ಅನೈತಿಕ ಪೊಲೀಸ್ ಗಿರಿ: ಮುಸ್ಲಿಂ ವ್ಯಾಪಾರಿಗಳ ಮೇಲೆ ಗುಂಪಿನಿಂದ ಹಲ್ಲೆ

ಮುಸ್ಲಿಂ ಬಾಡಿಗೆದಾರರನ್ನು ಹೊರಹಾಕುವಂತೆ ಸ್ಥಳೀಯರನ್ನು ಆಗ್ರಹಿಸಿ ಪ್ರಚೋದನಾಕಾರಿ ಭಾಷಣ ಮಾಡಿದ ಮತ್ತು ಮುಸ್ಲಿಂ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರಾಖಂಡದ ಡೆಹರಾಡೂನ್ ನಲ್ಲಿ ನಡೆದಿದೆ. ಸಾಮಾಜಿಕ ಮಾಧ್ಯಮ ಬಳಸಿಕೊಂಡು ಡೋನಾಲಿ ಜಂಕ್ಷನ್ನಲ್ಲಿ ಕಾಳಿ ಸೇನಾ ಕಾರ್ಯಕರ್ತರು ಜನರನ್ನು ಪ್ರಚೋದಿಸಿದ್ದರು.
ಕಾಳಿ ಸೇನಾ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಎಫ್ಐಆರ್ ಪ್ರಕಾರ, ಫೆ.4ರಂದು ಸುಮಾರು 50-60 ಜನರ ಗುಂಪು ಮುನ್ನಾ ದಿನ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟಿಸಲು ನಾಥುವಾಲಾ ಪ್ರದೇಶದಲ್ಲಿ ಸಭೆಯೊಂದನ್ನು ನಡೆಸಿತ್ತು. ಸಭೆಯಲ್ಲಿ ಮಾತನಾಡಿದವರು ಘಟನೆಗೆ ಕೋಮುಬಣ್ಣ ನೀಡಿ ಜನರನ್ನು ಪ್ರಚೋದಿಸಿದ್ದರು ಮತ್ತು ಪ್ರದೇಶದಲ್ಲಿ ವಾಸವಾಗಿರುವ ಅಥವಾ ವ್ಯವಹಾರಗಳನ್ನು ನಡೆಸುತ್ತಿರುವ ಇತರ ಸಮುದಾಯಗಳ ಬಾಡಿಗೆದಾರರ ಮೇಲೆ ಹಲ್ಲೆ ನಡೆಸುವಂತೆ ಮತ್ತು ಅವರನ್ನು ಹೊರಹಾಕುವಂತೆ ಸ್ಥಳೀಯರನ್ನು ಆಗ್ರಹಿಸಿದ್ದರು. ನಂತರ ಡೋನಾಲಿಗೆ ಜಾಥಾ ನಡೆಸಿದ್ದ ಪ್ರತಿಭಟನಾಕಾರರು ಮಾರ್ಗದುದ್ದಕ್ಕೂ ಇತರ ಸಮುದಾಯಗಳ ಜನರಿಗೆ ಸೇರಿದ ಅಂಗಡಿಗಳ ನಾಮಫಲಕಗಳು ಮತ್ತು ಬ್ಯಾನರ್ಗಳನ್ನು ಧ್ವಂಸಗೊಳಿಸಿದ್ದರು.
ಇತರ ಸಮುದಾಯಗಳಿಗೆ ಸೇರಿದ ಬಾಡಿಗೆದಾರರನ್ನು ಏಳು ದಿನಗಳಲ್ಲಿ ಹೊರಹಾಕುವಂತೆ ಮನೆಗಳು ಮತ್ತು ಅಂಗಡಿಗಳ ಮಾಲಿಕರಿಗೆ ಬೆದರಿಕೆಯೊಡ್ಡಿದ್ದ ಅವರು,ಇಲ್ಲದಿದ್ದರೆ ತಾವೇ ಅವರನ್ನು ಬಲವಂತದಿಂದ ಹೊರದಬ್ಬುವುದಾಗಿ ಎಚ್ಚರಿಕೆ ನೀಡಿದ್ದರು ಎಂದು ಬಲ್ವಾಲಾ ಔಟ್ಪೋಸ್ಟ್ನ ಎಸ್ಐ ಸಂಜಯ ರಾವತ್ ದೂರಿನ ಮೇರೆಗೆ ದಾಖಲಾಗಿರುವ ಎಫ್ಐಆರ್ನಲ್ಲಿ ಹೇಳಲಾಗಿದೆ.
ಅದೇ ದಿನ ಕಾಳಿ ಸೇನಾ ಕಾರ್ಯಕರ್ತರು ಲೋವರ್ ಟುನ್ವಾಲಾದಲ್ಲಿ ನಡೆಯುತ್ತಿದ್ದ ವಾರದ ಸಂತೆಯಿಂದ ಮುಸ್ಲಿಮ್ ವ್ಯಾಪಾರಿಗಳನ್ನು ಬಲವಂತದಿಂದ ತೆರವುಗೊಳಿಸಿದ್ದರು ಮತ್ತು ಮಾರುಕಟ್ಟೆಯನ್ನು ‘ಸನಾತನಿ’ ಎಂದು ಘೋಷಿಸಿದ್ದರು.
ಇತರ ಸಮುದಾಯಗಳ ವ್ಯಾಪಾರಿಗಳನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದ ಕಾಳಿ ಸೇನಾ ಕಾರ್ಯಕರ್ತರು,ಇನ್ನು ಮುಂದೆ ಇಲ್ಲಿ ಅಂಗಡಿಗಳನ್ನು ಹಾಕಿದರೆ ಕೊಲ್ಲವುದಾಗಿ ಬೆದರಿಕೆಯೊಡ್ಡಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj