ರಿಯಾಝ್ ಮೌಲವಿ ಹತ್ಯೆ ಪ್ರಕರಣ: ಆರೋಪಿಗಳಾದ ಮೂವರು ಆರೆಸ್ಸೆಸ್ ಕಾರ್ಯಕರ್ತರು ಖುಲಾಸೆ
ಕೇರಳ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಕಾಸರಗೋಡು ಮುಹಮ್ಮದ್ ರಿಯಾಝ್ ಮೌಲವಿ ಕೊಲೆ ಪ್ರಕರಣದ ಆರೋಪಿಗಳಾದ ಮೂವರು ಆರೆಸ್ಸೆಸ್ ಕಾರ್ಯಕರ್ತರನ್ನು ಕೇರಳ ಕೋರ್ಟ್ ಖುಲಾಸೆಗೊಳಿಸಿದೆ.
ಕಾಸರಗೋಡು ಜಿಲ್ಲಾ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯ ಈ ತೀರ್ಪು ನೀಡಿದೆ. ಕಳೆದ ಏಳು ವರ್ಷಗಳಿಂದ ಆರೋಪಿಗಳು ಜೈಲಿನಲ್ಲಿ ಇದ್ದರು. 2017 ಮಾರ್ಚ್ 20ರಂದು ದುಷ್ಕರ್ಮಿಗಳು ಮೌಲವಿಯವರ ಕತ್ತು ಕೊಯ್ದು ಹತ್ಯೆ ಮಾಡಿದ್ದರು. ಮಸೀದಿಯೊಳಗೆ ಮಲಗಿದ್ದ ಮೌಲವಿಯವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಈ ತೀರ್ಪಿಗೆ ಮೌಲವಿ ಅವರ ಪತ್ನಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಕೋರ್ಟಿನ ಮುಂದೆ ಮಾಧ್ಯಮಗಳ ಜೊತೆ ಮಾತಾಡುತ್ತಾ ಕಣ್ಣೀರು ಹಾಕಿದ್ದಾರೆ.
ನ್ಯಾಯಾಲಯದಿಂದ ನಮಗೆ ನ್ಯಾಯ ಸಿಕ್ಕಿಲ್ಲ ಎಂದವರು ಹೇಳಿದ್ದಾರೆ. ಇದೇ ವೇಳೆ ಒಂದನೇ ಆರೋಪಿಯನ್ನು ಡಿಎನ್ಎ ಮೂಲಕ ಸಾಬೀತುಪಡಿಸಲಾಗಿತ್ತು. ಮೂರನೇ ಆರೋಪಿಯ ತಾಯಿ ಬೈಕ್ ತನ್ನ ಮಗನದ್ದು ಎಂದು ಹೇಳಿದ್ದರು ಮತ್ತು ನೂರಕ್ಕಿಂತಲೂ ಅಧಿಕ ಸಾಕ್ಷಿಗಳನ್ನು ಕೋರ್ಟ್ ನ ಮುಂದೆ ಇಡಲಾಗಿತ್ತು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದ್ದಾರೆ. ಒಂದನೇ ಆರೋಪಿಯ ಶರ್ಟ್ ಮತ್ತು ಲುಂಗಿಯಲ್ಲಿದ್ದ ರಕ್ತ ರಿಯಾಜ್ ಮೌಲವಿಯವರದಾಗಿತ್ತು ಎಂದು ಡಿಎನ್ಎ ಟೆಸ್ಟ್ ಮೂಲಕ ಸಾಬೀತುಪಡಿಸಲಾಗಿದೆ ಎಂದು ನ್ಯಾಯವಾದಿ ಶಾಜಿತ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth