ಹಿಂದೂ ಧರ್ಮದ ಬಗ್ಗೆ ಹೇಳಿಕೆಯ ನಂತರ ಪ್ರತಿ ವೇದಿಕೆಯಲ್ಲಿ ಶ್ಲೋಕ, ಮಂತ್ರ ಹೇಳುತ್ತಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್! - Mahanayaka

ಹಿಂದೂ ಧರ್ಮದ ಬಗ್ಗೆ ಹೇಳಿಕೆಯ ನಂತರ ಪ್ರತಿ ವೇದಿಕೆಯಲ್ಲಿ ಶ್ಲೋಕ, ಮಂತ್ರ ಹೇಳುತ್ತಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್!

dr g parameshwar
09/09/2023

ಬೆಂಗಳೂರು: ಇತ್ತೀಚೆಗೆ ಹಿಂದೂ ಧರ್ಮದ ಹುಟ್ಟಿನ ವಿಚಾರವಾಗಿ ಹೇಳಿಕೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ವಿರುದ್ಧ  ರಾಜ್ಯ ಬಿಜೆಪಿ ನಾಯಕರು ಹಾಗೂ ಬಿಜೆಪಿ ಪರ ಹಿಂದುತ್ವ ಸಂಘಟನೆಗಳು ಬೆಂಬಿಡದೇ ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆ ಪ್ರತಿ ವೇದಿಕೆಯಲ್ಲೂ ತಮ್ಮ ಭಾಷಣಕ್ಕೂ ಮೊದಲು ಪರಮೇಶ್ವರ್ ಹಿಂದೂ ಧರ್ಮದ ಶ್ಲೋಕಗಳನ್ನ ಹೇಳುತ್ತಿರುವುದು ಅವರ ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ.

ಇತ್ತೀಚೆಗೆ ಮಧುಗಿರಿಯಲ್ಲಿ ನಡೆದ ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಭಾಷಣಕ್ಕೂ ಮೊದಲು ಭಗವದ್ಗೀತೆಯ ಶ್ಲೋಕವನ್ನು ಹೇಳಿದ್ದಲ್ಲದೇ ಅದರ ಅರ್ಥವನ್ನು ಬಿಡಿಸಿ ಹೇಳಿದ್ದ ಡಾ.ಜಿ.ಪರಮೇಶ್ವರ್, ಯಾವಾಗೆಲ್ಲ ಪ್ರಪಂಚದಲ್ಲಿ ಅನ್ಯಾಯ, ಅಧರ್ಮ ನಡೆಯುತ್ತೋ ಆಗೆಲ್ಲ, ನಾನು ಮತ್ತೆ ಜನಿಸುತ್ತೇನೆ ಎಂದು ಕೃಷ್ಣ ಹೇಳಿರುವುದಾಗಿ ತಿಳಿಸಿದ್ದಲ್ಲದೇ ಶ್ರೀಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳನ್ನ ತಿಳಿಸಿದ್ದರು.

ಇದೀಗ ಪಾವಗಡದ ಕಾರ್ಯಕ್ರಮವೊಂದರಲ್ಲೂ ಪರಮೇಶ್ವರ್ ಶನಿಶ್ವರನ ಮಂತ್ರ ಹೇಳಿ ಭಾಷಣ ಶುರು ಮಾಡಿದ್ದಾರೆ. ನಾನಿವತ್ತು ಪಾವಗಡಕ್ಕೆ ಬಂದಾಗ ಮೂರು ನಾಮ ಹಾಕಿಕೊಂಡು ಜನರು ನಿಂತಿದ್ದರು, ಯಾತಕ್ಕೆ ಅಂತ ಕೇಳಿದೆ, ಇವತ್ತು ಶ್ರಾವಣ ಶನಿವಾರ ಅದ್ಕೆ ಶನಿಮಾಹತ್ಮ ದೇವಸ್ಥಾನಕ್ಕೆ ಬಂದಿದ್ದೇವೆ ಎಂದರು.‌ ಅದ್ಕೆ ಶನಿಮಹಾತ್ಮ ನಮಿಸಿ ನನ್ನ ಮಾತು ಶುರು ಮಾಡುತ್ತೇನೆ ಎಂದು ಮಂತ್ರ ಹೇಳಿದ ಬಳಿಕ ಪರಮೇಶ್ವರ್ ವಿವರಣೆ ನೀಡಿದರು.

ಹಿಂದೂ ಧರ್ಮದ ಹೇಳಿಕೆ ಬಳಿಕ ಪ್ರತಿ ವೇದಿಕೆಯಲ್ಲೂ ಡಾ.ಜಿ.ಪರಮೇಶ್ವರ್ ಮಂತ್ರ, ಶ್ಲೋಕಗಳನ್ನ ಹೇಳಲು ಆರಂಭಿಸಿದ್ದಾರೆ. ಗೃಹ ಸಚಿವರ ಈ ನಡೆ ಬೆಂಬಲಿಗರನ್ನು ಗೊಂದಲಕ್ಕೀಡು ಮಾಡಿದೆ. ಪರಮೇಶ್ವರ್ ಅವರು ಪ್ರಶ್ನಿಸಿದ ಹಿಂದೂ ಧರ್ಮದ ಹುಟ್ಟಿನ ಪ್ರಶ್ನೆಯನ್ನು ಹಿಂಬಾಲಿಸಬೇಕೆ? ಅಥವಾ ಅವರು ಹೇಳಿದ ಮಂತ್ರವನ್ನು ಪಠಿಸಬೇಕೆ? ಎನ್ನುವ ಗೊಂದಲ ಅಭಿಮಾನಿಗಳಲ್ಲಿ ಸೃಷ್ಟಿಯಾಗಿದೆ.

ಇತ್ತೀಚಿನ ಸುದ್ದಿ