ಅಪ್ಪನ ಜೊತೆ ಜಗಳವಾಡಿ ಬಾಲಕ ಆತ್ಮಹತ್ಯೆ
15/03/2022
ಚಿಕ್ಕಮಗಳೂರು: ತಾಲೂಕಿನ ಆಲ್ದೂರು ಗ್ರಾಮದಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕನೊಬ್ಬ ಅಪ್ಪನ ಜೊತೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಚೇತನ್ (9) ಮೃತ ಬಾಲಕ. ಮೂಲತಃ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಶೇಷಗಿರಿ ಗ್ರಾಮದವರಾಗಿರುವ ಬಾಲಕನ ಪೋಷಕರು ಕಳೆದ ನಾಲ್ಕೈದು ವರ್ಷಗಳ ಹಿಂದೆ ಇಬ್ಬರು ಗಂಡು ಮಕ್ಕಳೊಂದಿಗೆ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕಾಫಿತೋಟಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.
ಮೃತ ಬಾಲಕ ತುಸು ಸಿಟ್ಟಿನ ಬಾಲಕನಾಗಿದ್ದು, ಆಗಾಗ್ಗೆ ಕೆಲ ವಿಚಾರಗಳಿಗೆ ಅಪ್ಪ-ಅಮ್ಮನ ಜೊತೆ ಜಗಳವಾಡುತ್ತಿದ್ದನು. ನಾಲ್ಕು ದಿನಗಳ ಹಿಂದೆ ಸ್ವಂತ ಊರು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಜಾತ್ರೆ ಇದ್ದ ಕಾರಣ ಎಲ್ಲರೂ ಹೋಗಿದ್ದರು. ಈ ವೇಳೆ ಅಪ್ಪನ ಜೊತೆ ಜಗಳವಾಡಿದ ಬಾಲಕ ಮನೆಯಲ್ಲಿನ ಜೋಕಾಲಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.