ತಾಕತ್ತಿದ್ದರೆ ರಾಜೀನಾಮೆ ನೀಡಿ ಮಹಿಷ ದಸರಾ ತಡೆಯಲಿ: ಸಂಸದ ಪ್ರತಾಪ್‌ ಸಿಂಹಗೆ ಸವಾಲು - Mahanayaka
4:20 AM Saturday 21 - September 2024

ತಾಕತ್ತಿದ್ದರೆ ರಾಜೀನಾಮೆ ನೀಡಿ ಮಹಿಷ ದಸರಾ ತಡೆಯಲಿ: ಸಂಸದ ಪ್ರತಾಪ್‌ ಸಿಂಹಗೆ ಸವಾಲು

mahisha dasara
10/10/2023

ಚಾಮರಾನಗರ: ಸಂಸದ ಪ್ರತಾಪ್ ಸಿಂಹಗೆ ತಾಕತ್ತಿದ್ದರೆ ಸಂವಿಧಾನಬದ್ದ ಸಂಸದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದ ಪ್ರಗತಿಪರ ಚಿಂತಕರು, ಜಿಲ್ಲಾ ಮತ್ತು ತಾಲೂಕು ಮಟ್ಟದ ದಲಿತ ಸಂಘಟನೆಗಳು ಹಾಗೂ ಅಂಬೇಡ್ಕರ್ ಸಂಘಟನೆಗಳ ಸಹಯೋಗದಲ್ಲಿ ಮೈಸೂರಿನಲ್ಲಿ ಅ. 13ರಂದು ಶುಕ್ರವಾರ ನಡೆಯುವ ಮಹಿಷ ದಸರಾವನ್ನು ತಡೆಯಲಿ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಯರಿಯೂರು ಸಿ.ರಾಜಣ್ಣ ಸವಾಲು ಹಾಕಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಾಡಿನ ಅನೇಕ ಹಳ್ಳಿಗಳಲ್ಲಿ ರಾವಣನ, ಹಿರಣ್ಯರಕಶ್ಯಪನ ದೇವಾಲಯಗಳಿದ್ದು, ಅಲ್ಲಲ್ಲಿ ಪೂಜೆ ಮಾಡಿಕೊಂಡು ಹಬ್ಬ ಆಚರಣೆ, ಉತ್ಸವಗಳು ನಡೆಯುತ್ತಿದೆ. ಇಂತಹ ಬಹುತ್ವದ ದೇಶ ನಮ್ಮದು. ಇದೇ ದೇಶದ ಹಿರಿಮೆಯಾಗಿದೆ. ಮೈಸೂರು ಮೂಲತ: ಮಹಿಷಾನನಾಡು  ಓಣಂ, ಬಲಿ ಚಕ್ರವರ್ತಿ ಹಬ್ಬದಂತೆ ದಸರಾ ಸಂದರ್ಭದಲ್ಲಿ ಪಿತೃಪಕ್ಷ ಮಹಿಷಾನ ದಿನಾಚರಣೆಗಳು ಈ ನೆಲದ ಮೂಲ ನಿವಾಸಿಗಳು ಆಚರಿಸಿಕೊಂಡು ಬರುತ್ತಿದ್ದಾರೆ ಎಂದರು.

ಐತಿಹಾಸಿಕ ಪರಂಪರೆಯ ಭಾಗವಾಗಿಯೇ ಮಹಿಷಾ ದಸರಾವನ್ನು ಪ್ರಜ್ಞಾವಂತರು ಅನೇಕ ವರ್ಷಗಳಿಂದ ಚಾಮುಂಡಿಬೆಟ್ಟದಲ್ಲಿ  ಮಹಿಷಾನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವ ಮೂಲಕ ಆಚರಿಸಿಕೊಂಡು ಬಂದಿದ್ದಾರೆ. ಆದರೆ ವೈದಿಕ ಚಾಮುಂಡಿಯನ್ನು ಮತಬ್ಯಾಂಕ್, ರಾಜಕಾರಣ ಮಾಡಲು ಹೊರಟಿರುವ ಸಂಸದ ಪ್ರತಾಪ್ ಸಿಂಹ ಮಹಿಷ ದಸರಾವನ್ನು ತಡೆಯುವುದಾಗಿ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯವಾಗಿದೆ.


Provided by

ಜಿಲ್ಲೆಯಿಂದ ಮನೆಗೊಬ್ಬರಂತೆ ಭಾಗವಹಿಸಲು ಮನವಿ : 

ಮೈಸೂರಿನಲ್ಲಿ ಅ.13 ರಂದು ಶುಕ್ರವಾರ ನಡೆಯುವ ಮಹಿಷ ದಸರಾಕ್ಕೆ ಜಿಲ್ಲೆಯಿಂದ ದಲಿತ ಸಂಘಟನೆಗಳ ಮುಖ್ಯಸ್ಥರು, ಅಂಬೇಡ್ಕರ್ ಅನುಯಾಯಿಗಳು ಪ್ರತಿಮನೆಗೊಬ್ಬರಂತೆ ಭಾಗವಹಿಸಿ ಯಶ್ವಸಿಗೊಳಿಸಿಕೊಡುವಂತೆ ಸಿ.ರಾಜಣ್ಣ ಮನವಿ ಮಾಡಿದರು.

ಸಂಸದ ಪ್ರತಾಪ್‌ಸಿಂಹನ್ನು ಗಡಿಪಾರು ಮಾಡಲು ಆಗ್ರಹ : 

ಮಹಾನಾಯಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ವಕೀಲರಾದ ಪ್ರಸನ್ನಕುಮಾರ್ ಮಾತನಾಡಿ, ಮಹಿಷ ದಸರಾ ಒಂದು ಐತಿಹಾಸಿಕಯುಳ್ಳ ಮೈಸೂರಿನ ಅಸ್ಮಿತೆಯಾಗಿದೆ. ಇಂತಹ ದಸರಾವನ್ನು ತಡೆಯುವುದಾಗಿ ಹೇಳಿಕೆ ನೀಡಿರುವ ಸಂಸದ ಪ್ರತಾಪ್‌ ನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಾಪ್‌ಸಿಂಹ ಒಬ್ಬ ಜವಾಬ್ದಾರಿಯುತ ಸಂಸದರಾಗಿದ್ದು, ಮನುವಾದಿಗಳ ಒಲೈಕೆಗಾಗಿ, ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ. ಬೆಟ್ಟದ ಚಾಮುಂಡಿಗೆ ಕೆಡಕು ಮಾಡುವ ರೀತಿಯಲ್ಲಿ ಮಹಿಷ ದಸರಾ ಆಚರಣೆ ಮಾಡುತ್ತಿಲ್ಲ. ಮಹಿಷಸುರನ ಸನ್ನಿಧಿಯಿಂದ ಶಾಂತ ರೀತಿಯಲ್ಲಿ ಮಹಿಷ ದಸರಾ ಆಚರಣೆ ಮಾಡಲಾಗುತ್ತಿದೆ. ಒಂದು ವೇಳೆ ಪ್ರತಾಪ್‌ಸಿಂಹ ದಸರಾ ತಡೆದು ಗಲಭೆ, ಹಿಂಸಾಚಾರ ಉಂಟಾದರೆ ಗೃಹ ಇಲಾಖೆ, ಸರ್ಕಾರವೇ ನೇರಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಎಂ.ನಾಗರಾಜು, ಸಿ.ಕೆ.ಮಂಜುನಾಥ್, ಸಂಘಸೇನ, ರಾಮಸಮುದ್ರ ಸುರೇಶ್, ನಂಜುಂಡಸ್ವಾಮಿ, ಜಾನಿ ಹಾಜರಿದ್ದರು.

ಇತ್ತೀಚಿನ ಸುದ್ದಿ