ರಷ್ಯಾ ದಾಳಿ: ಕುಡಿಯಲು ನೀರು ಸಿಗದೆ ಜೀವ ಬಿಟ್ಟ ಅನಾಥ ಬಾಲಕಿ - Mahanayaka
1:05 AM Monday 16 - September 2024

ರಷ್ಯಾ ದಾಳಿ: ಕುಡಿಯಲು ನೀರು ಸಿಗದೆ ಜೀವ ಬಿಟ್ಟ ಅನಾಥ ಬಾಲಕಿ

ukren war
09/03/2022

ಕೀವ್‌: ಉಕ್ರೇನ್​ ನಲ್ಲಿ ಯುದ್ಧ ಭೀಕರತೆ ಹೆಚ್ಚುತ್ತಿದೆ. ರಷ್ಯಾ ಯುದ್ಧ ನಿಯಮಗಳನ್ನು ಮೀರುತ್ತಿದೆ. ಈ ಮಧ್ಯೆ, ಮರಿಯುಪೋಲ್ ​​ನಲ್ಲಿ ಆರು ವರ್ಷದ ಬಾಲಕಿಯೊಬ್ಬಳು ಕುಡಿಯಲು ನೀರು ಸಿಗದೆ, ನಿರ್ಜಲೀಕರಣಕ್ಕೆ ಒಳಗಾಗಿ ಮೃತಪಟ್ಟಿದ್ದಾಳೆ.

ರಷ್ಯಾ ಸೇನೆ, ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ ಎಂದು ಉಕ್ರೇನ್​ ಆರೋಪ ಮಾಡುತ್ತಲೇ ಬಂದಿದೆ. ಬಾಲಕಿಯ ಸಾವಿಗೂ ರಷ್ಯಾ ಸೇನೆ ನಡೆಸುತ್ತಿರುವ ದಾಳಿಯೇ ಕಾರಣ ಎಂದು ಉಕ್ರೇನ್​ ಆಡಳಿತ ಹೇಳಿದೆ. ರಷ್ಯಾದ ಆಕ್ರಮಣ ತೀವ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಮರಿಯುಪೋಲ್​ ಕೂಡ ಒಂದು. ಅಲ್ಲಿನ ಕಟ್ಟಡವೊಂದರ ಮೇಲೆ ರಷ್ಯಾ ದಾಳಿ ನಡೆಸಿತ್ತು. ಆಗ ಈ ಪುಟ್ಟ ಬಾಲಕಿಯ ತಾಯಿ ಮೃತಪಟ್ಟಿದ್ದಾರೆ. ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ ಹುಡುಗಿ, ನಿರ್ಜಲೀಕರಣಕ್ಕೆ ಒಳಗಾಗಿ ಸಾವನ್ನಪ್ಪಿದ್ದಾಳೆ ಎಂದು ಉಕ್ರೇನ್​ ಆರೋಪಿಸಿದೆ.

ಉಕ್ರೇನ್​ ಮೇಲೆ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದ ದಿನ ರಷ್ಯಾ ಅಧ್ಯಕ್ಷ ಪುಟಿನ್, ನಮಗೆ ಆ ದೇಶವನ್ನು ವಶಪಡಿಸಿಕೊಳ್ಳುವ ಇರಾದೆಯಿಲ್ಲ. ನಾಗರಿಕರ ಹತ್ಯೆಯೂ ನಮ್ಮ ಉದ್ದೇಶವಲ್ಲ. ಉಕ್ರೇನ್​ ಸೇನೆಯನ್ನು ಹಿಮ್ಮೆಟ್ಟಿಸುವುದಷ್ಟೇ ನಮ್ಮ ಗುರಿ ಎಂದು ಹೇಳಿದ್ದರು. ಆದರೆ ಆ ಮಾತುಗಳನ್ನು ಮಾಸ್ಕೋ ಉಳಿಸಿಕೊಳ್ಳುತ್ತಿಲ್ಲ ಎಂದು ಉಕ್ರೇನ್​ ನಿರಂತರವಾಗಿ ಆರೋಪ ಮಾಡುತ್ತಲೇ ಬಂದಿದೆ. ಈಗಾಗಲೇ ಉಕ್ರೇನ್​ನಲ್ಲಿ ಹಲವು ನಾಗರಿಕರು ಮೃತಪಟ್ಟಿದ್ದು ವರದಿಯಾಗಿದೆ. ರಷ್ಯಾ ಉಕ್ರೇನ್​​ ನಲ್ಲಿ ಯುದ್ಧ ಅಪರಾಧಗಳನ್ನು ಮಾಡುತ್ತಿದೆ ಎಂದು ಅಂತಾರಾಷ್ಟ್ರೀಯ ಕೋರ್ಟ್​ಗೆ ದೂರು ಕೂಡ ನೀಡಲಾಗಿತ್ತು.


Provided by

ಮರಿಯುಪೋಲ್​​ನಲ್ಲಿ ರಷ್ಯಾ ಸೇನೆ ಬಾಂಬ್​, ಶೆಲ್ಲಿಂಗ್ ದಾಳಿ ನಡೆಸಿದೆ. ಬಾಲಕಿ ನೀರಿಲ್ಲದೆ ಮೃತಪಟ್ಟ ಬಗ್ಗೆ ಪ್ರತಿಕ್ರಿಯೆ ನೀಡಿದ ಅಲ್ಲಿನ ಮೇಯರ್​ ವಾಡಿಮ್ ಬೊಯಿಚೆಂಕೊ, ಆ ಪುಟ್ಟ ಹುಡುಗಿ ಏಕಾಂಗಿಯಾಗಿ ಎಷ್ಟು ಸಂಕಟಪಟ್ಟಳೋ? ಜೀವ ಉಳಿಸಿಕೊಳ್ಳಲು ಅದೆಷ್ಟು ಹೋರಾಟ ಮಾಡಿದಳೋ ಕಲ್ಪಿಸಿಕೊಳ್ಳಲೂ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಅಮ್ಮನನ್ನು ಕಳೆದುಕೊಂಡು, ತಾನು ಸಾಯುವ ಕೊನೇ ಕ್ಷಣದಲ್ಲಿ ಒಬ್ಬಳೇ ಇದ್ದಳು. ಮರಿಯುಪೋಲ್​ನಲ್ಲಿ ಈಗಾಗಲೇ ಇಂಥ ಘಟನೆಗಳು ಹಲವು ಆಗಿವೆ. ಕಳೆದ ಎಂಟು ದಿನಗಳಿಂದ ಇಲ್ಲಿನ ಜನರು ಪರದಾಡುತ್ತಿದ್ದಾರೆ ಎಂದೂ ನೋವು ತೋಡಿಕೊಂಡಿದ್ದಾರೆ.

ಮಗುವಿನ ಸಾವಿನ ಬಗ್ಗೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರೂ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇಂಥ 21ನೇ ಶತಮಾನದಲ್ಲಿ ಒಂದು ಹೀಗೆ, ಬಾಯಾರಿಕೆಯಿಂದ, ನೀರಿಲ್ಲದೆ ಸಾಯುತ್ತದೆ ಎಂಬುದನ್ನು ನಿರೀಕ್ಷೆ ಮಾಡಲೂ ಸಾಧ್ಯವಿಲ್ಲ ಎಂದಿದ್ದಾರೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಾಜಿಗಳು ಆಕ್ರಮಣ ಮಾಡಿದಾಗ ಏನೆಲ್ಲ ಕಷ್ಟ ಎದುರಾಗಿತ್ತೋ, ಈಗ ರಷ್ಯಾ ಆಕ್ರಮಣ ಮಾಡಿದ ಸಂದರ್ಭದಲ್ಲಿ ಉಕ್ರೇನ್ ​ನ ಹಲವು ನಗರಗಳಲ್ಲಿ ಅಂಥದ್ದೇ ಕಷ್ಟ ಬಂದಿದೆ ಎಂದು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಷ್ಯಾದಲ್ಲಿ ಮೆಕ್‌ ಡೊನಲ್ಡ್‌, ಪೆಪ್ಸಿ, ಕೊಕಾ-ಕೊಲಾ ಕಂಪೆನಿಗಳಿಂದ ವಹಿವಾಟು ಸ್ಥಗಿತ

ರಷ್ಯಾದ ತೈಲ, ಅನಿಲ ಆಮದುಗಳ ಮೇಲೆ ನಿಷೇಧ ಘೋಷಿಸಿದ ಅಮೆರಿಕ : ಜೋ ಬೈಡನ್

ಮೊದಲ ಮಹಿಳಾ ಅಂಬುಲೆನ್ಸ್ ಚಾಲಕಿಯಾಗಿ ಪಿ.ಜಿ.ದೀಪಾಮೋಲ್

ಯುವತಿಯ ವಿಚಾರಕ್ಕೆ ಯುವಕನ ಬರ್ಬರ ಹತ್ಯೆ

ಉಕ್ರೇನ್​ ಗೆ ನ್ಯಾಟೋ ಸದಸ್ಯತ್ವ ನೀಡುವಂತೆ ಇನ್ನು ಮುಂದೆ ಒತ್ತಾಯಿಸುವುದಿಲ್ಲ; ​ ಝೆಲೆನ್ಸ್ಕಿ ನಿರ್ಧಾರ

 

ಇತ್ತೀಚಿನ ಸುದ್ದಿ