು ‘ಕಾಲಜ್ಞಾನಿ’, ‘ಸಂಖ್ಯಾಜ್ಞಾನಿ’ ಇದ್ದಾರೆನ್ನುವ ಸೋಜಿಗ ನನಗೆ ಬೆಕ್ಕಸ ಬೆರಗುಂಟು ಮಾಡಿದೆ. ಚುನಾವಣೆ ನಂತರ ತಮ್ಮ ದುಡಿಮೆಗೆ ದೋಖಾ ಇಲ್ಲ ಎನ್ನುವ ಆತ್ಮವಿಶ್ವಾಸ ಅಶೋಕ್ ಅವರಲ್ಲಿದೆ, ಸಂತೋಷ. ನಮ್ಮ ಜೆಡಿಎಸ್‌ ಪಕ್ಷಕ್ಕೆ 20 ಸ್ಥಾನಗಳು ಬರುತ್ತವೆ ಎಂದು ಚಿಕ್ಕಬಳ್ಳಾಪುರದಲ್ಲಿ ಗಿಣಿಭವಿಷ್ಯ ಹೇಳಿರುವ ಅವರು, ತಮ್ಮ ಬಿಜೆಪಿಗೆ ಅದೆಷ್ಟು ಸೀಟು ಗೆಲ್ಲುತ್ತದೆ ಎನ್ನುವುದನ್ನು ಹೇಳಲು ಮರೆತಿದ್ದಾರೆ! ಮರೆತಿದ್ದಾರೆಯೋ ಅಥವಾ ಬೇಕೆಂದೇ ಹೇಳಲಿಲ್ಲವೋ..? ಅವರೇ ಹೇಳಬೇಕು. ಎಷ್ಟೇ ಆಗಲಿ, ಅವರ ಜಾಣತನ ಜಗಜ್ಜಾಹೀರು!! ಎಂದು ಅಶೋಕ್‌ ಅವರಿಗೆ ಟಾಂಗ್‌ ನೀಡಿದ್ದಾರೆ.


Provided by

ಅಶೋಕ್ ಸಾಹೇಬರು ‘ವಿಜಯ ಸಂಕಲ್ಪ’ಕ್ಕೆ ಬದಲಾಗಿ ‘ಸುಳ್ಳುಸಂಕಲ್ಪ’ ಮಾಡಿಕೊಂಡೇ ರಾಜ್ಯವನ್ನು ಸುತ್ತುತ್ತಿದ್ದಾರೆ. ಅವರ ‘ಸುಳ್ಳುಸಂಕಲ್ಪ ಯಾತ್ರೆ’ಗೆ ನನ್ನ ಶುಭಾಶಯಗಳು ಹಾಗೂ ಗಾಢ ಸಾಂತ್ವನಗಳು. ಆದರೆ, ಅವರ ಕಾಮಾಲೆ ಮನಸ್ಸಿನ, ಅದರ ಅರೆಬೆಂದ ಲೆಕ್ಕದ ಬಗ್ಗೆ ನನ್ನ ಅನುಕಂಪವಿದೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಕಂಡವರ ತಟ್ಟೆಯಲ್ಲಿ ನೊಣ ಹುಡುಕುವುದು ಬಿಜೆಪಿಗೆ ಅಂಟಿದ ಜಾಡ್ಯ ಮತ್ತು ಆಜನ್ಮಪರ್ಯಂತ ಬಂದಿರುವ ಚಾಳಿ. ನಮ್ಮ ಪಕ್ಷ ಬಿಡೋರ ಮಾತು ಹಾಗಿರಲಿ, ನಿಮ್ಮ ಪಕ್ಷದಲ್ಲಿ ವಾರದೊಪ್ಪತ್ತಿನಿಂದ ನಿರಂತರವಾಗಿ ಕೇಳಿಬರುತ್ತಿರುವ ಅರುಣರಾಗ, ವಿಜಯನಾದ ಕಥನಗಳ ಕಥೆ ಎನು ಅಶೋಕ್‌ ಅವರೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ನಿನ್ನೆ ದಿನ ನಿಮ್ಮ ಕೇಂದ್ರ ಗೃಹ ಸಚಿವರು ಅಮಿತ್ ಶಾ ಅವರು ಮಾಡಿದ ಪಂಚಾಯಿತಿ ಕಟ್ಟೆ ಪುರಾಣದ ಅಸಲಿಯೆತ್ತೇನು? ಈ ಬಿಜೆಪಿಯ ಗೃಹಭಂಗದಿಂದ ಯಾರಿಗೆ ದುಃಖ? ಯಾರಿಗೆ ʼಸಂತೋಷʼ!? ಕೊಂಚ ಹೇಳಬಲ್ಲಿರಾ ಅಶೋಕ್‌ ಅವರೇ? ಇಷ್ಟೆಲ್ಲಾ ಅವಾಂತರ, ಹಗರಣಗಳ ಹೊಲಸು ಮೆತ್ತಿಕೊಂಡಿರುವ ನೀವು, ನಮ್ಮನ್ನು 20 ಸೀಟಿಗೇ ಕಟ್ಟಿ ಹಾಕಬಲ್ಲಿರಾ? ʼ40% ನಾಯಕʼರಾದ ನಿಮ್ಮಲ್ಲಿ ಆ ಧಮ್ಮುತಾಕತ್ತು ಇದೆಯಾ? ಹಾಗಿದ್ದರೆ, ವಿಶ್ವವಂದ್ಯ ಪ್ರಧಾನಿಗಳು ಅಷ್ಟು ಬಿಡುವಾಗಿ ಕರ್ನಾಟಕಕ್ಕೆ ಪದೇಪದೆ ಓಡೋಡಿ ಬರುತ್ತಾರೇಕೆ? ಅಮಿತ್ ಶಾರವರ ಅಪರಿಮಿತ ಭೇಟಿಗಳು ಯಾಕೋ?? ಪಾಪ.. ನಿಮ್ಮ ಫಜೀತಿ!! ಎಂದು ಕಂದಾಯ ಸಚಿವರನ್ನು ಮಾಜಿ ಮುಖ್ಯಮಂತ್ರಿಗಳು ಲೇವಡಿ ಮಾಡಿದ್ದಾರೆ.

ಚುನಾವಣೆ ಆಗಲಿ, ಫಲಿತಾಂಶ ಬರಲಿ. ಓಡು ಮಗಾ,ಓಡು ಮಗಾ ಸರದಿ ಯಾರದ್ದೆನ್ನುವುದು ಜನಕ್ಕೇ ಗೊತ್ತಾಗುತ್ತದೆ. ಎಷ್ಟಾದರೂ ಓಡು ಮಗಾ ರೇಸ್ʼನಲ್ಲಿ ನಿಮ್ಮನ್ನು ಸರಿಗಟ್ಟುವ ವೀರರೂ ಶೂರರೂ ಕರ್ನಾಟಕದಲ್ಲಿ ಇದ್ದಾರೆಯೇ? ʼಆಪರೇಷನ್ ಕಮಲಕಾಂಡʼದಲ್ಲಿ ನಿಮ್ಮದೂ ಒಂದು ತುಕ್ಕುಹಿಡಿದ ಅಧ್ಯಾಯವಿದೆಯಲ್ಲಾ? ಸಾಮ್ರಾಟ್ ಅಶೋಕೂ ಮತ್ತು ಆಪರೇಷನ್ ಕಮಲವೂ.. ಎಂದು ಕಂದಾಯ ಸಚಿವರ ಕಾಲೆಳೆದಿದ್ದಾರೆ ಮಾಜಿ ಮುಖ್ಯಮಂತ್ರಿಗಳು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ