ಲಾಕ್ ಡೌನ್ ಮುಂದುವರಿಯುತ್ತಾ, ಇಲ್ವಾ? | ಎಷ್ಟು ಹೊತ್ತಿಗೆ ಮಾಹಿತಿ ಸಿಗುತ್ತೆ ಗೊತ್ತಾ?
ಬೆಂಗಳೂರು: ಸರ್ಕಾರ ಜಾರಿ ಮಾಡಿರುವ ವಿಕೆಂಡ್ ಕರ್ಫ್ಯೂ ನಾಳೆಗೆ ಮುಗಿಯುತ್ತಾ? ಅಥವಾ ಸರ್ಕಾರ ಈ ಕರ್ಫ್ಯೂವನ್ನೇ ಮುಂದುವರಿಸಿ ಸಂಪೂರ್ಣ ಲಾಕ್ ಡೌನ್ ಮಾಡುತ್ತಾ? ಎನ್ನುವ ಗೊಂದಲಗಳು ಸದ್ಯ ರಾಜ್ಯಾದ್ಯಂತ ಮೂಡಿವೆ.
ಕೇಂದ್ರ ಸಚಿವ ಸದಾನಂದ ಗೌಡ ಅವರು ಕರ್ಫ್ಯೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಂದು ಹೇಳಿದ್ದರು. ಆದರೆ ಇತ್ತ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕರ್ಫ್ಯೂ ಮುಂದುವರಿಯುವ ಯಾವುದೇ ಪ್ರಸ್ತಾಪಗಳಿಲ್ಲ ಎಂದು ಹೇಳಿದ್ದಾರೆ.
ಕರ್ಫ್ಯೂ ಮುಂದುವರಿಯಬಹುದು ಎನ್ನುವ ಅನುಮಾನಗಳು ಜನಸಾಮಾನ್ಯರಲ್ಲಿ ಕೂಡ ಮೂಡಿದೆ. ಇದೇ ಸಂದರ್ಭದಲ್ಲಿ ಈಗ ಬಂದಿರುವ ಮಾಹಿತಿಯ ಪ್ರಕಾರ ನಾಳೆ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವರೊಂದಿಗೆ ಸಂಪುಟ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ರಾಜ್ಯ ಸರ್ಕಾರವು ಮುಂದಿನ ಹಂತದಲ್ಲಿ ರಾಜ್ಯದಲ್ಲಿ ಕೊರೊನಾ ತಡೆಗೆ ಏನೇನು ಕ್ರಮಗಳನ್ನು ಜಾರಿಗೊಳಿಸಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ತಜ್ಞರು ಈ ಹಿಂದೆಯೂ ಲಾಕ್ ಡೌನ್ ಗೆ ಸಲಹೆ ನೀಡಿದ್ದರು. ಆದರೆ ಸಿಎಂ ಯಡಿಯೂರಪ್ಪ ಅವರು ಲಾಕ್ ಡೌನ್ ಗೆ ಒಲವು ವ್ಯಕ್ತಪಡಿಸಿರಲಿಲ್ಲ. ಲಾಕ್ ಡೌನ್ ನಿಂದ ಸಾರ್ವಜನಿಕರು ಬಹಳಷ್ಟು ತೊಂದರೆಗೀಡಾಗಲಿದ್ದಾರೆ. ಹಾಗಾಗಿ ಸಾರ್ವಜನಿಕ ಸ್ಥಳದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು. ನಗರ ಪ್ರದೇಶದಲ್ಲಿ ಹೆಚ್ಚು ಜನ ಸೇರದಂತೆ ಮಾಡಿ, ಉಳಿದ ಪ್ರದೇಶದಲ್ಲಿ ಸಡಿಲ ಲಾಕ್ ಡೌನ್ ಮಾಡುವುದು ಉತ್ತಮ. ಕೂಲಿ ಕಾರ್ಮಿಕರು ಸೇರಿದಂತೆ ಬಿಪಿಎಲ್,ಅಂತ್ಯೋದಯ ಕಾರ್ಡ್ ಹೊಂದಿರುವ ವರ್ಗಕ್ಕೆ ಸೇರಿದ ಕುಟುಂಬಗಳು ಲಾಕ್ ಡೌನ್ ಗೆ ಬಲಿಪಶು ಆಗಬಾರದು. ಸರ್ಕಾರ ಕಾರ್ಮಿಕ ವರ್ಗ ಮೊದಲ ಆದ್ಯತೆಯನ್ನು ನೀಡಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ.