ಅರಿವೇ ಅಂಬೇಡ್ಕರ — ನಮ್ಮ ಗುರುವೇ ಅಂಬೇಡ್ಕರ

dammapriya
14/04/2025

  • ದಮ್ಮಪ್ರಿಯ, ಬೆಂಗಳೂರು

ಒಂದು ವ್ಯಕ್ತಿಯ ಹುಟ್ಟುಹಬ್ಬವನ್ನು ಇಡೀ ಜಗತ್ತೇ “ವಿಶ್ವ ಜ್ಞಾನ” (World knowladge Day) ದಿನವನ್ನಾಗಿ ಆಚರಿಸುತ್ತದೆ ಎಂದರೆ, ಆ ವ್ಯಕ್ತಿಯ ಜ್ಞಾನದ ಶಕ್ತಿ ಅಪಾರವಾದದ್ದು ಎಂದರ್ಥ. 1891 ಏಪ್ರಿಲ್ 14 ನೇ ತಾರೀಖು ಭಾರತದ ಅಸಮಾನ ವ್ಯವಸ್ಥೆಯನ್ನು ತೊಲಗಿಸಲೆಂದೆ ಬಾಬಾಸಾಹೇಬರು ಜನಿಸಿದರು.

ಇಡೀ ಜಗತ್ತು ಕಂಡ ಮಹಾನ್ ಶಿಕ್ಷಣ ತಜ್ಞ, ನೀರಾವರಿ ವ್ಯವಸ್ಥೆಯ ತಜ್ಞ, ಭಾರತದ ರೂಪಾಯಿ ಸಮಸ್ಯೆಯ ಬಗ್ಗೆ ಮೊದಲು ಮಾತನಾಡಿ, 1 ಏಪ್ರಿಲ್ 1935 ರಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ದೊಡ್ಡ ಅರ್ಥ ತಜ್ಞ, ಕಾನೂನು ವ್ಯವಸ್ಥೆಯನ್ನು ಭಾರತದಲ್ಲಿ ಮೊದಲಬಾರಿಗೆ ಜಾರಿಯಾಗಲು  ಶ್ರಮಿಸಿದ ಕಾನೂನು ತಜ್ಞ, ಈಗೆ ಇಡೀ ಜಗತ್ತಿನ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿದ್ದ ಬಾಬಾಸಾಹೇಬರು ಇಂದಿಗೂ ಭಾರತದ ರಾಜಕೀಯ ಆಡಳಿತ ವ್ಯವಸ್ಥೆಗೆ ಪ್ರಸ್ತುತವಾಗುತ್ತಾರೆ.

ಈ ದೇಶದಲ್ಲಿ ಬಾಬಾಸಾಹೇಬರು ರಚಿಸಿದ ಭಾರತದ ಸಂವಿಧಾನ ಸರ್ವ ಜನಾಂಗಕ್ಕೂ ಸಮಾನತೆಯನ್ನು ನೀಡುವುದಾಗಿದೆ. ಅಂತಹ ಪ್ರಭುದ್ದ ಪ್ರೌಢಮೆಯ ಸಂವಿಧಾನವನ್ನು ಬಾಬಾಸಾಹೇಬರು ರಚಿಸಿ ಈ ದೇಶಕ್ಕೆ 1949 ನವೆಂಬರ್ 26 ರಂದು ಭಾರತಕ್ಕೆ ಅರ್ಪಿಸುತ್ತಾರೆ ಎಂದರೆ, ಅದು ಭಾರತೀಯರಾದ ನಮ್ಮೆಲ್ಲರಿಗೂ ಒಂದು ವಿಮೋಚನೆಯ ಅದ್ಯಾಯ ಪ್ರಾರಂಭವಾದ ದಿನ ಎನ್ನಬಹುದು.

ಬಾಬಾಸಾಹೇಬರು ಸಂವಿಧಾನವನ್ನು ಭಾರತಕ್ಕೆ ಅರ್ಪಿಸುತ್ತ , ಇಷ್ಟು ದಿನ ಈ ದೇಶದಲ್ಲಿ ರಾಜ (ರಾಜಕಾರಣಿ) ರಾಣಿಯ ಹೊಟ್ಟೆಯಿಂದ ಮಾತ್ರ ಹುಟ್ಟುವ ವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿತ್ತು. ಆದರೆ ಇನ್ನು ಮುಂದೆ ಈ ದೇಶದಲ್ಲಿ ರಾಜನಾಗಬೇಕಾದವರು ರಾಣಿ ಹೊಟ್ಟೆಯಿಂದ ಹುಟ್ಟಲು ಸಾಧ್ಯವಿಲ್ಲ, ಈ ಸಮಾಜದ ಕಟ್ಟ ಕಡೆಯ ಜನರಿಂದಲೂ ಹುಟ್ಟುತ್ತಾರೆ. ಅಂತಹ ಮತದಾನದ ಹಕ್ಕು ಮತ್ತು ಚುನಾವಣೆ ವ್ಯವಸ್ಥೆಯನ್ನು ಅನುಸರಿಸುವಂತೆ, ನನ್ನ ಸಂವಿಧಾನದಲ್ಲಿ ಅಳವಡಿಸಿದ್ದೇನೆ. ನನ್ನ ಸಂವಿಧಾನ ಸರ್ವರಿಗೂ ಸಮಾನತೆನ್ನು ನೀಡುವುದಾಗಿದೆ. ಆ ಸಂವಿಧಾನ ಯಥಾವತ್ತಾಗಿ ಜಾರಿಯಾದರೆ ಈ ದೇಶ ಪ್ರಭುದ್ದ ಭಾರತವಾಗುತ್ತದೆ. ಆದರೆ ನನ್ನ ಸಂವಿಧಾನ ಯಥಾವತ್ತಾಗಿ ಜಾರಿಯಾಗುತ್ತದೆ ಎನ್ನುವ ನಂಬಿಕೆ ನನಗಿಲ್ಲ. ಯಾಕೆಂದರೆ ಸಂವಿಧಾನವನ್ನು ಜಾರಿಮಾಡುವ ಜಾಗದಲ್ಲಿ ಸಂವಿಧಾನ ವಿರೋಧಿಗಳು ಕುಳಿತುಕೊಂಡು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು  ಧ್ವಂಸ ಮಾಡುತ್ತಾರೆ ಎನ್ನುತ್ತಾ ಭಾರತಕ್ಕೆ ಸಂವಿಧಾವನ್ನು ಅರ್ಪಿಸಿದ ದಿನದಂದೆ ನುಡಿಯುತ್ತಾರೆ. ಶೋಷಿತ ಸಮುದಾಯಗಳಿಗೆ ಎಂದು ಸಂವಿಧಾನದ ಬಗ್ಗೆ ಅರಿವು ಮೂಡುತ್ತದೆಯೋ ಅಂದು ಭಾರತದ ಸಂವಿಧಾನ ಯಥಾವತ್ತಾಗಿ ಜಾರಿಯಾಗುತ್ತದೆ ಎನ್ನುವ ದೃಢ ನಂಬಿಕೆ ನನಗಿದೆ ಎನ್ನುತ್ತಾರೆ.

ಬಾಬಾಸಾಹೇಬರು ಹೇಳಿದಂತೆ ಸಂವಿಧಾನವನ್ನು ಯಥಾವತ್ತಾಗಿ ಜಾರಿಮಡುವುದಿರಲಿ, ಸಂವಿಧಾನದ ಬಗ್ಗೆ ಕಿಂಚಿತ್ತು ಅರಿಯದವರು ಸಂವಿದಾನವನ್ನೇ ಬದಲಾಯಿಸುತ್ತೇವೆ ಎಂದು ಮಾತನಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳಿಂದ ಸಂವಿಧಾನಕ್ಕೆ ಮಾಡುವ ಅಪಮಾನ, ಬಾಬಾಸಾಹೇಬರಿಗೆ ಹೇಗೆ ಗೌರವ ನೀಡಿದಂತಾಗುತ್ತದೆ. ಕೇವಲ ಏಪ್ರಿಲ್ 14 ನೇ ತಾರೀಕಿನಂದು ಬಾಬಾಸಾಹೇಬರಿಗೆ ಹೂ ಮಾಲೆಯನ್ನು ಹಾಕಿ, ಬಾಬಾಸಾಹೇಬರ ಕಾಲಿನ ಬಳಿ ತಮ್ಮ ತಲೆಯನ್ನಿಟ್ಟು ನಮಸ್ಕಾರ ಮಾಡಿದಕ್ಷಣ ಹೇಗೆ ಇವರನ್ನು ನಂಬಲು ಸಾಧ್ಯ.!!!

ಬಾಬಾಸಾಹೇಬರು ವಿದ್ಯೆಗೆ ಹೆಚ್ಚು ಮಹತ್ವ ಕೊಟ್ಟವರು, ಭಾರತದ ಸಂವಿಧಾನದ ಆರ್ಟಿಕಲ್ 14 ರ ಅಡಿಯಲ್ಲಿ ಭಾರತದ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು ಎಂದು ಪ್ರತಿಪಾದಿಸಿದರು. “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎನ್ನುವ ಮಹಾತ್ಮಾ ಜ್ಯೋತಿ ಬಾ ಫುಲೆ ಯವರ ಶಿಕ್ಷಣ ಕ್ರಾಂತಿಯನ್ನು ಮನಗಂಡ ಬಾಬಾಸಾಹೇಬರು ಅವರನ್ನೇ ಗುರುವಾಗಿ ಅಪ್ಪಿಕೊಂಡರು. ಬುದ್ಧನ ಶಾಂತಿ, ಸಹನೆ, ತಾಳ್ಮೆ, ಪ್ರೀತಿ, ಮಮತೆ, ದಯೆ, ಕರುಣೆ, ಅಹಿಂಸೆ ಎನ್ನುವ ಅಷ್ಟಾಂಗ ಮಾರ್ಗಗಳ ಮೂಲಕ ಬುದ್ಧನನ್ನು ನನ್ನ ಮೊದಲನೆಯ ಗುರುವಾಗಿ ಸ್ವೀಕರಿಸಿದರು. ಸಮಾಜದಲ್ಲಿನ ಅಸಾಮಾನೆತೆಯನ್ನು ಅರಿತು, ಧಾರ್ಮಿಕ ಶೋಷಣೆಯನ್ನು ಅನುಭವಿಸಿದ ಬಾಬಾಸಾಹೇಬರು ತನ್ನ ಕೊನೆಯ ಕಲಾಘಟ್ಟದಲ್ಲಿ  ಬೌಧ ಧಮ್ಮವನ್ನು  ಸ್ವೀಕರಿಸುತ್ತ “ನಾನು ಹಿಂದುವಾಗಿ ಹುಟ್ಟಿದ್ದೇನೆ ಆದರೆ ನಾನು ಹಿಂದುವಾಗಿ ಸಾಯಲಾರೆ”,  ಎನ್ನುವ ಮೂಲಕ ಶೋಷಿತ ಸಮುದಾಯಗಳಿಗೆ ವಿಮೋಚನೆಯ ಮಾರ್ಗವನ್ನು ತೋರಿಸಿಕೊಟ್ಟರು.

ಬಾಬಾಸಾಹೇಬರು ತನ್ನ ಜೀವತದ ಕೊನೆಯವರೆವಿಗೂ  ಈ ದೇಶದ ಶೋಷಿತ ಸಮುದಾಯಗಳ ವಿಮೋಚಣೆಗಾಗಿಯೇ ಹೋರಾಡಿದವರು, ನಿಮ್ನ ವರ್ಗಗಳ, ಶೋಷಿತ ಮಹಿಳೆಯರ ಪರವಾಗಿಯೇ ಹೋರಾಡುತ್ತಾ ಎಲ್ಲರ ವಿಮೋಚಣೆಗಾಗಿಯೇ ತನ್ನ ಜೀವನವನ್ನು ಮುಡುಪಿಟ್ಟವರು. ತನ್ನ ಜನಾಂಗವನ್ನು ಗುಲಾಮಗಿರಿಯ ಸಂಕೋಲೆಗಳಿಂದ ಮುಕ್ತಿಗೊಳಿಸಲು ಕೊನೆಯ ಕ್ಷಣದವರೆವಿಗೂ ಹೋರಾಡುತ್ತಲೇ ಬಂದರು.

ಯಾವುದೇ ಅಡ್ಡಿ ಆತಂಕಗಳು ಎದುರಾದರು  ತಮ್ಮ ಸಿದ್ಧಾಂತವನ್ನು ಯಾರೊಡನೆಯೂ ಎಂದೂ ರಾಜಿ ಮಾಡಿಕೊಂಡವರಲ್ಲ. ಯಾರ ನಡುವೆಯೂ ಕೈಯೊಡ್ಡಿ ಬೇಡಿದವರಲ್ಲ, ಇದು ಬಾಬಾಸಾಹೇಬರಲ್ಲಿ ಕಂಡಂತಹ ಸ್ವಾಭಿಮಾನದ ಬದುಕಿನ ಹೋರಾಟ ಎನ್ನಬಹುದು.  ಬಾಬಾಸಾಹೇಬರು ಭಾರತಕ್ಕೆ ನೀಡಿದ ಬಹುದೊಡ್ಡ ಆಸ್ತಿ ಎಂದರೆ ವಿದ್ಯೆ ಎನ್ನುವ ಆಯುಧ, ಅಧಿಕಾರ ಎನ್ನುವ ಅಸ್ತ್ರ, ಸ್ವಾಭಿಮಾನ ಎನ್ನುವ ಎದೆಗಾರಿಕೆ ಇವು ಎಲ್ಲರನ್ನು ಇಂದು ಒಂದು ಹಂತಕ್ಕೆ ತರಲು ಸಾಧ್ಯವಾಯಿತು.

ಬಾಬಾಸಾಹೇಬರ ವಿಚಾರಗಳ ಬಗ್ಗೆ ಇಂದು ಪ್ರತಿಯೊಬ್ಬರೂ ಮಾತನಾಡುತ್ತಾರೆ. ಅದನ್ನೇ ಬಂಡವಾಳ ಮಾಡಿಕೊಂಡು ತನ್ನ ಸ್ವಂತ ಬದುಕಿನ ಅಭಿವೃದ್ಧಿಯನ್ನು ಕಾಣಲು ಹೊರಟಿದ್ದಾರೆ. ಕೆಲವೊಮ್ಮೆ ಅವರ ವಿಚಾರಗಳನ್ನು ಸ್ವಲ್ಪ ಪಕ್ಕಕ್ಕಿಟ್ಟು ಸ್ವಾರ್ಥದ ಬದುಕನ್ನು ಕಟ್ಟಿಕೊಳ್ಳುವ ಸಮಾಜವನ್ನು  ಸೃಷ್ಠಿಮಾಡಿಕೊಂಡಿದ್ದಾರೆ. ಒಂದು ವೇಳೆ ಬಾಬಾಸಾಹೇಬರು ಇಂತಹ ಸ್ಥಿತಿಯಲ್ಲಿರುವ ಜನರನ್ನು ನೋಡಿದಿದ್ದರೆ, ನಾನೇ ತಪ್ಪು ಮಾಡಿದೆನೇನೋ ಎಂದುಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಬಾಬಾಸಾಹೇಬರನ್ನು ಅವರ ಸಿದ್ಧಾಂತಗಳನ್ನು ತಿರುಚಿ ತಮ್ಮ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುತ್ತಿದ್ದಾರೆ.

ಆದರೆ ಬಾಬಾಸಾಹೇಬರ ಸಿದ್ಧಾಂತಗಳನ್ನು ಚೆನ್ನಾಗಿ ಅರಿತವರು, ಬಾಬಾಸಾಹೇಬರಂತೆ ಸಮಾಜದಲ್ಲಿ ನೋವುಂಡವರು ಅವರ ಸಿದ್ಧಾಂತಗಳ ಬಗ್ಗೆ ಮಾತನಾಡುತ್ತಿದ್ದರೆ, ಅದಕ್ಕೆ  ಚಪ್ಪಾಳೆ ತಟ್ಟಿ ಆ ಮಾತನ್ನು ಸಾಮಾನ್ಯವಾಗಿ ಗಾಳಿಗೆ ತೂರಿಬಿಡುವವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅದಕ್ಕಾಗಿಯೇ ಬಾಬಾಸಾಹೇಬರು ಅಂದು ಕಂಡ ಕನಸ್ಸು ಇಂದಿಗೂ ಈಡೇರದೆ ಹಾಗೆಯೇ ಉಳಿದಿದೆ.

“ನನ್ನ ಜನ ಈ ದೇಶವನ್ನು ಆಳುವ ದೊರೆಗಳಾಗಬೇಕು” ಎನ್ನುವ ಮಾತು ಇಂದು ಕ್ಲೀಷೆಯಾಗಿಬಿಟ್ಟಿದೆ. ಯಾಕೆಂದರೆ ಭಾರತದ ಪ್ರತಿಯೊಬ್ಬ ಪ್ರಜೆಗೂ ಒಂದೇ ಓಟಿನ ಹಕ್ಕು, ಈ ದೇಶದ ಪ್ರಧಾನಿಗೂ ಒಂದೇ ಓಟು, ಈ  ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಒಂದೇ ಓಟು ಎನ್ನುವ ಹಕ್ಕನ್ನು ನೀಡಿ, ಇನ್ನು ಮುಂದೆ ರಾಜನಗಬೇಕಾದವರು ರಾಣಿಯ ಹೊಟ್ಟೆಯಲ್ಲಿ ಹುಟ್ಟಬೇಕೆಗಿಲ್ಲ, ನಾನು ನೀಡಿರುವ ಮತದಾನದ ಹಕ್ಕಿನಿಂದ ಹುಟ್ಟುತ್ತಾರೆ ಎಂದು ಹೇಳಿರುವುದು. ಅಷ್ಟೇ ಅಲ್ಲದೆ ಬಾಬಾಸಾಹೇಬರು ಹೇಳಿದ ಎಜುಕೇಟ್, ಅಜಿಟೇಟ್, ಮತ್ತು ಆರ್ಗನೈಸ್ ಎನ್ನುವ ಮಾತುಗಳು ಕ್ರಿಯಾಪದಗಳಾಗಿದ್ದು, ನಿರಂತರ ಕ್ರಿಯೆಯಿಂದ ಕೂಡಿರಲಿ, ದೇಶದ ಅಭಿವೃದ್ಧಿಯ ಸಂಕೇತವಾಗಲಿ ಎನ್ನುವ ಮಾತುಗಳು, ಕಾಲಕ್ರಮೇಣ  ಶಿಕ್ಷಣ, ಸಂಘಟನೆ, ಹೋರಾಟ  ಪದಗಳಾಗಿ ರೂಪಾಂತರಗೊಂಡು, ಬಾಬಾಸಾಹೇಬರ ಸಿದ್ದಂತಾಗಳನ್ನೇ ದಿಕ್ಕು ತಪ್ಪಿಸಿಬಿಟ್ಟವು. ಕಾಲಕ್ರಮೇಣ ಇದೇ ಸೂತ್ರಗಳು, ಜಾಗೃತರಾಗಿ, ಚಿಂತಿಸಿ, ಒಂದಾಗಿ ಎಂದು ಕಾಲಕ್ಕೆ ತಕ್ಕಂತೆ ಬದಲಾದರು ಅವುಗಳು ಕೇವಲ ವೇದಿಕೆಗೆ ಸೀಮಿತವಾಗಿಬಿಟ್ಟಿವೆ.

ನೀನು ಬದುಕಿದರೆ ಸ್ವಾಭಿಮಾನಿಯಾಗಿ ಬದುಕು ಎನ್ನುವ ಬಾಬಾಸಾಹೇಬರ ಮಾತು ಕೇವಲ ಶಬ್ಧದ ರೂಪದಲ್ಲಿ ಕುಳಿತು ಮಾನಸಿಕ ಗುಲಾಮನನ್ನಾಗಿಸಿದೆ.

ಅಂದಿನ ಕಾಲದ ದೈಹಿಕ ಗುಲಾಮಗಿರಿಯನ್ನು ಕಿತ್ತೊಗೆಯಲು ಶ್ರಮಿಸಿದ ಬಾಬಾಸಾಹೇಬರ ಶ್ರಮಕ್ಕೆ ಇಂದು ಮಾನಸಿಕ ಗುಲಾಮಗಿರಿತನ ಎನ್ನುವ ಸೋಂಕು ತಗುಲಿ ಮತ್ತೆ ಇನ್ನೊಬ್ಬರ ನೆರಳಲ್ಲಿಯೇ ಬದುಕುವ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಹಾಗಾದರೆ ಬಾಬಾಸಾಹೇಬರ ಸಂವಿಧಾನದ ಮೂಲ ಆಶಯಗಳು ಈಡೇರಿವೆಯೇ, ಎಲ್ಲರಿಗೂ ಈ ಸಮಾಜದಲ್ಲಿ ಸಮಾನತೆ ದೊರೆತಿದೆಯೇ? ಸ್ತ್ರೀ ಸ್ವಾತಂತ್ರ್ಯ ಹಕ್ಕುಗಳು ಜಾರಿಯಾಗಿವೆಯೇ, ವಾಕ್ ಸ್ವತಂತ್ಯ ಎನ್ನುವುದು ಎಷ್ಟರ ಮಟ್ಟಿಗೆ ತನ್ನ ಪ್ರಭಲತೆಯನ್ನು ಸಾಧಿಸಿದೆ ಎನ್ನುವ ಪ್ರಶ್ನೆಗಳು ನಮ್ಮ ಮುಂದಿವೆ.

ಬಾಬಾಸಾಹೇಬರು ತನ್ನ ಕೊನೆಯ ದಿನಗಳಲ್ಲಿ ಹೇಳಿದಂತೆ, ಜಾತಿ ವ್ಯವಸ್ಥೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಅಸಮಾನತೆಗಳು ಈ ಸಮಾಜಕ್ಕೆ ಅಂಟಿರುವ ಬಹು ದೊಡ್ಡ ರೋಗಗಳು, ಅವುಗಳನ್ನು ತೊಡೆದುಹಾಕಲು ಎಲ್ಲರಿಗೂ ಸಮಾನವಾದ ಸಂವಿಧಾನವನ್ನು ನಾನು ನಿಮಗೆ ಕೊಟ್ಟಿದ್ದೇನೆ, ಅದನ್ನು ಜಾರಿ ಮಾಡುವ ಜಾಗದಲ್ಲಿ ನೀವುಗಳಿರಬೇಕೆ ಹೊರತು. ಸಂವಿಧಾನದ ವಿರೋಧಿಗಳು, ಜಾತ ಪದ್ದತಿಯನ್ನು ಆಚರಿಸುವವರು ಇರಬಾರದು ಎಂದರು. ಆದರೇ ಇಂದಿಗೂ ನಮ್ಮ ದುರದೃಷ್ಟಕರ ಸಂಗತಿ ಎಂದರೆ ಇವತ್ತಿಗೂ ಸಂವಿಧಾನ ವಿರೋಧಿಗಳೇ ಸಂವಿಧಾನವನ್ನು ಜಾರಿ ಮಾಡುವ ಜಾಗದಲ್ಲಿ ಕುಳಿತಿದ್ದಾರೆ. ಇದು ಈ ದೇಶದ ನಿಜವಾದ ದುರಂತದ ಸ್ಥಿತಿ.

ನಾನು ಯಾವ ಜನರಿಗಾಗಿ ಅವರ ಹಕ್ಕುಗಳು ಮತ್ತು ಸಮಾನತೆಗಾಗಿ ಹೋರಾಡಿದೆನೋ ಅವರೇ ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಾದರು. ನಾನು ಯಾರ ವಿರುದ್ಧ, ಯಾವ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದೆನೋ ಅವರು ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಅದೇ ವ್ಯವಸ್ಥೆಯನ್ನೇ ಯತಾವಥಾಗಿ ಜಾರಿಮಾಡುತ್ತಿದ್ದಾರೆ. ಆದರೆ ಎಂದು ನನ್ನ ಜನರಿಗೆ ನಾನು ಕೊಟ್ಟ ಸಂವಿಧಾನದ ಹಕ್ಕು ಮತ್ತು ಅಧಿಕಾರದ ಅರಿವಾಗುತ್ತದೋ ಅಂದು ಸಂವಿಧಾನ ವಿರೋಧಿಗಳು ಬೀದಿಗಿಳಿದು ಬಾಯಿ ಬಾಯಿ ಬಡಿದುಕೊಳ್ಳುತ್ತಾರೆ ಎಂದಿದ್ದರು.

ಬಂಧುಗಳೇ ಬಾಬಾಸಾಹೇಬರ ಕನಸುಗಳು ನನಸಾಗಬೇಕಿದೆ, ನಿಮ್ಮ ನಿಮ್ಮಗಳ ಸ್ವಾರ್ಥಕ್ಕೆ ಬಾಬಾಸಾಹೇಬರನ್ನು, ಅವರ ಸಿದ್ಧಾಂತವನ್ನು ಬಲಿತೆಗೆದುಕೊಳ್ಳಬೇಡಿ. ಬಾಬಾಸಾಹೇಬರು ಹುಟ್ಟಿ ಇಂದಿಗೆ ಸುಮಾರು 134 ವರ್ಷಗಳು ಕಳೆದಿವೆ. ಆದರೂ ಇಂದಿಗೂ ಜಾತಿಯ ಶೋಷಣೆ, ಲೈಂಗಿಕ ಶೋಷಣೆ, ಧರ್ಮದ ಶೋಷಣೆ ನಡೆಯುತ್ತಲೇ ಇವೆ. ಇವೆಲ್ಲದಕ್ಕೂ ಅಂಬೇಡ್ಕರ್ ಎನ್ನುವ ಔಷದವೇ ಮದ್ದಾಗಬೇಕು.

ಜಾತಿಯ ನೋವುಂಡವನು ಜಾತಿಯ ನೋವಿನ  ಬಗ್ಗೆ ಮಾತನಾಡಿದಾಗ ನಮಗೆ ಅದರ ಬೆಲೆ ಗೊತ್ತಾಗುತ್ತಿಲ್ಲ, ಆದರೇ ಜಾತಿಯಲ್ಲಿ ಶ್ರೇಷ್ಠ ಎನಿಸಿಕೊಂಡವರು ಬಾಬಾಸಾಹೇಬರ ಅವರ ಸಿದ್ಧಾಂತಗಳ ಬಗ್ಗೆ ಮಾತನಾಡಿದರೆ, ಅಥವಾ  ಸಣ್ಣ ಪುಟ್ಟ ಬರಹಗಳನ್ನು ಬರೆದರೆ ನಾವು ಅವರನ್ನು ಎದೆಗವುಚ್ಚಿಕೊಂಡು ಪೂಜಿಸುತ್ತೇವೆ. ಇಂತಹ ಆಧುನಿಕ ಮಾನಸಿಕ ಗುಲಾಮಗಿರಿತನವನ್ನು ಜಾತಿಯ ನೋವುಂಡವರು ಬಿಡಬೇಕಾಗಿದೆ.  ಬಾಬಾಸಾಹೇಬರು ಜಾತಿಯನ್ನು ವ್ಯವಸ್ಥೆಯನ್ನು ಎಂದು ವಿರೋಧಿಸಿದವರಲ್ಲ, ಆದರೆ ಜಾತಿಯಲ್ಲಿ ಶ್ರೇಷ್ಠ ಕನಿಷ್ಠ ಎನ್ನುವ ತಾರತಮ್ಯವನ್ನು ವಿರೋಧಿಸಿರು. ಎಂದು ಎಲ್ಲಾ ಜಾತಿಗಳು ಆರ್ಥಿಕ, ಸಾಮಜಿಕ, ಶೈಕ್ಷಣಿಕ, ಧಾರ್ಮಿಕ ಸಮಾನತೆಯನ್ನು ಪಡೆಯುತ್ತವೆಯೋ ಅಂದು ಜಾತಿ ಎನ್ನುವುದು ಮುಖ್ಯವಾಗುವುದಿಲ್ಲ ಎಂದರು.

ಎಲ್ಲರೂ ಬಾಬಾಸಾಹೇಬರನ್ನು, ಅವರ ಸಿದ್ದಾಂತಗಳನ್ನು ಅನುಸರಿಸೋಣ.
ಬಾಬಾಸಾಹೇಬ್ ನಿಮ್ಮನ್ನು ಪಡೆದ ನಾವೇ ಧನ್ಯರು
ಜೈ ಭೀಮ್, ಜೈ ಬಾಬಾಸಾಹೇಬ್ ಡಾ. ಅಂಬೇಡ್ಕರ್


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version