ಜಸ್ಪ್ರೀತ್ ಬುಮ್ರಾ ಕೊಹಿನೂರು ವಜ್ರಕ್ಕಿಂತ ಹೆಚ್ಚು: ದಿನೇಶ್ ಕಾರ್ತಿಕ್
![dinesh karthik](https://www.mahanayaka.in/wp-content/uploads/2024/07/dinesh-karthik.jpg)
ಟಿ20 ವಿಶ್ವಕಪ್ 2024 ಕಿರೀಟಕ್ಕೆ (T20 World Cup 2024) ಭಾರತ ತಂಡವು ಮುತ್ತಿಕ್ಕಲು ನೆರವಾದ ಯಾರ್ಕರ್ ಹಾಗೂ ಸ್ವಿಂಗ್ ಮಾಸ್ಟರ್ ಜಸ್ಪ್ರೀತ್ ಬುಮ್ರಾ (Jasprit Bumrah) ಕೊಹಿನೂರು ವಜ್ರಕ್ಕಿಂತ (Kohinoor Diamond) ಹೆಚ್ಚು ಎಂದು ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬಣ್ಣಿಸಿದ್ದಾರೆ.
ಜೂನ್ 29ರಂದು ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 4 ಓವರ್ ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಈ ಪಂದ್ಯ ಮಾತ್ರವಲ್ಲ, ಒಟ್ಟಾರೆ ಟೂರ್ನಿಯಲ್ಲೂ ಬುಮ್ರಾ ಅಸಾಧಾರಣ ಪ್ರದರ್ಶನ ಕೊಟ್ಟಿದ್ದರು. ತಾನು ಆಡಿದ 8 ಪಂದ್ಯಗಳಲ್ಲಿ ಒಟ್ಟು 15 ವಿಕೆಟ್ ಉರುಳಿಸಿದ್ದರು. ಎಕಾನಮಿ ರೇಟ್ ಕೂಡ ಉತ್ತಮವಾಗಿತ್ತು. ಕೇವಲ 4.17ರ ಎಕಾನಮಿಯಲ್ಲಿ ರನ್ ನೀಡಿದ್ದರು.
ಬುಮ್ರಾ ಬೌಲಿಂಗ್ ಕುರಿತು ಮಾತನಾಡಿದ ದಿನೇಶ್ ಕಾರ್ತಿಕ್, ಬುಮ್ರಾ ಬೌಲಿಂಗ್ ಮಾಡುತ್ತಿದ್ದ ವೇಳೆ ನಾನು ಕಾಮೆಂಟರಿ ಮಾಡುತ್ತಿದ್ದೆ. ಆಗ ಬುಮ್ರಾ ಕೊಹಿನೂರ್ ವಜ್ರಕ್ಕಿಂತ ಹೆಚ್ಚು ಮೌಲ್ಯ ಹೊಂದಿದ್ದಾರೆ ಎಂದು ಹೊಗಳಿದ್ದೆ. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ನ ಮೂರು ಸ್ವರೂಪಗಳಲ್ಲಿ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಅವರಾಗಿದ್ದಾರೆ. ತಂಡವು ಒತ್ತಡಕ್ಕೆ ಸಿಲುಕಿದ್ದ ಸಮಯದಲ್ಲೆಲ್ಲಾ ಬುಮ್ರಾ ರಕ್ಷಿಸಿದ್ದಾರೆ. ಇದು ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬುಮ್ರಾ ನಾಯಕನಾಗಲು ಅರ್ಹ:
ಇದೇ ವೇಳೆ ಜಸ್ಪ್ರೀತ್ ಬುಮ್ರಾ ನಾಯಕನಾಗಬೇಕೆಂಬ ಒಲವನ್ನೂ ವ್ಯಕ್ತಪಡಿಸಿದ್ದಾರೆ. ತವರಿನಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿ ಯಾವುದೇ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಬಲ್ಲ ಸಾಮರ್ಥ್ಯವನ್ನು ಜಸ್ಪ್ರೀತ್ ಬುಮ್ರಾ ಹೊಂದಿದ್ದಾರೆ. ಅಂತಹ ಆಟಗಾರ ಭಾರತೀಯ ತಂಡದ ನಾಯಕನಾಗಲು ಅರ್ಹರು. ಅವರು ಪ್ರಮುಖ ಆಯ್ಕೆಯೂ ಆಗಿದ್ದಾರೆ ಎಂದು ಡಿಕೆ ಕ್ರಿಕ್ಬಜ್ಗೆ ಹೇಳಿದ್ದಾರೆ. ಪ್ರಸ್ತುತ ಬುಮ್ರಾ ಕ್ಯಾಪ್ಟನ್ಸಿ ರೇಸ್ ನಲ್ಲಿದ್ದಾರೆ ಎಂಬುದು ವಿಶೇಷ.
ಭಾರತ ತಂಡಕ್ಕೆ ಸಿಕ್ಕ ಅಪರೂಪದ ಬೌಲರ್. ಅವರಿಗೂ ನಾಯಕತ್ವದ ಕನಸುಗಳಿವೆ. ಯಾವುದೇ ಹಂತದಲ್ಲಿ ಬೇಕಾದರೂ ಭಾರತ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಸಹ ಹೊಂದಿದ್ದಾರೆ. ಅವರು ತುಂಬಾ ಬುದ್ಧಿವಂತರು. ಅದ್ಭುತ ಮತ್ತು ಬುದ್ಧಿವಂತ ವ್ಯಕ್ತಿ ಎಂಬ ಪದಗಳು ಬುಮ್ರಾಗೆ ಸೂಕ್ತವಾಗಿದೆ ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
ಜೂನ್ 29ರಂದು ಶನಿವಾರ ಫೈನಲ್ ಮುಕ್ತಾಯದ ನಂತರ ಭಾನುವಾರ ಟೀಮ್ ಇಂಡಿಯಾ ತವರಿಗೆ ಮರಳಬೇಕಿತ್ತು. ಆದರೆ, ದ್ವೀಪರಾಷ್ಟ್ರಕ್ಕೆ ಚಂಡಮಾರುತ ಅಪ್ಪಳಿಸಿದ ಕಾರಣ ಬಾರ್ಬಡೋಸ್ ನಲ್ಲಿ ವಿಮಾನ ಸೇವೆಯನ್ನು ಮೂರು ದಿನಗಳ ಕಾಲ ಸ್ಥಗಿತಗೊಳಿಸಲಾಯಿತು. ಹೀಗಾಗಿ ಭಾರತ ತಂಡ ಅಲ್ಲಿಯೇ ಸಿಲುಕಿತ್ತು. ಇದೀಗ ಬಿಸಿಸಿಐ ವ್ಯವಸ್ಥೆ ಮಾಡಿದ ವಿಶೇಷ ಚಾರ್ಟೆಡ್ ಫ್ಲೈಟ್ನಲ್ಲಿ ರೋಹಿತ್ ಪಡೆಯನ್ನು ಕರೆತರಲಾಯಿತು. ಇಂದು (ಜುಲೈ 4ರಂದು) ಆಟಗಾರರು ದೆಹಲಿಗೆ ಆಗಮಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: