ಜಮೀನು ಉಳಿಸಲು ಹಾಕಿದ ವಿದ್ಯುತ್ ತಂತಿ ಇಬ್ಬರ ಪ್ರಾಣ ತೆಗೆಯಿತು!
ಯಡ್ರಾಮಿ: ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕಣಮೇಶ್ವರ ಗ್ರಾಮದ ಜಮೀನಿನಲ್ಲಿ ಶುಕ್ರವಾರ ಹೊಲದಲ್ಲಿ ಅಳವಡಿಸಿದ ವಿದ್ಯುತ್ ತಂತಿ ಬೇಲಿ ತಗಲಿ ಸಹೋದರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
18 ವರ್ಷ ವಯಸ್ಸಿನ ಆಕಾಶ ಬಸವರಾಜ ಸುಂಬಡ ಮತ್ತು 21 ವರ್ಷ ವಯಸ್ಸಿನ ಪ್ರಕಾಶ ಬಸವರಾಜ ಸುಂಬಡ ಮೃತಪಟ್ಟ ಸಹೋದರರಾಗಿದ್ದು, ಬಸವರಾಜ ಅವರು ಹರನಾಳದಿಂದ ಕೆಲಸಕ್ಕಾಗಿ ಸುಂಬಡ ಗ್ರಾಮಕ್ಕೆ ಕುಟುಂಬ ಸಮೇತವಾಗಿ ಬಂದು ಅಲ್ಲೇ ಉಳಿದುಕೊಂಡಿದ್ದರು. ಗುತ್ತಿಗೆದಾರನೊಬ್ಬ ಚಕ್ ಡ್ಯಾಮ್ ಮಾಡಿಸಲು ಈ ಸಹೋದರರನ್ನು ಕರೆದುಕೊಂಡು ಹೋಗಿದ್ದ. ಕಣಮೇಶ್ವರ ದರ್ಗಾ ಬಳಿ ಇರುವ ಶಿರಸಪ್ಪಗೌಡ ಮಲ್ಕಪ್ಪಗೌಡ, ದೇವಪ್ಪ ಭೋವಿ ಎಂಬುವವರು ಜಮೀನಿಗೆ ವಿದ್ಯುತ್ ತಂತಿ ಬೇಲಿ ಹಾಕಿದ್ದರು. ಆಕಾಶ ಮತ್ತು ಪ್ರಕಾಶ ಚಕ್ ಡ್ಯಾಮ್ ಮಾಡಲು ಅವರ ಜಮೀನು ದಾಟುವ ವೇಳೆ ವಿದ್ಯುತ್ ತಂತಿ ತಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಜಮೀನು ಮಾಲೀಕರು ವಿದ್ಯುತ್ ಹಾಕಿದ ಬಗ್ಗೆ ಸ್ಥಳದಲ್ಲಿ ಮಾಹಿತಿ ಹಾಕಿಲ್ಲ. ಸ್ಥಳದಲ್ಲೂ ಯಾರೂ ಇರಲಿಲ್ಲ. ಹೀಗಾಗಿ ತಂತಿಯಲ್ಲಿ ವಿದ್ಯುತ್ ಪ್ರವಹಿಸುವ ವಿಷಯ ಸಹೋದರರ ಗಮನಕ್ಕೆ ಬಂದಿಲ್ಲ. ಇದೇ ಅವಘಡಕ್ಕೆ ಕಾರಣ ಎಂದು ಯಡ್ರಾಮಿ ಪೊಲೀಸರು ಮಾಹಿತಿ ನೀಡಿದ್ದಾರೆ.