10 ದಿನಗಳ ಕಾಲ ಲಾಕ್ ಡೌನ್ ಆಗುತ್ತಾ? | ತಜ್ಞರ ಸಭೆಯಲ್ಲಿ ಏನೇನು ನಡೆಯಿತು?

ಬೆಂಗಳೂರು: ಕೊವಿಡ್ 19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಾಥಮಿಕ ಹಂತದಲ್ಲಿ 10 ದಿನಗಳ ಕಾಲ ಲಾಕ್ ಡೌನ್ ಜಾರಿ ಮಾಡುವುದು ಸೂಕ್ತ ಎಂದು ತಜ್ಞರ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.
ವಿಧಾನಸೌಧದಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ತುರ್ತು ಸಭೆ ನಡೆದಿದ್ದು, ಈ ಸಭೆಯಲ್ಲಿ ಈ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ 10 ದಿನಗಳ ಲಾಕ್ ಡೌನ್ ಮಾಡುವುದು ಉತ್ತಮ. ಬಳಿಕ ಫಲಿತಾಂಶ ನೋಡಿಕೊಂಡು ಸೋಂಕು ಹೆಚ್ಚು ಇರುವ ಜಿಲ್ಲೆಗಳಿಗೆ ಲಾಕ್ ಡೌನ್ ವಿಸ್ತರಿಸುವುದು ಸೂಕ್ತ ಎಂದು ಸಭೆಯಲ್ಲಿ ಸಚಿವ ಸುಧಾಕರ್ ಗೆ ತಜ್ಞರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ 20 ದಿನಗಳಿಂದ ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಒಟ್ಟು ಸೋಂಕಿನ ಪ್ರಕರಣಗಳಲ್ಲಿ ಶೇ.80ರಿಂದ 85ರಷ್ಟು ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಪತ್ತೆಯಾಗುತ್ತಿದೆ. ಹೀಗಾಗಿ ಸರ್ಕಾರ ಲಾಕ್ಡೌನ್ ಮಾಡುವುದು ಸೂಕ್ತ ಎಂದು ತಜ್ಞರ ಸಲಹಾ ಸಮಿತಿ ಸದಸ್ಯರಲ್ಲೊಬ್ಬರಾದ ಡಾ.ಗಿರಿಧರ್ ಬಾಬು ಮನವಿ ಮಾಡಿದರು.
ಲಾಕ್ ಡೌನ್ ಜಾರಿಯನ್ನು ಸಚಿವ ಸುಧಾಕರ್ ಅವರು ಒಪ್ಪಲ್ಲಿಲ್ಲ ಎಂದು ಹೇಳಲಾಗಿದೆ. ಇದರ ಬದಲು ಬೇರೆ ಏನಾದರೂ ಮಾರ್ಗಗಳಿದ್ದರೆ ತಿಳಿಸಿ ಎಂದು ಕೇಳಿದ್ದಾರೆ. ಯಡಿಯೂರಪ್ಪ ಸುತಾರಾಂ ಒಪ್ಪುತ್ತಿಲ್ಲ. ಎಲ್ಲ ಆರ್ಥಿಕ ಚಟುವಟಿಕೆಗಳು ಬಂದ್ ಆದರೆ ಸರ್ಕಾರದ ಬೊಕ್ಕಸಕ್ಕೆ ಯಾವುದೇ ರೀತಿಯ ಆದಾಯ ಬರುವುದಿಲ್ಲ. ಹೀಗಾದರೆ ಸರ್ಕಾರ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.