8 ತಿಂಗಳಿನಿಂದ ರಮೇಶ್ ಜಾರಕಿಹೊಳಿ ಸುತ್ತ ಸುತ್ತಿದ್ದಳು ಆ ನಿಗೂಢ ಯುವತಿ | ಕಚೇರಿ ಸಿಬ್ಬಂದಿ ಏನು ಹೇಳುತ್ತಿದ್ದಾರೆ ಗೊತ್ತಾ?
ಬೆಂಗಳೂರು: ಸೆಕ್ಸ್ ಸಿಡಿ ಬಿಡುಗಡೆ ವಿಚಾರವಾಗಿ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ವೈಯಕ್ತಿಕ ಬದುಕು ಬೀದಿಯಲ್ಲಿ ಹರಾಜಾಗಿರುವ ಬಗ್ಗೆ ಅವರು ಸಾಕಷ್ಟು ನೊಂದಿದ್ದಾರೆ ಕೂಡ. ಇದೇ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಜೊತೆಗೆ ವಿಡಿಯೋದಲ್ಲಿ ಕಾಣಿಸಿಕೊಂಡ ಯುವತಿಯ ಬಗ್ಗೆ ಒಂದಷ್ಟು ಮಾಹಿತಿಗಳು ಸದ್ಯ ಹರಿದಾಡುತ್ತಿವೆ.
ಸಿಡಿಯಲ್ಲಿ ಕಾಣಿಸಿಕೊಂಡ ಯುವತಿ ರಮೇಶ್ ಜಾರಕಿಹೊಳಿ ಕಚೇರಿಗೆ 8 ತಿಂಗಳಿನಿಂದ ಆಗಾಗ ಬಂದು ಹೋಗುತ್ತಿದ್ದಳು. ಆದರೆ ಆಕೆ ಉದ್ಯೋಗ ಕೇಳಿ ಬಂದಿರಲಿಲ್ಲ. ತಾನು ಸಾಕ್ಷ್ಯ ಚಿತ್ರ ತಯಾರಿಸಬೇಕು ಎಂದು ಹೇಳಿ ಸಚಿವರ ಬಳಿಗೆ ಬಂದಿದ್ದಳು. ಡಾಕ್ಯುಮೆಂಟರಿ-ಫಿಲ್ಮ್ಗಳನ್ನು ಚಿತ್ರೀಕರಿಸಲು ಡ್ರೋನ್ಗಳನ್ನು ಬಳಸಲು ತಾನು ಬಯಸುತ್ತಿದ್ದು ಅದಕ್ಕೆ ಅಗತ್ಯ ಅನುಮತಿ ಪಡೆಯಬೇಕು. ಸಂರಕ್ಷಿತ ಸ್ಥಳಗಳಲ್ಲಿ ಅನುಮತಿ ಸಿಗದಿರುವುದರಿಂದ ಸಚಿವರ ಬಳಿ ಬಂದಿದ್ದೇನೆ ಎಂದು ಹೇಳುತ್ತಿದ್ದಳು ಎಂದು ಇಲ್ಲಿನ ಸಿಬ್ಬಂದಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಕೂಡ ಹಲವು ಅಧಿಕಾರಿಗಳಿಗೆ ಆಕೆಯನ್ನು ಪರಿಚಯ ಮಾಡಿಕೊಟ್ಟು ಡಾಕ್ಯುಮೆಂಟರಿ ತಯಾರಿಸಲು ಸಹಾಯ ಮಾಡಿ ಎಂದು ಸೂಚಿಸಿದ್ದರು. ಉದ್ಯೋಗ ಕೇಳಿ ಕೊಂಡು ಹೋದಾಗ ಅವರು ಶೋಷಣೆ ಮಾಡಿದ್ದರು ಎನ್ನುವುದು ಸುಳ್ಳು ಎಂದು ಸಿಬ್ಬಂದಿ ಕೂಡ ಹೇಳುತ್ತಿದ್ದಾರೆ ಎಂದು ಆಂಗ್ಲಅಂತರ್ಜಾಲ ಪತ್ರಿಕೆಯೊಂದು ವರದಿ ಮಾಡಿದೆ.
ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋದ ಸ್ಥಳ ಅದು ಭಾರತದ್ದಲ್ಲ ಎನ್ನುವ ವಾದ ಕೇಳಿ ಬಂದಿದೆ. ಇನ್ನೂ ಉದ್ಯೋಗವನ್ನು ಹುಡುಕಿಕೊಂಡು ಬಂದ ಬಡ ಯುವತಿಯೊಬ್ಬಳ ಬಳಿಯಲ್ಲಿ ಹಿಡನ್ ಕ್ಯಾಮರಾ ಹೇಗೆ ಬಂತು? ಈ ಕ್ಯಾಮರಾದ ಬೆಲೆ ಲಕ್ಷಾಂತರ ರೂ. ಇದೆ ಎನ್ನುವ ವಾದಗಳೂ ಕೇಳಿ ಬಂದಿವೆ.
ಯುವತಿಗೆ ರಮೇಶ್ ಜಾರಕಿಹೊಳಿಯ ಪರಿಚಯ ಚೆನ್ನಾಗಿಯೇ ಇದೆ. ಆ ವಿಡಿಯೋದ ವಿಚಾರದಲ್ಲಿ ಗಮನಿಸುವುದಾದರೂ ಅಲ್ಲಿ ಯುವತಿ ರಮೇಶ್ ಜಾರಕಿಹೊಳಿ ಜೊತೆಗೆ ಮುಕ್ತವಾಗಿ ಮಾತನಾಡುತ್ತಿದ್ದಾಳೆ. ಆಕೆಗೆ ರಮೇಶ್ ಜಾರಕಿಹೊಳಿ ಶೋಷಣೆ ಮಾಡುತ್ತಿದ್ದಾರೆ ಎನ್ನುವುದು ಕೂಡ ಪತ್ತೆಯಾಗಿಲ್ಲ.ಅದೇ ವಿಡಿಯೋದಲ್ಲಿ ಹಲವು ಕಡೆಗಳಲ್ಲಿ ಆಕೆ ರಮೇಶ್ ಎಂದು ಏಕ ವಚನದಲ್ಲಿ ಜಾರಕಿಹೊಳಿಯನ್ನು ಕರೆಯುತ್ತಾಳೆ. ರಮೇಶ್ ಜಾರಕಿಹೊಳಿ ಎಲ್ಲಿಯೂ ಒತ್ತಾಯ ಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾರೆ ಎನ್ನುವುದು ಕಂಡು ಬರುತ್ತಿಲ್ಲ. ಆದರೆ, ಕ್ಯಾಮರಾ ಇರಿಸಿ ಅವರನ್ನು ಬೋನಿಗೆ ಬೀಳಿಸಲಾಗಿದೆ ಎನ್ನುವುದು ಸ್ಪಷ್ಟ ಎನ್ನುವ ಮಾತುಗಳು ಕೇಳಿ ಬಂದಿದೆ.
ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ನಂತರ ಚುನಾವಣೆ ಗೆದ್ದು ರಮೇಶ್ ಜಾರಕಿಹೊಳಿ ಸಚಿವರಾಗುತ್ತಿದ್ದಂತೆಯೇ ಬಿಜೆಪಿಯೊಳಗೆ ಅಸಮಾಧಾನ ಹೊಗೆಯಾಡಿದೆ. ಈ ವಿಡಿಯೋವನ್ನು ಕಾಂಗ್ರೆಸ್ ನವರು ಬಿಡುಗಡೆ ಮಾಡಿದ್ದಾರೆ ಎಂದು ಸಾರ್ವಜನಿಕರಿಗೆ ಬಿಜೆಪಿ ನಾಯಕರು ಬಿಂಬಿಸಿದ್ದಾರೆ. ಆದರೆ ವಾಸ್ತವವಾಗಿ ರಮೇಶ್ ಜಾರಕಿಹೊಳಿಗೆ ರಾಜಕೀಯದ ಮೇಲೆ ಇರುವ ಹಿಡಿತ, ಯಡಿಯೂರಪ್ಪನವರ ನಂತರ ಸಿಎಂ ರೇಸ್ ನಲ್ಲಿದ್ದ ಇತರರಿಗೆ ತೀವ್ರವಾಗಿ ಚುಚ್ಚಿದೆ. ಇದೇ ಕಾರಣಕ್ಕೆ ರಮೇಶ್ ಜಾರಕಿಹೊಳಿಯನ್ನು ವ್ಯವಸ್ಥಿತಯವಾಗಿ ಕೆಳಗೆ ತಳ್ಳಿ ಹಾಕಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.